-ಹೆಬ್ಬೆಟ್ಟು ಇಲ್ಲವೇ ಮುಖ ಕೊಡದಿದ್ರೆ ರೈತರಿಗೆ ₹ 2000 ಬರಲ್ಲ । 1,51,693 ಫಲಾನುಭವಿಗಳಲ್ಲಿ 1,51,498 ರೈತರ ಇ-ಕೆವೈಸಿ ಬಾಕಿಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಪಿಎಂ ಕಿಸಾನ್ ಯೋಜನೆಯಡಿ ನಕಲಿ ಫಲಾನುಭವಿಗಳನ್ನು ತಡೆದು, ಪಾರದರ್ಶಕವಾಗಿ ಹಣ ಜಮೆ ಮಾಡಲು ಕೇಂದ್ರ ಮುಂದಾಗಿರುವುದರ ಪರಿಣಾಮವಿದು. 24 ನೇ ಕಂತಿನ ಹಣ ಪಡೆಯಬೇಕೆಂದರೆ ಕಂಪ್ಯೂಟರ್ಗೆ ಹೆಬ್ಬೆಟ್ಟು ಇಲ್ಲವೇ ಮುಖ ನೀಡಲೇಬೇಕು. ಬಯೋಮೆಟ್ರಿಕ್ ಫೇಸ್ ಆಧಾರಿತ ಇ-ಕೆವೈಸಿ ಕಡ್ಡಾಯ.
ಇ-ಕೆವೈಸಿ ಮಾಡಿಸದಿದ್ದರೆ ಮುಂದಿನ ಕಂತಿನ ಹಣದಿಂದ ವಂಚಿತರಾಗಬೇಕಾಗುತ್ತದೆ. ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಹಣ ಸೇರುತ್ತಿದ್ದರೂ ಈ ಬಾರಿ ಕಂತು ಬಿಡುಗಡೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ನ್ನು ಎನ್ಪಿಸಿಐ ಜತೆ ಲಿಂಕ್ ಮಾಡಿಸಿದ್ದರೂ ಈ ಸಲ ಪ್ರತಿಯೊಬ್ಬ ಫಲಾನುಭವಿ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಮಾಡಿಸಬೇಕು. ಈ ಮೂಲಕ ಮೃತರನ್ನು ಕೈಬಿಟ್ಟು ಅರ್ಹ ಫಲಾನುಭವಿಗಳ ಪತ್ತೆಗೆ ಸರ್ಕಾರ ಮುಂದಾಗಿದೆ.ಈ ಹಿಂದೆ ರೈತರು ಆಧಾರ್ ಒಟಿಪಿ ಆಧಾರಿತ ಇ-ಕೆವೈಸಿ ಮಾಡಿಸುತ್ತಿದ್ದರು. ಇದರಿಂದ ಮೃತಪಟ್ಟ ಖಾತೆದಾರರ ಅಥವಾ ಫಲಾನುಭವಿಗಳ ಖಾತೆಗೂ ಹಣ ವರ್ಗಾವಣೆಕೊಂಡ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹೀಗಾಗಿ ಕೇಂದ್ರ ಸರ್ಕಾರ ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿಗೆ ಮಾತ್ರ ಅವಕಾಶ ನೀಡಿ, ಒಟಿಪಿ ಆಧಾರಿತ ಇ-ಕೆವೈಸಿಗೆ ಕಡಿವಾಣ ಹಾಕಿದೆ.
ರೈತರು ಸಾಮಾನ್ಯ ಸೇವಾ ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು. ಮುಖ ದೃಢೀಕರಣ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಲು ಪ್ರತಿ ಗ್ರಾಮದ ವಿಲೇಜ್ ನೋಡಲ್ ಅಧಿಕಾರಿಗಳಾದ ಕೃಷಿ ಸಖಿ, ಪಶು ಸಖಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಹಾಗೂ ರೈತರು ಸ್ವತಃ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು.---ಪೋಟೋ ಫೈಲ್ ನೇಮ್ 20 ಸಿಟಿಡಿ3--
ಕೋಟ್
ಪಿಎಂ ಕಿಸಾನ್ ಯೋಜನೆಯಡಿ ರೈತರು ಸೆಪ್ಟೆಂಬರ್ ತಿಂಗಳಲ್ಲಿ 24 ನೇ ಕಂತಿನ ಹಣ ಪಡೆಯಬೇಕಾದರೆ ಬಯೋಮೆಟ್ರಿಕ್ ಇಕೆವೈಸಿ ಕಡ್ಡಾಯ. ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. https://play.google.com/store/apps/details?id=com.nic.project.pmkisan ಲಿಂಕ್ ಬಳಸಿ ರೈತರು ಡೌನ್ಲೋಡ್ ಮಾಡಿಕೊಳ್ಳಬಹುದು. ಇಲ್ಲವೇ ಗ್ರಾಮ ಒನ್ ಕೇಂದ್ರ ಸಂಪರ್ಕಿಸಬಹುದು.
ಬಿ. ಮಂಜುನಾಥ್, ಜಂಟಿ ಕೃಷಿ ನಿರ್ದೇಶಕ ಚಿತ್ರದುರ್ಗ.