ಪದವಿ ಪ್ರದಾನ ಹಾಗೂ ರ್ಯಾಂಕ್ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟನೆ
ಎಲ್ಲೆಡೆ ಎಂಜಿನಿಯರ್ಗಳಿಗೆ ಭಾರೀ ಬೇಡಿಕೆ ಇರುವ ಹಿನ್ನೆಲೆ ಎಂಜಿನಿಯರಿಂಗ್ ಪದವಿ ಪಡೆದವರು ಕಠಿಣ ಪರಿಸ್ಥಿತಿಯಲ್ಲೂ ಕೌಶಲ್ಯಯುತ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.
ನಗರದ ಎಐಟಿ ಕಾಲೇಜಿನ ಎಸ್.ಟಿ.ಎನ್. ರಂಗಮಂದಿರದಲ್ಲಿ ಸೋಮವಾರ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ ದಿಂದ ಆಯೋಜಿಸಿದ್ಧ ಪದವಿ ಪ್ರದಾನ ಹಾಗೂ ರ್ಯಾಂಕ್ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕಲಿಕೆಯ ನಂತರ ವಿದ್ಯಾರ್ಥಿ ಜೀವನ ಸಮಾಜದಲ್ಲಿ ಇನ್ನೊಂದು ರೀತಿ ಬದಲಾವಣೆ ಆಗಲಿದೆ. ನಾಯಕತ್ವ, ಶಿಸ್ತು ಮತ್ತು ಸಮಾಜದೊಂದಿಗೆ ಆವಿಭಾವ ಸಂಬಂಧದೊಂದಿಗೆ ಸನ್ನಡತೆ ದಾರಿಯಲ್ಲಿ ಸಾಗಬೇಕು. ಭವಿಷ್ಯದಲ್ಲಿ ಉದ್ದಿಮೆ ಶಾಹಿಗಳಾಗಿ ಬೆಳವಣಿಗೆ ಹೊಂದಬೇಕು ಎಂದು ಸಲಹೆ ಮಾಡಿದರು.ವೃತ್ತಿರಂಗದ ಆರಂಭದಲ್ಲೇ ಇಂದಿನ ಯುವಜನತೆ ಅನೇಕ ಒತ್ತಡ ಎದುರಿಸುತ್ತಿವೆ. ಇದನ್ನು ಸಮರ್ಥವಾಗಿ ಎದುರಿಸುವ ಚಾಣಕ್ಯತೆ ಅವಶ್ಯಕ. ಬದುಕಿನಲ್ಲಿ ಅನಿವಾರ್ಯ ಕಷ್ಟ-ಸುಖ, ಲಾಭ-ನಷ್ಟಗಳು ಎಷ್ಟೇ ತೀವ್ರತರವಾಗಿದ್ದರೂ ಉದ್ವೇಗಕ್ಕೆ ಒಳಗಾಗದೇ ಸದಾ ಸಮಾಧಾನದಿಂದ ನಿರ್ವಹಿಸಬೇಕು ಎಂದು ತಿಳಿಸಿದರು.
ಸಮಾಜದ ಎದುರು ವಿದ್ಯಾರ್ಥಿಗಳು ಮೊದಲು ವಿನಯಶೀಲರಾಗಬೇಕು. ಜ್ಞಾನಕ್ಕೆ ಸಂಬಂಧಿಸಿದಂತೆ ಕೌಶಲ್ಯಗಳ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿ ಜೀವನದ ನಂತರ ಸಮಾಜದ ಮುಂದೆ ಯಾವುದೇ ಶಿಕ್ಷಕರು, ಪ್ರಾಂಶುಪಾಲರು ತಿದ್ದ ಲಾಗುವುದಿಲ್ಲ. ಸ್ವಯಂಪ್ರೇರಿತರಾಗಿ ಒಳ್ಳೆಯ ಬೆಳವಣಿಗೆ ಬೆಳೆಸಿಕೊಳ್ಳಬೇಕು. ನಿರ್ಲಕ್ಷಿಸಿದರೆ ಜನರಿಂದಲೇ ತೇಗಳುವಿಕೆಗೆ ಒಳಗಾಗಬೇಕಾಗುತ್ತದೆ ಎಂದರು.
ಭಾರತ ಉದ್ಯಮಶೀಲ ರಾಷ್ಟ್ರವಾಗಿ ಸಾಗುತ್ತಿದೆ. ಎಐ ತಂತ್ರಜ್ಞಾನ ಯುವಜನತೆಗೆ ಉದ್ಯಮಿಯಾಗಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಕೌಶಲ್ಯ, ಹೊಂದಾ ಣಿಕೆ ಸಾಮರ್ಥ್ಯ ಮತ್ತು ಬಲವಾದ ತಾಂತ್ರಿಕ ಅಡಿಪಾಯ ಸಂಯೋಜಿಸುವ ವೈವಿಧ್ಯಮಯ ಮಾ ನವ ಬಂಡವಾಳ ರಾಷ್ಟ್ರದ ಭವಿಷ್ಯ ಬದಲಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಆದಿಚುಂಚನಗಿರಿ ಯುನಿರ್ಸಿಟಿ ರಿಜಿಸ್ಟರ್ ಸಿ.ಕೆ.ಸುಬ್ಬರಾಯ, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಅಧಿಕಾರಿ ಸಂಗಾರೆಡ್ಡಿ ಉಪಸ್ಥಿತರಿದ್ದರು.