- ಹೊನ್ನಾಳಿ, ನ್ಯಾಮತಿ ತಾಲೂಕು ಅಹಿಂದ ಒಕ್ಕೂಟ, ಸಿದ್ದರಾಮಯ್ಯ ಅಭಿಮಾನಿಗಳಿಂದ ಆಯೋಜನೆ - - - ಕನ್ನಡಪ್ರಭ ವಾರ್ತೆ, ಹೊನ್ನಾಳಿ
"ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ " ಎಂಬ ಎಚ್ಚರಿಕೆ ಸಂದೇಶ ಮುಂದಿಟ್ಟುಕೊಂಡು ಆಗಸ್ಟ್ 23ರಂದು ಬೆಳಗ್ಗೆ 11 ಗಂಟೆಗೆ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕು ಅಹಿಂದ ಒಕ್ಕೂಟ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಮುಖಂಡರು ಭಾಗವಹಿಸಬೇಕು ಎಂದು ಅವಳಿ ತಾಲೂಕು ಕುರುಬ ಸಮಾಜ ಅಧ್ಯಕ್ಷ ನೆಲಹೊನ್ನೆ ಮೋಹನ್ ಹೇಳಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ನಿರ್ದೇಶನದಂತೆ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸಿವೆ. ಪ್ರಜಾಪ್ರಭುತ್ವ ಮಾದರಿ ಸರ್ಕಾರವನ್ನು ಕೆಡವಲು ಸಂಚು ಹೂಡಿರುವ ವಿಷಯವನ್ನು ರಾಜ್ಯದ ಜನತೆಗೆ ತಿಳಿಸಬೇಕಾಗಿದೆ ಎಂದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದ್ ಮಾತನಾಡಿ, ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದರೆ, ನಮಗೆ ರಾಜಕೀಯ ಅಧಿಕಾರ ಸಿಗುವುದಿಲ್ಲ ಎನ್ನುವ ಭಯದಿಂದ ಈ ಕುತಂತ್ರ ನಡೆಸಿದ್ದಾರೆ ಎಂದು ದೂರಿದರು.ತಾಲೂಕು ಮೈನಾರಿಟಿ ಕಮಿಟಿ ಅಧ್ಯಕ್ಷ ಚೀಲೂರು ವಾಜೀದ್ ಮಾತನಾಡಿ, ಸಿದ್ದರಾಮಯ್ಯ ಈ ದೇಶದ ಆಸ್ತಿ, ಅವರನ್ನು ಸಿ.ಎಂ. ಗಾದಿಯಲ್ಲಿ ಉಳಿಸಿಕೊಳ್ಳಲು ನಾವೆಲ್ಲರೂ ತೀರ್ಮಾನಿಸಿದ್ದು, ಅದಕ್ಕಾಗಿ ಹೋರಾಟದ ಕರೆ ನೀಡಿದ್ದೇವೆ ಎಂದರು.
ಜೈನ್ ಸಮಾಜ ಮುಖಂಡ ಕೆಪಿಸಿಸಿ ಯುವ ವಕ್ತಾರ ದರ್ಶನ್ ಬಳ್ಳೇಶ್ವರ್ ಮಾತನಾಡಿ, ಸಿದ್ದರಾಮಯ್ಯ ವಿರುದ್ಧ ಯಾವುದೇ ತನಿಖಾ ಸಂಸ್ಥೆ ವರದಿ ನೀಡಿಲ್ಲ. ಆದರೂ ರಾಜ್ಯಪಾಲರು ಸಾಂವಿಧಾನಿಕ ಹುದ್ದೆ ದುರ್ಬಳಕೆ ಮಾಡಿಕೊಂಡು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ದಿಡಗೂರು ತಮ್ಮಣ್ಣ, ಬಣಜಾರ್ ಸಮಾಜ ಮುಖಂಡ ವಸಂತ ನಾಯ್ಕ, ಛಲವಾದಿ ಸಮಾಜದ ಕುರುವ ಮಂಜುನಾಥ್, ರುದ್ರೇಶ್ ಕೊಡತಾಳ್, ಕುರುಬ ಸಮಾಜದ ಖಜಾಂಚಿ ಎಚ್.ಎ. ನರಸಿಂಹಪ್ಪ, ಕೆ.ಪುಟ್ಟಪ್ಪ, ಎಚ್.ಡಿ. ವಿಜೇಂದ್ರಪ್ಪ, ಕುಂಬಳೂರು ವಾಗೀಶ್, ಕೃಷ್ಣಪ್ಪ ಇತರರು ಇದ್ದರು.
- - - -20ಎಚ್.ಎಲ್.ಐ2: