ಕನ್ನಡಪ್ರಭ ವಾರ್ತೆ ಕುಣಿಗಲ್ ಭಾರತ ವಿಶ್ವ ಗುರು ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತಿರುವುದಕ್ಕೆ ಹಲವಾರು ದೇವಾಲಯ ಋಷಿ ಮುನಿಗಳ ಸಾಧನೆ ಮುಖ್ಯ ಕಾರಣವಾಗಿದೆ ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆಕುಣಿಗಲ್ ಪಟ್ಟಣದ ಬಿದನಗೆರೆ ಸತ್ಯ ಶನೇಶ್ಚರ ಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಿಸಿರುವ ನವಗ್ರಹ ದೇವಾಲಯ ಲೋಕಾರ್ಪಣೆ ಮಾಡಿ ಮಾತನಾಡಿದರು. ವಿಶ್ವದಲ್ಲಿ ಭಾರತಕ್ಕೆ ತನ್ನದೇ ಆದ ಪ್ರಮುಖ ಪಾತ್ರ ಇದೆ. ಧಾರ್ಮಿಕ ಹಿನ್ನೆಲೆ ಉಳ್ಳಂತಹ ಈ ದೇಶದ ಪ್ರತಿಯೊಂದು ಗ್ರಾಮವು ಕೂಡ ಹಲವಾರು ಸನಾತನ ಮತ್ತು ಧಾರ್ಮಿಕ ಪರಂಪರೆ ಉಳ್ಳ ಪುಣ್ಯ ಕ್ಷೇತ್ರಗಳಾಗಿವೆ. ಆದ್ದರಿಂದ ಧನಂಜಯ ಸ್ವಾಮೀಜಿ ಇಂತಹ ಬೃಹತಾಕಾರದ ಆಂಜನೇಯ ಸ್ವಾಮಿಯನ್ನು ನಿರ್ಮಿಸಲು ಸಾಧ್ಯ ಆಗಿದೆ ಎಂದರು. ಈ ಬಾರಿ ನಡೆದ ಮಹಾಕುಂಭ ಮೇಳಕ್ಕೆ ದೇಶದ ಹಲವಾರು ಜನ ಸಾಧು ಸಂತರು ಭಾಗವಹಿಸಿ ಸ್ನಾನ ಮಾಡಿದ್ದಾರೆ ಇಂತಹ ವಿಶೇಷವಾದ ಆಚರಣೆ ಧರ್ಮ ಹಾಗೂ ಸಂಸ್ಕೃತಿ ಯಾವ ದೇಶದಲ್ಲೂ ನಡೆಯಲು ಸಾಧ್ಯವಿಲ್ಲ ಇದು ಈ ದೇಶದ ತಾಕತ್ತು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಧನಂಜಯ ಗುರೂಜಿ ಧರ್ಮ ರಕ್ಷಣೆಗೆ ಎಲ್ಲಾ ಮಠಾಧೀಶರು ಹಾಗೂ ಸನಾತನ ಜವಾಬ್ದಾರಿಯುತ ವ್ಯಕ್ತಿಗಳು ಒಂದಾಗಬೇಕಾಗಿದೆ ಧರ್ಮದ ಉಳಿವಿಗಾಗಿ ಹೋರಾಟದ ಅವಶ್ಯಕತೆ ಇದೆ ಎಂದರು
ಗೌರಿಗದ್ದೆಯ ವಿನಯ್ ಗುರೂಜಿ ಮಾತನಾಡಿ ಒಬ್ಬ ಆಟೋ ಚಾಲಕನ ಸಾಧನೆ ಬಹು ಪ್ರಶಂಸನೀಯ. ಸಾಧನೆ ಮಾಡುವವರಿಗೆ ಧನಂಜಯ ಗುರೂಜಿ ಹಲವಾರು ಉದಾಹರಣೆಯ ಹಾಗೂ ಮಾರ್ಗದರ್ಶಕರಾಗಿದ್ದಾರೆ ಎಂತಹ ಕಷ್ಟಗಳು ಬಂದರೂ ಎದುರಿಸಿ ಉತ್ತಮ ಸಾಧನೆ ಮಾಡಿರುವುದಕ್ಕೆ ಈ ದೇವಾಲಯ ಸಾಕ್ಷಿ ಎಂದರು.ಈ ಸಂದರ್ಭದಲ್ಲಿ ಕೆಂಗೇರಿ ಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿ, ಉದ್ಯಮಿ ಅಭಯ ಚಂದ್ರನಾಥ್ ಜೈನ ಸೇರಿದಂತೆ ಹಲವರು ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಮಠಾಧೀಶರು ಇದ್ದರು.