ಮುಳಗುಂದ: ಸಾಧನೆಗೆ ಪ್ರಯತ್ನ ಬೇಕು. ಪ್ರಯತ್ನವೇ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸತತ ಅಧ್ಯಯನ, ಪರಿಶ್ರಮ ಯಾರು ಮಾಡುತ್ತಾರೆ, ಅವರು ಯಶಸ್ಸನ್ನು ಕಾಣುತ್ತಾರೆ ಎಂದು ಆರ್.ಎನ್. ದೇಶಪಾಂಡೆ ಪದವಿ ಕಾಲೇಜಿನ ಪ್ರಾ. ಡಾ. ಆರ್.ಎಂ. ಕಲ್ಲನಗೌಡರ ತಿಳಿಸಿದರು.
ಹಾಲುಮತ ಸಮಾಜದವರು ನಿಸರ್ಗದ ಅಧ್ಯಯನಶೀಲರು. ಒಂದು ಸಮಾಜ ಜಾಗೃತಿಯಾದಲ್ಲಿ ಆ ಸಮಾಜ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂದೇಹವಿಲ್ಲ. ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬದಲಾದಂತೆ ಹುದ್ದೆಗಳು ಕಡಿತಗೊಳ್ಳುತ್ತವೆ ಎಂಬ ಭಯ ಎಲ್ಲರಲ್ಲೂ ಇರುತ್ತದೆ. ಆದರೆ, ಆ ಭಯ ಬೇಡ. ಮನುಷ್ಯನಿಲ್ಲದೆ ಯಾವುದೇ ತಂತ್ರಜ್ಞಾನ ನಡೆಯುದಿಲ್ಲ. ವಿದ್ಯಾರ್ಥಿಗಳು ಯಾವಾಗಲೂ ಕ್ರಿಯಾಶೀಲರಾಗಿರಬೇಕು ಎಂದರು.
ಗುರು- ಹಿರಿಯರ ಮಾರ್ಗದರ್ಶನದಲ್ಲಿ ನಡೆದವನು ಜೀವನದಲ್ಲಿ ಎಲ್ಲೂ ಸೋಲನ್ನು ಅನುಭವಿಸುವುದಿಲ್ಲ. ಜ್ಞಾನಕ್ಕಿಂತ ಜಗತ್ತಲ್ಲೇ ಯಾವುದು ದೊಡ್ಡದಿಲ್ಲ. ಜೀವನದಲ್ಲಿ ಮೌಲ್ಯ, ಕೌಶಲ್ಯ ಅಳವಡಿಸಿಕೊಳ್ಳಿ ಎಂದರು.ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿ, ಬೀರಲಿಂಗೇಶ್ವರ ಸೇವಾ ಸಮಿತಿ ಸಮಾಜಮುಖಿ ಕಾರ್ಯ ಹಮ್ಮಿಕೊಂಡಿದ್ದು ಶ್ಲಾಘನೀಯ. ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸಾಧನೆ ಕಡೆ ಗಮನ ಹರಿಸಿ ಅದಕ್ಕೆ ಬೇಕಾದ ಮಾರ್ಗದರ್ಶನ ಪಡೆದು ನಿರಂತರ ಕಲಿಕೆಯಲ್ಲಿ ತೊಡಗಿಸಿಕೊಂಡು ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬೇಕು ಎಂದರು.
ಈ ವೇಳೆ ನಿವೃತ್ತ ಆರ್ಟಿಒ ಅಧಿಕಾರಿ ಬಿ.ಡಿ. ಹರ್ತಿ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ಸಮಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು.