ಕನ್ನಡಪ್ರಭ ವಾರ್ತೆ ಅರಕಲಗೂಡು
ರೈತರು ಸಾಂಪ್ರದಾಯಿಕ ಬೆಳೆಗೆ ಜೋತು ಬೀಳದೇ ಮಿಶ್ರ ಬೆಳೆ ಬೇಸಾಯ ಪದ್ಧತಿಗೆ ಮುಂದಾದಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಶಾಸಕ ಎ. ಮಂಜು ತಿಳಿಸಿದರು.ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಅರಕಲಗೂಡು ತಾಲೂಕಿನ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಸಾಮಾಜಿಕ ಅರಣ್ಯ ವಲಯ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೃಷಿ ಸಂಬಂಧಿತ ಇಲಾಖೆಗಳು ದುಡಿಯುವ ರೈತರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಬೇಕು. ರೈತರಿಗೆ ಅನ್ಯಾಯ ಮಾಡಿದರೆ ನಮಗೆ ನಾವೇ ಮೋಸ ಮಾಡಿಕೊಂಡಂತಾಗುತ್ತದೆ. ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವುದು ರೈತರ ಜವಾಬ್ದಾರಿ ಆಗಬೇಕು. ಶೇ. 90ರಷ್ಟು ಸಬ್ಸಿಡಿ ಸೌಲಭ್ಯ ಇರುವ ಹನಿ ನೀರಾವರಿ ಹೊಂದುವ ಮುಖೇನ ವೈಜ್ಞಾನಿಕ ಬೇಸಾಯ ಪದ್ಧತಿ ಅನುಸರಿಸಬೇಕು ಎಂದು ಸಲಹೆ ನೀಡಿದರು. ರೈತರು ಒಂದೇ ಬೆಳೆಯನ್ನು ನೆಚ್ಚಿಕೊಳ್ಳದೆ ಪರ್ಯಾಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಲಾಭ ಕಂಡುಕೊಳ್ಳಬೇಕು. ಮುಖ್ಯವಾಗಿ ಹೈನುಗಾರಿಕೆಯನ್ನು ಉಪ ಕಸುಬಾಗಿ ಅವಲಂಬಿಸಿ ಕೃಷಿಯಲ್ಲಿ ಆಗುವ ನಷ್ಟ ಭರಿಸಿಕೊಳ್ಳಬೇಕು ಎಂದರು. ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ. ಯೋಗಣ್ಣ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಕೆ. ಜೆ. ಕವಿತಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿದರು. ಕೃಷಿ ಸಾಧಕರಾದ ಗೋವಿಂದೇಗೌಡ, ದೇವೇಗೌಡ, ಮಂಜುನಾಥ್, ನರಸೇಗೌಡ, ಪೂರ್ಣಿಮಾ, ಕವಿತಾ ರುದ್ರೇಶ್, ಕೆ.ಟಿ. ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು. ರೈತರಿಗೆ ಕೃಷಿ ಸಲಕರಣೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಇಒ ಪ್ರಕಾಶ್, ಗ್ರಾಪಂ ಉಪಾಧ್ಯಕ್ಷ ಮಾದೇಶ್, ಮುಖಂಡರಾದ ಮಗ್ಗೆ ರಾಜೇಗೌಡ, ಆರ್.ನಿಂಗೇಗೌಡ, ಹರಳಹಳ್ಳಿ ತಮ್ಮೇಗೌಡ, ಮುಗುಳೂರು ಕೃಷ್ಣಗೌಡ, ಬಂದಿಗ ನಹಳ್ಳಿ ರವಿ, ವೀರೇಂದ್ರ, ಕಮಲಮ್ಮ, ಪುಟ್ಟರಾಜು, ಸಿದ್ದಲಿಂಗೇಶ್ವರ, ಸೀತಾರಾಮ್ ಭಟ್ ಮುಂತಾದವರು ಭಾಗವಹಿಸಿದ್ದರು.========ಕ್ಯಾಪ್ಸನ್ :
ಅರಕಲಗೂಡು ತಾಲೂಕು ರಾಮನಾಥಪುರದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ನಡೆದ ರೈತ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಎ.ಮಂಜು ಉದ್ಘಾಟಿಸಿದರು.