ಹಾಸನದ ಮಹಾರಾಜ ಪಾರ್ಕಿನಿಂದ ನೂರಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳ ಹೋರಾಟ
ಶಾಸಕ ಎಚ್.ಡಿ. ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರ ದುರುಪಯೋಗಪಡಿಸಿಕೊಂಡು ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿರುವುದನ್ನು ಖಂಡಿಸಿ ಜನಪರ ಚಳುವಳಿಗಳ ಒಕ್ಕೂಟದಿಂದ ಮೇ 30 ರಂದು ಹೋರಾಟದ ನಡೆ ಹಾಸನದ ಕಡೆ ಎಂಬ ಘೋಷಣೆಯೊಂದಿಗೆ ಹಾಸನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಹಾಸನದ ಮಹಾರಾಜ ಪಾರ್ಕಿನಿಂದ ಸುಮಾರು ನೂರಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿಗಳ ಮನೆ ಹಿಂಭಾಗದ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಎದ್ದೇಳು ಕರ್ನಾಟಕ ಸಮಿತಿ ರಾಜ್ಯ ಸಂಚಾಲಕ ಕೆ.ಎಲ್. ಅಶೋಕ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಈ ಪ್ರಕರಣ ಹಾಸನ ಜಿಲ್ಲೆಯಲ್ಲಿ ಮಾತ್ರ ಅಲ್ಲ ರಾಜ್ಯ ದೇಶ ಹಾಗೂ ವಿದೇಶದಲ್ಲೂ ಕೂಡ ಸದ್ದು ಮಾಡುತ್ತಿದೆ. ಇನ್ನೊಂದು ಕಡೆ ಜೆಡಿಎಸ್ ಹಾಗೂ ಬಿಜೆಪಿ ಈ ಪ್ರಕರಣ ಮುಚ್ಚಿ ಹಾಕಲು ಎಲ್ಲಾ ರೀತಿಯ ಪ್ರಯತ್ನಗಳು ಮಾಡುತ್ತಿವೆ ಎಂದು ಆರೋಪಿಸಿದರು.
ಕೆ.ಆರ್. ನಗರದಿಂದ ಮಹಿಳೆ ಒಬ್ಬರ ಅಪಹರಣವಾದ ಬಗ್ಗೆ ಮಹಿಳೆ ಮಗ ದೂರು ನೀಡಿದ್ದಾರೆ. ಸರ್ಕಾರ ಕೂಡಲೇ ಮಹಿಳೆಗೆ ಯಾವುದೇ ತೊಂದರೆ ಆಗದ ಹಾಗೆ ಪತ್ತೆ ಹಚ್ಚಬೇಕು ಮಾತ್ರವಲ್ಲ, ಈವರೆಗೆ ನೊಂದ ಅಮಾಯಕ ಮತ್ತು ಅಸಹಾಯಕ ಮಹಿಳೆಯರ ಮಾನ ಮತ್ತು ಪ್ರಾಣ ರಾಜಕೀಯ ದಳವಾಗಬಾರದು. ಮಹಿಳೆಯರ ಖಾಸಗಿ ಗೌಪ್ಯತೆಯನ್ನು ಕಾಪಾಡಿಕೊಂಡು ಅವರಿಗೆ ಸೂಕ್ತ ಭದ್ರತೆ ನ್ಯಾಯ ಕೊಡಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕೂಡಲೇ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಸಿಲುಕಿರುವ ಈ ಎಲ್ಲಾ ಮಹಿಳೆಯರು ತಾಯಂದಿರು ಯಾವುದೇ ಕಾರಣಕ್ಕೂ ಭಯಭೀತರಾಗಬಾರದು. ಈ ದೌರ್ಜನ್ಯವನ್ನು ಏಕೆ ಅತ್ಯಾಚಾರ ಎಂದು ಕೊಳ್ಳುತ್ತೀರಿ ಕಾಮಾಂಧ ಹುಚ್ಚು ನಾಯಿ ನಿಮ್ಮನ್ನು ಕಚ್ಚಿ ಗಾಯ ಮಾಡಿದೆ ಎಂದು ಭಾವಿಸಿ, ನಿಮ್ಮ ಗಾಯದ ಚಿಕಿತ್ಸೆಗಾಗಿ ಎಲ್ಲಾ ಜೀವ ಪರ ಮನಸುಗಳು ನಿಮ್ಮಟ್ಟಿಗೆ ಇದ್ದೇವೆ. ನೀವು ಭಯಭೀತ ರಾಗಬೇಡಿ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕ ಸಂಘಟನೆ ರಾಜ್ಯ ಸಮಿತಿ ಸದಸ್ಯ ಗೌಸ್ ಮೋಹಿಯುದ್ದೀನ್, ಜಿಲ್ಲಾ ಸಂಘಟನಾ ಸಂಚಾಲಕ ಪುಟ್ಟಸ್ವಾಮಿ, ಮುಖಂಡರಾದ ಹಸನಬ್ಬ, ಶಾರದ, ಹುಣಸೇಮಕ್ಕಿ ಲಕ್ಷ್ಮಣ್, ಸುರೇಶ್ ಇದ್ದರು.ಪೋಟೋ ಫೈಲ್ ನೇಮ್ 25 ಕೆಸಿಕೆಎಂ 5