ಕನ್ನಡಪ್ರಭ ವಾರ್ತೆ ಐಗಳಿಪೂರ್ವಜರು ಪುಂಡಿಪಲ್ಲೆ, ಶೇಂಗಾ ಚಟ್ನಿ, ಬೆಣ್ಣೆ, ತಿಂದು ಆರೋಗ್ಯವಂತರಾಗಿದ್ದರು. ಜತೆಗೆ ಶತಕ ವರ್ಷ ಸುಂದರ ಬದುಕನ್ನು ಕಟ್ಟಿಕೊಂಡಿದ್ದರು. ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. 21ನೇ ಶತಮಾನದಲ್ಲಿ ಈಗ ಬೇಕರಿ ಅಂಗಡಿಯ ಪದಾರ್ಥ ತಿಂದು ಚಿಕ್ಕ ವಯಸ್ಸಿನಲ್ಲಿ ಸೊಂಟುಬಾಗಿ ಶರೀರ ಸಂಪತ್ತು ಕಳೆದುಕೊಳ್ಳುತ್ತಿದ್ದಾರೆ. ಅಲ್ಲದೇ ಆಯಸ್ಸು ಸಹ ಕಮ್ಮಿಯಾಗಿದೆ ಎಂದು ಕಕಮರಿಯ ಆತ್ಮಾರಾಮ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸಮೀಪದ ರಾಮತೀರ್ಥ ಗ್ರಾಮದ ಶ್ರೀರಾಮ ಕುಟೀರದಲ್ಲಿ 5 ದಿನ ನಿಧಿ ಜ್ಞಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಹಿರಿಯರು ಕುಟುಂಬದಲ್ಲಿ ಜವಾರಿ ಆಕಳು ಸಾಕುತ್ತಿದ್ದರು. ಇದರಲ್ಲಿ ದಿವ್ಯ ಔಷಧಿ ಸಹ ಇದೆ. ಹಾಲು ತುಪ್ಪ ಆರೋಗ್ಯಕ್ಕೆ ಒಳ್ಳೆಯದು. ಅದನ್ನು ಬಿಟ್ಟು ಹೆಚ್ಚಿನ ಹಾಲು ಕೊಡುವ ಜರ್ಸಿ ಆಕಳನ್ನು ಸಾಕಿ ಹೆಚ್ಚಿನ ಆದಾಯ ತೊಡಗಿದ್ದಾರೆ. ಹಾಲಿನಲ್ಲಿ ಸತ್ವ ಇಲ್ಲ. ಹಾಲು ಕುಡಿದರೆ ಶರೀರದ ಎಲ್ಲ ಭಾಗದಲ್ಲಿ ತೊಂದರೆ ಮಾಡುತ್ತದೆ. ಅದನ್ನು ತಪ್ಪಿಸಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಿರಿ. ಪರಮಾತ್ಮ ಗಾಳಿ ಬೆಳಕು ನೀರು ನಿಸರ್ಗ ಎಲ್ಲವನ್ನು ಕೊಟ್ಟಿದ್ದಾನೆ. ಆದರೆ, ಆ ಪರಮಾತ್ಮನನ್ನು ಮರೆತಿದ್ದೇವೆ. ಗುರುಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಿರಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿಸಿರಿ. ತಾಯಿ-ತಂದೆ ಪೂಜ್ಯರನ್ನು ಪೂಜಿಸುವುದು ಮರೆಯಬಾರದು. ಒಳ್ಳೆಯ ಕೆಲಸ ಮಾಡದಿದ್ದರೂ ಪರವಾಗಿಲ್ಲ ಕೆಟ್ಟ ಕೆಲಸ ಮಾಡಬಾರದು, ಇನ್ನೊಬ್ಬರನ್ನು ನೋಡಿ ಹೊಟ್ಟೆ ಕಿಚ್ಚು ಪಡಬಾರದು ಎಂದು ತಿಳಿಸಿದರು.ಸದಲಗಾದ ಡಾ.ಶ್ರದ್ಧಾನಂದ ಪೂಜ್ಯರು ಮಾತನಾಡಿ, ಯಾವುದೇ ವಸ್ತುವಿಗೆ ಬೆಲೆ ಕಟ್ಟಬಹುದು. ಆದರೆ, ಮಾನವನ ಬೆಲೆ ಕಟ್ಟಲು ಎಂದಿಗೂ ಸಾಧ್ಯವಿಲ್ಲ. ಬಿಡುವಿನ ಸಮಯದಲ್ಲಿ ಶಿವಾನುಭವ ಕಾರ್ಯಕ್ರಮದಲ್ಲಿ ಭಾಗಿಯಾಗಿರಿ ದಾನ, ಧರ್ಮ ಪರೋಪಕಾರಿ ಮಾಡುವುದನ್ನು ರೂಢಿಸಿಕೊಳ್ಳಿರಿ. ಒತ್ತಡದ ಜೀವನ ಸಾಗಿಸುವುದು ಬೇಡ. ನೆಮ್ಮದಿಯ ಜೀವನ ಸಾಗಿಸಿರಿ. ಗೃಹಸ್ಥರು ಯಾವಾಗಲೂ ಚಿಂತೆಯಲ್ಲಿ ತೊಡಗಿದ್ದಾರೆ. ಸಾಧು, ಸಂತರು ಸಂತಸದಿಂದ ಜೀವನ ಸಾಗಿಸುತ್ತಾರೆ ಎಂದರು.
ಶ್ರೀರಾಮ ಕುಟೀರದ ತಾರಾಚಂದ ಅಧ್ಯಕ್ಷತೆ ವಹಿಸಿ ಆಶೀರ್ವಚನ ಮಾಡಿದರು. ಕನ್ನಾಳದ ಬಸವಲಿಂಗ ಸ್ವಾಮೀಜಿ, ಇಟನಾಳದ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ, ಈರಣ್ಣ ಶಾಸ್ತ್ರಿಗಳಿಂದ ಪ್ರವಚನ ಹೇಳಿದರು. ರಾಮಚಂದ್ರ ಪೂಜಾರಿ ದಾಸಬೋಧ ಹೇಳಿದರು. ಸುಜಾತಾ ಸಂಗಡಿಗರಿಂದ ಭಕ್ತಿ ಪದ ಈ ವೇಳೆ ಗ್ರಾಪಂ ಸದಸ್ಯರಾದ ಭೀರಪ್ಪ ಹಿರೇಕುರುಬರ, ಜಯಶ್ರೀ ನಾಯಿಕ, ಲಕ್ಷ್ಮೀಬಾಯಿ ಹಿರೇಕುರುಬರ, ರಾವಸಾಬ ಕಾಳೆ, ಹಿರಿಯ ಪತ್ರಕರ್ತ ಮಲಗೌಡ ಪಾಟೀಲ ಸೇರಿದಂತೆ ನೂರು ಜನ ಶಿಬಿರಾರ್ಥಿಗಳು ಇದ್ದರು. 5 ದಿನ ಶಿಬಿರದ ಅನಿಸಿಕೆ ಹೇಳಿದರು. ರಾಮಕೃಷ್ಣ ಚಂದ್ರಸಾಲಿ ಸ್ವಾಗತಿಸಿದರು, ಕಲ್ಲಪ್ಪ ಗುಡೋಡಗಿ ವಂದಿಸಿದರು.