ನಾಳೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ನಿವೃತ್ತಿ

KannadaprabhaNewsNetwork | Published : Jan 30, 2024 2:00 AM

ಸಾರಾಂಶ

‘ನನ್ನ ಮೊದಲ ಮನೆ ಆಸ್ಪತ್ರೆ, 2ನೇಯದು ಮನೆಯಾಗಿತ್ತು. ಜಯದೇವ ಆಸ್ಪತ್ರೆಯನ್ನು ಖಾಸಗಿ ಪಂಚತಾರ ಹೋಟೆಲ್ ಮಾದರಿಯಲ್ಲಿ ನಿರ್ವಹಣೆ ಮಾಡಿ ಮಾನವೀಯತೆಗೆ ಮೊದಲ ಆದ್ಯತೆ ನೀಡಿ. ಮೊದಲು ಟ್ರೀಟ್ ಮೆಂಟ್ ನಂತರ ಪೇಮೆಂಟ್ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಿದ್ದೇನೆ. ಇದುವರೆಗೆ ಹಣವಿಲ್ಲ, ಕಾರ್ಡ್ ಇಲ್ಲ ಎಂದು ಒಬ್ಬ ರೋಗಿಯನ್ನು ಚಿಕಿತ್ಸೆ ನೀಡದೆ ಹಿಂದಕ್ಕೆ ಕಳುಹಿಸಿಲ್ಲ ಎನ್ನುವುದು ಜೀವಂತ ದಂತ ಕಥೆಯಾಗಿದೆ. ಈ ಸಾಧನೆ ವೈದ್ಯಕೀಯ ಕ್ಷೇತ್ರಕ್ಕೆ ಸರ್ಕಾರಕ್ಕೆ ಗೌರವ ತರುತ್ತದೆ’ ಎನ್ನುತ್ತಾರೆ ಡಾ.ಸಿ.ಎನ್.ಮಂಜುನಾಥ್.

ಕನ್ನಡಪ್ರಭ ವಾರ್ತೆ ಮೈಸೂರುಜಯದೇವ ಆಸ್ಪತ್ರೆಯಲ್ಲಿ 17 ವರ್ಷಗಳ ಕಾಲ ನಿರ್ದೇಶಕನಾಗಿ ನನ್ನ ಸೇವೆಯನ್ನು ಸಾರ್ವಜನಿಕರಿಗೆ ಮೀಸಲಿಟ್ಟು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 2000 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಿ ದೇಶದಲ್ಲಿಯೇ ನಂಬರ್ ಒನ್ ಆಸ್ಪತ್ರೆ ಮಾಡಿದ ಹೆಮ್ಮೆ ಹಾಗೂ ತೃಪ್ತಿ ನನಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

ಜ.31ರಂದು ಸೇವೆಯಿಂದ ನಿವೃತ್ತಿಯಾಗುತ್ತಿರುವ ಅವರು, ನನ್ನ ಮೊದಲ ಮನೆ ಆಸ್ಪತ್ರೆ, 2ನೇದು ಮನೆಯಾಗಿತ್ತು. ಜಯದೇವ ಆಸ್ಪತ್ರೆಯನ್ನು ಖಾಸಗಿ ಪಂಚತಾರ ಹೋಟೆಲ್ ಮಾದರಿಯಲ್ಲಿ ನಿರ್ವಹಣೆ ಮಾಡಿ ಮಾನವೀಯತೆಗೆ ಮೊದಲ ಆದ್ಯತೆ ನೀಡಿ. ಮೊದಲು ಟ್ರೀಟ್ ಮೆಂಟ್ ನಂತರ ಪೇಮೆಂಟ್ ಎಂಬ ಧ್ಯೇಯದೊಂದಿಗೆ ಕೆಲಸ ಮಾಡಿದ್ದೇನೆ. ಇದುವರೆಗೆ ಹಣವಿಲ್ಲ, ಕಾರ್ಡ್ ಇಲ್ಲ ಎಂದು ಒಬ್ಬ ರೋಗಿಯನ್ನೂ ಚಿಕಿತ್ಸೆ ನೀಡದೆ ಹಿಂದಕ್ಕೆ ಕಳುಹಿಸಿಲ್ಲ ಎನ್ನುವುದು ಜೀವಂತ ದಂತ ಕಥೆಯಾಗಿದೆ. ಈ ಸಾಧನೆ ವೈದ್ಯಕೀಯ ಕ್ಷೇತ್ರಕ್ಕೆ ಸರ್ಕಾರಕ್ಕೆ ಗೌರವ ತರುತ್ತದೆ ಎಂದರು.

ಜಯದೇವ ಆಸ್ಪತ್ರೆ ಶಾಖೆಗಳನ್ನು ಮೈಸೂರು, ಕಲ್ಬುರ್ಗಿ, ಕೆ.ಸಿ. ಜನರಲ್ ಆಸ್ಪತ್ರೆ, ಇಎಸ್ಐ ರಾಜಾಜಿನಗರ, ಇನ್ಸ್ ಸ್ಟೋಸಿಸ್ ಬ್ಲಾಕ್ ನಿರ್ಮಿಸಿದ್ದೇವೆ. ಓಪಿಡಿಯಲ್ಲಿ ಇದುವರೆಗೆ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಲಾಗಿದೆ. 8 ಲಕ್ಷ ಜನರಿಗೆ ಆಂಜಿಯೋಪ್ಲಾಸ್ಟಿ, 55 ಲಕ್ಷ ಜನರಿಗೆ ಎಕೊ ಮಾಡಲಾಗಿದೆ. 125 ಜನ ತಜ್ಞ ವೈದ್ಯರು 40 ಜನ ಸರ್ಜನ್ ಗಳು, 40 ಜನ ಅರವಳಿಕೆ ತಜ್ಞರು, ಸಾವಿರಾರು ಜನ ಸಿಬ್ಬಂದಿಯನ್ನು ಜಯದೇವ ಸಂಸ್ಥೆ ಹೊಂದಿದ್ದು, ಉತ್ತಮ ಸೇವೆ ನೀಡುತ್ತಿದೆ ಎಂದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಂಸ್ಥೆಗೆ ಪ್ರಶಂಸೆ ಲಭಿಸಿದೆ. ದೇಶ, ವಿದೇಶಗಳಿಂದಲೂ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ನನಗೆ ಇದುವರೆಗೆ ಸಹಕರಿಸಿದ ಸರ್ಕಾರ ಹಾಗೂ ಎಲ್ಲಾ ಮುಖ್ಯಮಂತ್ರಿಗಳಿಗೂ ಧನ್ಯವಾದ. ಈಗಾಗಲೇ ಹೊಸ ನಿರ್ದೇಶಕರ ಪ್ರಕ್ರಿಯೆ ಪ್ರಾರಂಭವಾಗಿದೆ. ಉತ್ತಮ ಸೇವಾ ಮನೋಭಾವ ಇರುವ ನಿರ್ದೇಶಕರು ಸಂಸ್ಥೆಯ ಚುಕ್ಕಾಣಿ ಹಿಡಿಯಲಿ, ಬಡವರಿಗೆ ಉತ್ತಮ ಚಿಕಿತ್ಸೆ ನೀಡಲಿ ಎಂದು ಅವರು ಆಶಿಸಿದರು.

Share this article