ರಂಜಾನ್‌ ನಗರದ ಮಾರ್ಕೆಟ್‌ಗಳಲ್ಲಿ ಖರ್ಜೂರ ಮಾರಾಟ ಜೋರು

KannadaprabhaNewsNetwork | Updated : Mar 30 2024, 12:59 AM IST

ಸಾರಾಂಶ

ರಂಜಾನ್‌ ಮಾಸದಲ್ಲಿ ಉಪವಾಸ ವೃತ ಆಚರಿಸುವ ಮುಸ್ಲಿಮರು ಹೆಚ್ಚು ಪೌಷ್ಟಿಕಾಂಶ ನೀಡುವ ಒಣ ಹಣ್ಣುಗಳನ್ನು ಸ್ವೀಕರಿಸುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಂಜಾನ್‌ ಹಿನ್ನೆಲೆಯಲ್ಲಿ ಶಿವಾಜಿನಗರದ ರಸೆಲ್‌ ಮಾರ್ಕೆಟ್‌ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಖರ್ಜೂರ ಸೇರಿದಂತೆ ವಿವಿಧ ಒಣಹಣ್ಣುಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, 500ಕ್ವಿಂಟಲ್‌ಗೂ ಹೆಚ್ಚು ಖರ್ಜೂರ ಮಾರಾಟವಾಗುವ ನಿರೀಕ್ಷೆಯಿದೆ.

ರಂಜಾನ್‌ ಮಾಸದಲ್ಲಿ ಉಪವಾಸ ವೃತ ಆಚರಿಸುವ ಮುಸ್ಲಿಮರು ಹೆಚ್ಚು ಪೌಷ್ಟಿಕಾಂಶ ನೀಡುವ ಒಣ ಹಣ್ಣುಗಳನ್ನು ಸ್ವೀಕರಿಸುವುದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ. ನಗರದ ಮಾರುಕಟ್ಟೆಗೆ ಸೌದಿ ಅರೇಬಿಯಾ, ಇರಾನ್‌, ಜೋರ್ಡಾನ್‌, ಬಾಗ್ದಾದ್‌, ಟ್ಯುನಿಷಿಯಾ , ದಕ್ಷಿಣ ಆಫ್ರಿಕಾ ಜೊತೆಗೆ ಈ ಬಾರಿ ಪ್ಯಾಲೇಸ್ತೇನ್‌ನಿಂದಲೂ ಖರ್ಜುರ ಬಂದಿವೆ.

ದೇಶ ವಿದೇಶದ 42ಕ್ಕೂ ಹೆಚ್ಚು ತರಹೇವಾರಿ ಖರ್ಜುರಗಳು ಮಾರಾಟವಾಗುತ್ತಿವೆ. ಅದರಲ್ಲಿ ಜಾಹೀರಿ ಖರ್ಜುರ, ಸುಕ್ರಿ, ಕಲ್ಮೀ, ಮರಿಯಮ್‌, ಅಜೂವಾ, ಮಬರೂಮ್‌, ಅಸ್ವಾದಿ ಚಾಕೂಲೇಟ್‌ ಹಾಗೂ ಮೆಡ್ಜಾಲ್‌ ಖರ್ಜುರಕ್ಕೆ ಬೇಡಿಕೆ ಹೆಚ್ಚಿದೆ. ಕೆಜಿಗೆ ಕನಿಷ್ಠ ₹ 100 ನಿಂದ ಗರಿಷ್ಠ ₹ 1600 ವರೆಗೆ ಮಾರಾಟ ಆಗುತ್ತಿವೆ.

ಕೇವಲ ಮುಸ್ಲಿಮರು ಮಾತ್ರವಲ್ಲದೆ, ಹಿಂದೂ, ಕ್ರಿಶ್ಚಿಯನ್ನರು, ಸಿಖ್ಖರು ಸೇರಿ ಎಲ್ಲ ಧರ್ಮೀಯರೂ ಮಾರುಕಟ್ಟೆಗೆ ಬಂದು ಬಗೆಬಗೆಯ ಖರ್ಜುರ ಖರೀದಿಸುತ್ತಿದ್ದಾರೆ. ಈ ಬಾರಿ 500 ಕ್ವಿಂಟಲ್‌ಗೂ ಹೆಚ್ಚು ಖರ್ಜುರ ಮಾರಾಟವಾಗುವ ನಿರೀಕ್ಷೆಯಲ್ಲಿದ್ದೇವೆ. ಅದರ ಜೊತೆಗೆ ಅಂಜೂರ ಸೇರಿದಂತೆ ಇತರ ಒಣಹಣ್ಣುಗಳೂ ಹೆಚ್ಚು ಖರೀದಿ ಅಗುತ್ತಿವೆ ಎಂದು ವ್ಯಾಪಾರಿಗಳು ಹೇಳಿದರು.

ಡ್ರೈ ಫ್ರೂಟ್ಸ್‌ದರ (ಕೆ.ಜಿ.)

ಬಾದಾಮಿ680

ಅಕ್ರೂಟ್‌400

ಗೋಡಂಬಿ800

ಪಿಸ್ತಾ950

ಒಣದ್ರಾಕ್ಷಿ280

ಒಣಖರ್ಜೂರ320ಇಸ್ರೇಲ್‌ ಖರ್ಜೂರಕ್ಕಿಲ್ಲ ಮಾರ್ಕೆಟ್‌

ರಸೆಲ್‌ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಮಹ್ಮದ್ ಇದ್ರಿಸ್‌ ಚೌಧರಿ ಮಾತನಾಡಿ, ಖರ್ಜೂರ ಮಾರಾಟ ಜೋರಾಗಿದೆ. ಇಸ್ರೇಲ್‌ ಖರ್ಜೂರ ವಹಿವಾಟು ಮಾಡಲು, ವ್ಯಾಪಾರಸ್ಥರಿಗೆ ಆಸಕ್ತಿ ಇಲ್ಲ. ಚಿಕ್ಕ ಮಕ್ಕಳು ಯುದ್ಧದಲ್ಲಿ ಕೊಲ್ಲಲ್ಪಡುತ್ತಿದ್ದಾರೆ. ಹೀಗಾಗಿ ಮುಸ್ಲಿಂ ದೇಶಗಳು ಇಸ್ರೇಲ್‌ನಲ್ಲಿ ಹೆಚ್ಚಾಗಿ ಬೆಳೆಯುವ ಮೆಡ್ಜೋಲ್‌ ಬ್ರ್ಯಾಂಡ್‌ನ ಖರ್ಜೂರ ಖರೀದಿ ಮಾಡುತ್ತಿಲ್ಲ. ಮುಸ್ಲಿಂ ದೇಶಗಳಿಂದಲೇ ಖರ್ಜೂರ ಬರುವುದರಿಂದ ನಮ್ಮಲ್ಲಿನ ಮಾರುಕಟ್ಟೆಗಳಿಗೂ ಇಸ್ರೇಲ್‌ ಖರ್ಜೂರ ಬಂದಿಲ್ಲ ಎಂದು ಹೇಳಿದರು.

Share this article