ಕನ್ನಡಪ್ರಭ ವಾರ್ತೆ, ತುಮಕೂರುವಿಶೇಷ ಚೇತನರು ಕೌಶಲ್ಯ ತರಬೇತಿ ಪಡೆದು ಉದ್ಯೋಗ, ಸ್ವಯಂಉದ್ಯೋಗ ಅವಲಂಬಿಸಿ ದುಡಿಮೆಯೊಂದಿಗೆ ಸ್ವಾವಲಂಬಿಯಾಗಿ ಬಾಳಬೇಕು, ಅದಕ್ಕೆ ಅಗತ್ಯ ಸಹಕಾರ, ಸಹಾಯವನ್ನು ತಮ್ಮ ಫೌಂಡೇಶನ್ನಿಂದ ಒದಗಿಸುವುದಾಗಿ ಕೆಪಿಸಿಸಿ ವಕ್ತಾರ ಹಾಗೂ ಹಾಲಪ್ಪ ಫೌಂಡೇಶನ್ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು.ನಗರದ ರೈಲ್ವೇ ಸ್ಟೇಷನ್ ರಸ್ತೆಯ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಡುಬಡವ ವಿಕಲಚೇತನರಿಗೆ ದಿನಬಳಕೆ ಪದಾರ್ಥಗಳು ಒಳಗೊಂಡ ಫುಡ್ಕಿಟ್ ವಿತರಿಸಿ ಮಾತನಾಡಿದರು.ಈ ಸ್ಪರ್ಧಾತ್ಮಕ ಬದುಕಿನಲ್ಲಿ ವಿಶೇಷ ಚೇತನರು ಯಾರ ಮೇಲೂ ಅವಲಂಬಿತರಾಗಬೇಡಿ, ತಮ್ಮ ಆಸಕ್ತ ಕ್ಷೇತ್ರದಲ್ಲಿ ಕೌಶಲ್ಯತೆಯ ತರಬೇತಿ ಪಡೆದು ಪರಿಣತರಾಗಿ ಸಮರ್ಥರಾಗಿ ವೃತ್ತಿ, ವ್ಯವಹಾರ ಆರಂಭಿಸಿದರೆ ಸ್ವಾಭಿಮಾನದಿಂದ ತಮ್ಮ ಕಾಲ ಮೇಲೆ ತಾವು ನಿಂತು ಬದುಕು ಕಟ್ಟಿಕೊಳ್ಳಲು ಅವಕಾಶವಿದೆ ಎಂದರು. ತುಮಕೂರು ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ ಸಂಸ್ಥೆಯಿಂದ ಏನೇನು ಸಹಕಾರ ನೀಡಲು ಸಾಧ್ಯವೋ ಅದೆಲ್ಲವನ್ನೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಗೆ ನೀಡುತ್ತದೆ ಎಂಬ ಭರವಸೆ ನೀಡಿದರು.
ಸಾಹಿತಿ, ಉಪನ್ಯಾಸಕ ಡಾ. ನಾಗರಾಜು ಮಾತನಾಡಿ, ವಿಶೇಷ ಚೇತನರಿಗೆ ಸಹಾಯವಾಗುವ ಸರ್ಕಾರದ ಹಲವಾರು ಯೋಜನೆಗಳಿವೆ, ಟ್ರಸ್ಟ್ ನವರು ಯೋಜನೆಗಳನ್ನು ವಿಶೇಷ ಚೇತನರಿಗೆ ಪರಿಚಯಿಸಿ ಅವುಗಳನ್ನು ಬಳಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ಮಾಡಿದರು. ನ್ಯಾಷನಲ್ ಪ್ಯಾರಾ ಅಥ್ಲೆಟಿಕ್ ಮತ್ತು ಖೇಲೋ ಇಂಡಿಯಾ ಪ್ಯಾರಾ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಶಾಟ್ಪುಟ್ನಲ್ಲಿ ಎರಡು ಚಿನ್ನದ ಪದಕ ಪಡೆದ ಡಿ.ಹೆಚ್.ನಿವೇದಿತ ಅವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು.ಸಿಐಟಿಯು ರಾಜ್ಯ ಕಾರ್ಯದರ್ಶಿ ಸೈಯದ್ ಮುಜೀಬ್ ಅಹ್ಮದ್, ಟ್ರಸ್ಟ್ಅಧ್ಯಕ್ಷ ಮುರುಗೇಶ್, ಉಪಾಧ್ಯಕ್ಷೆಜಿ.ಯಶೋಧ, ಕಾರ್ಯದರ್ಶಿ ಎಸ್.ಬಾಬು, ನಿರ್ದೇಶಕರಾದ ಶಬ್ಬೀರ್ ಅಹ್ಮದ್, ಜಿ.ರೋಜಾ ಮತ್ತಿತರರು ಭಾಗವಹಿಸಿದ್ದರು.