ಒಂದೂವರೆ ಲಕ್ಷ ಕುಟುಂಬ ಭೂಮಿ ಹಕ್ಕಿನಿಂದ ವಂಚಿತವಾಗುವ ಭೀತಿ: ರವೀಂದ್ರ ನಾಯ್ಕ

KannadaprabhaNewsNetwork | Published : Feb 10, 2025 1:47 AM

ಸಾರಾಂಶ

ಕಂದಾಯದ ವಿವಿಧ ಕಾನೂನಿನಲ್ಲಿ ವಸತಿ ಮತ್ತು ಸಾಗುವಳಿಗಾಗಿ ನಗರ ಮತ್ತು ಗ್ರಾಮೀಣ ಭಾಗದಿಂದ ಒಟ್ಟು ೭೩,೭೨೫ ಅರ್ಜಿಗಳು ತಿರಸ್ಕಾರವಾಗಿದೆ. ಕೇವಲ ೬,೪೮೯ ಕಂದಾಯ ಭೂಮಿ ಹಕ್ಕು ಪತ್ರ ದೊರಕಿದೆ.

ಹೊನ್ನಾವರ: ಜಿಲ್ಲೆಯಲ್ಲಿ ಕಂದಾಯ ಮತ್ತು ಅರಣ್ಯ ಭೂಮಿಯಲ್ಲಿನ ವಾಸ್ತವ್ಯ ಮತ್ತು ಸಾಗುವಳಿದಾರರ ಸುಮಾರು ೧,೫೮,೬೧೩ ಕುಟುಂಬಗಳು ಭೂಮಿ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಗಂಭೀರ ಚಿಂತನೆ ಅವಶ್ಯ ಎಂದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ತಾಲೂಕಿನ ನಾಮಧಾರಿ ಸಂಭಾಗಣ ಮಂಟಪದಲ್ಲಿ ಅರಣ್ಯವಾಸಿಗಳ ಗ್ರೀನ್ ಕಾರ್ಡ್‌ ಪ್ರಮುಖರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೂಕಂದಾಯ ಕಾಯಿದೆ ೧೯೬೪ರ ವಿವಿಧ ನಮೂನೆಯಲ್ಲಿ ಮತ್ತು ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರ್ಜಿ ಸಲ್ಲಿಸಿದ ಪ್ರಗತಿ ಪಟವನ್ನು ಪ್ರದರ್ಶಿಸಿ ಮಾತನಾಡಿದರು. ಜಿಲ್ಲೆಯು ಪ್ರಮುಖ ಐದು ಜಲ ವಿದ್ಯುತ ಯೋಜನೆ, ಕೈಗಾ ಅಣುಸ್ಥಾವರ, ಸೀಬರ್ಡ್‌, ರೈಲ್ವೆ, ಪ್ರಾಯೋಜಿತ ವಿಮಾನ ನಿಲ್ದಾಣ, ಸಿಆರ್‌ಝಡ್‌, ಅಭಿಯಾರಣ್ಯ, ಹುಲಿ ಸಂರಕ್ಷಣಾ ವಲಯ ಮುಂತಾದ ರಾಷ್ಟ್ರೀಯ ಯೋಜನೆಗಳಿಗೆ ತ್ಯಾಗ ಮಾಡಿದ ಶ್ರೀಮಂತ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಈಗ ಅರಣ್ಯ ಮತ್ತು ಕಂದಾಯ ಜಮೀನಿನಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಲಂಬಿತರಾಗಿರುವ ಒಂದುವರೆ ಲಕ್ಷಕ್ಕೂ ಮಿಕ್ಕಿ ಕುಟುಂಬಗಳು ಭೂಮಿ ಮಂಜೂರಿಗೆ ಕಾನೂನಿನಿಂದ ಅನರ್ಹತೆಗೊಂಡು ಒಕ್ಕಲೆಬ್ಬಿಸುವ ಜತೆಯಲ್ಲಿ ನಿರಾಶ್ರಿತರಾಗುವ ಭೀತಿಯನ್ನು ಎದುರಿಸುತ್ತಿರುವ ಸಂದರ್ಭ ಬಂದಿರುವುದು ವಿಷಾದಕರ ಎಂದು ಅವರು ಹೇಳಿದರು.

ಕಂದಾಯದ ವಿವಿಧ ಕಾನೂನಿನಲ್ಲಿ ವಸತಿ ಮತ್ತು ಸಾಗುವಳಿಗಾಗಿ ನಗರ ಮತ್ತು ಗ್ರಾಮೀಣ ಭಾಗದಿಂದ ಒಟ್ಟು ೭೩,೭೨೫ ಅರ್ಜಿಗಳು ತಿರಸ್ಕಾರವಾಗಿದೆ. ಕೇವಲ ೬,೪೮೯ ಕಂದಾಯ ಭೂಮಿ ಹಕ್ಕು ಪತ್ರ ದೊರಕಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೫,೮೧೯ ಅರ್ಜಿಗಳಲ್ಲಿ ೨,೮೫೨ ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ ಎಂದು ಸರ್ಕಾರಿ ದಾಖಲೆ ಉಲ್ಲೇಖಿಸಿ ಹೇಳಿದರು.

ಸಂಚಾಲಕರಾದ ಮಹೇಶ ನಾಯ್ಕ ಕಾನಕ್ಕಿ, ನಗರ ಅಧ್ಯಕ್ಷ ಸುರೇಶ ಮೇಸ್ತಾ, ಜಿಲ್ಲಾ ಸಂಚಾಲಕ ರಾಮ ಮರಾಠಿ, ಗಿರೀಶ ನಾಯ್ಕ ಚಿತ್ತಾರ, ವಿನೋದ ನಾಯ್ಕ, ದಾವುದ್, ರಫೀಕ ಪ್ರಭಾತನಗರ, ಜನಾರ್ದನ ನಾಯ್ಕ, ಗಣೇಶ ನಾಯ್ಕ, ಮಾರುತಿ ಆರ್. ನಾಯ್ಕ ಉಪಸ್ಥಿತರಿದ್ದರು.ವಿವಿಧ ಕಾನೂನಿನಲ್ಲಿ ಅರ್ಜಿ

ಭೂಕಂದಾಯ ಕಾಯಿದೆ ನಮೂನೆ ೫೭ (೧೮೪೨), ಗ್ರಾಮೀಣ (೯೬೫೧), ನಮೂನೆ ೫೩ (೨೬,೨೫೮), ನಮೂನೆ ೫೦ (೩೯,೦೧೬) ನಗರ ಅತಿಕ್ರಮಣ ೫,೩೬೮ ಕಂದಾಯ ಭೂಮಿಗೆ ಅರ್ಜಿ ಸಲ್ಲಿಸಿದ್ದರೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ೮೫,೮೧೯-ಹೀಗೆ ಒಟ್ಟು ಭೂಮಿಗಾಗಿ ೧,೬೭,೯೫೪ ಕುಟುಂಬಗಳು ಭೂಮಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿವೆ. ಅವುಗಳಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಹಕ್ಕು ದೊರಕಿರುವುದು ೯,೩೪೧ ಕುಟುಂಬಗಳಿಗೆ ಮಾತ್ರ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

Share this article