ಶಿಗ್ಗಾಂವಿ: ಪ್ರತಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಒಂದು ಕೋಟಿ ರು.ಗಳನ್ನು ದೀರ್ಘಾವಧಿ ಸಾಲವನ್ನು ನೀಡುವ ಉದ್ದೇಶವಿದ್ದು, ಅದರ ಕುರಿತು ಪ್ರಯತ್ನವನ್ನು ಮಾಡುತ್ತಿದ್ದು ಸದ್ಯದಲ್ಲಿಯೇ ಮಂಜೂರಾತಿಯನ್ನು ಮಾಡುವ ಭರವಸೆಯಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ಹೇಳಿದರು.ತಾಲೂಕಿನ ಎನ್. ಎಂ. ತಡಸ (ನೀರಲಗಿ) ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನೂತನ ಸದಸ್ಯರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿದರು. ನೀರಲಗಿ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡಕ್ಕೆ ಎರಡು ಲಕ್ಷ ರು.ಗಳ ಅನುದಾನವನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.ಈಗಾಗಲೇ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಬಡ್ಡಿ ರಹಿತವಾಗಿ ಬೆಳೆ ಸಾಲವನ್ನು ನೀಡಲಾಗುತ್ತಿದೆ. ಅಲ್ಲದೆ ಕೆಸಿಸಿ ಬ್ಯಾಂಕ್ನಿಂದಲೂ ಹಲವಾರು ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ರೈತರು ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಮೂಲಕ ಮರುಪಾವತಿಗೂ ಮುಂದಾಗಬೇಕು ಎಂದು ಮನವಿ ಮಾಡಿದರು.ಅಪೆಕ್ಸ ಬ್ಯಾಂಕ್ನಿಂದ ನಮಗೆ ಬರುವ ಸಣ್ಣ ಮೊತ್ತದ ಅನುದಾನವನ್ನು ಹೊಸೂರ, ಹುನಗುಂದ, ಸುರಪಗಟ್ಟಿ, ಇದೀಗ ನೀರಲಗಿ ಸಂಘಗಳಿಗೆ ನೀಡಲಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್.ಎಂ. ತಡಸ (ನೀರಲಗಿ) ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಹಿಂದಿನಮನಿ ವಹಿಸಿದ್ದರು. ಕೆಎಂಎಫ್ ನಿರ್ದೇಶಕ ತಿಪ್ಪಣ್ಣಾ ಸಾತಣ್ಣವರ ಮಾತನಾಡಿ, ಸಹಕಾರಿ ಸಂಘಗಳು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ಸಹಕಾರಿಯಾಗಲಿದ್ದು, ಆ ದಿಸೆಯಲ್ಲಿ ಕೆಎಂಎಫ್ ಹಾಲಿನ ಡೈರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಾರಂಭಿಸುವುದರ ಮೂಲಕ ಇದೀಗ ಹಾಲಿನ ದರದಲ್ಲಿ ಹಾಲಿನ ಗುಣಮಟ್ಟವನ್ನು ಗುರ್ತಿಸಲು ಸಂಬಂಧಿಸಿದ ಯಂತ್ರಗಳನ್ನು ಅಳವಡಿಸಲಾಗಿದೆ. ಇದೀಗ ೨೦ ದಿನಕ್ಕೆ ಹಾಲಿನ ಬಟವಡೆ ಮಾಡುತ್ತಿದ್ದು ತಿಮ್ಮಾಪೂರ ಹಾಗೂ ನೀರಲಗಿ ಗ್ರಾಮಗಳಲ್ಲಿ ಪುನರ್ ಪ್ರಾರಂಭಿಸಬೇಕು ಎಂದರು.