ಶಿರಸಿ: ಅರಣ್ಯ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ವಿವಿಧ ಹಂತದ ವಿಶೇಷ ತನಿಖಾ ತಂಡ ರಚಿಸಿ, ಒಂದು ವರ್ಷದ ಕಾಲಮಾನ ದಂಡ ನಿಗದಿಗೊಳಿಸಿ ನಿರ್ದೇಶನ ಪ್ರಕಟಿಸಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಸುಪ್ರೀಂ ಕೋರ್ಟ್ ಮೇ 15ರಂದು ಅರಣ್ಯ ಭೂಮಿಯನ್ನು ಹೊಂದಿರುವ ವೈಯಕ್ತಿಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಕಾನೂನುಬಾಹಿರವಾಗಿ ಸರ್ಕಾರದ ಪರವಾನಗಿ ಇಲ್ಲದೇ, ಸ್ವಾಧೀನಪಡಿಸಿಕೊಂಡಿರುವ ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ತನಿಖಾ ತಂಡಕ್ಕೆ ಅಧಿಕಾರ ನೀಡಲಾಗಿದೆ. ಅಲ್ಲದೇ, ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ವೆಚ್ಚ ವಸೂಲಿ ಮಾಡಲು ನಡವಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಟಿ.ಎನ್. ಗೋಧವರ್ಮನ್ ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಅರಣ್ಯ ಭೂಮಿಯನ್ನು ಅರಣ್ಯ ಉದ್ದೇಶ ಹೊರತುಪಡಿಸಿ ಮಾನವ ಮತ್ತು ಸಂಸ್ಥೆಗಳ ಹಸ್ತಕ್ಷೇಪ ನಿಯಂತ್ರಿಸಲು ಆದೇಶ ಮಾಡಲಾಗಿದೆ ಎಂದರು.ಕಾನೂನು ಸಲಹೆಗಾರ ಉದಯ ನಾಯ್ಕ, ಕೃಷ್ಣ ಪೂಜಾರಿ ಉಲ್ಲಾಳ, ಮಹೇಶ ಮುಕ್ರಿ ಕಡಬಾಳ, ಗಣಪತಿ ನಾಯ್ಕ ಕಾನಕೊಪ್ಪ, ಶಿಣ್ಣು ಗೌಡ ಕುದರಗೊಡ, ಕಿರಣ ವಡ್ಡರ್ ಬೆಡಸಗಾಂವ್, ತಿಮ್ಮ ಗೋಣಸರ, ವಿಜಯ ದೇವದಾಸ ಕಾರವಾರ, ಶೇಷ ನಾಯ್ಕ ಹುಲೇಕಲ್, ಅರವಿಂದ ಹಣಕೋಣ, ಪ್ರದೀಪ ನಾಯ್ಕ, ದೇವು ಗಾಂವಕರ್ ಕಾರವಾರ, ಬಾಬು ಗಾವಂಕರ್ ಕಾರವಾರ, ನಾರಾಯಣ ಗಾಂವಕರ್ ಕಾರವಾರ, ರತ್ನಾಕರ ನಾಯ್ಕ, ವೆಂಕಟರಮಣ ಗೌಡ ಕುದ್ರಗೋಡ, ಮಂಜುನಾಥ ಗೌಡ ಶಿರಗುಳಿ, ಅಬ್ದುಲ್ ಹಕ್ ಆರೆಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.ವಿವಿಧ ತನಿಖಾ ತಂಡಗಳು: ಅರಣ್ಯೇತರ ಚಟುವಟಿಕೆಗೆ ತನಿಖೆ ಮಾಡಿ, ಸ್ವಾಧೀನ ಪಡಿಸಿಕೊಳ್ಳಲು ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪರಿಸರ ಇಲಾಖೆಯ ಮುಖ್ಯಸ್ಥರಾಗಿದ್ದು, ಸದಸ್ಯರಾಗಿ ಕಂದಾಯ, ಹಿರಿಯ ಅರಣ್ಯ ಅಧಿಕಾರಿಗಳು ಮತ್ತು ಭೂ ದಾಖಲೆಗಳ ಆಯುಕ್ತರಿಂದ ಕೂಡಿದ 6 ಸದಸ್ಯ ಸಮಿತಿ ಒಳಗೊಂಡಿದ್ದು, ಅದರಂತೆ ಪ್ರಾಥಮಿಕ ಹಂತದ ತನಿಖೆಗೆ ಜಿಲ್ಲೆಯ ಉಪ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆಗೊಂಡಿದೆ. ಕಾಲಮಿತಿಯಲ್ಲಿ ಕಾರ್ಯ ನಿರ್ವಹಿಸಲು ನಡವಳಿಕೆಯಲ್ಲಿ ನಿರ್ದೇಶನ ನೀಡಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.