ನೈತಿಕ ಶಿಕ್ಷಣದಿಂದ ಮಾತ್ರ ವಿಶ್ವಮಾನವನಾಗಲು ಸಾಧ್ಯ

KannadaprabhaNewsNetwork |  
Published : Dec 30, 2025, 01:45 AM IST
ಫೋಟೋ 29 ಟಿಟಿಎಚ್ 01: ರಾಷ್ಟ್ರಕವಿ ಕುವೆಂಪುರವರ 121 ನೇ ಜನ್ಮದಿನಾಚರಣೆಯ ಅಂಗವಾಗಿ ಕುಪ್ಪಳಿಯ ಹೇಮಾಂಗಣದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಕೊಂಕಣಿ ಸಾಹಿತಿ ಮಹಾಬಲೇಶ್ವರ ಸೈಲ್‍ರವರಿಗೆ 2025 ನೇ ಸಾಲಿನ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು.  | Kannada Prabha

ಸಾರಾಂಶ

ವಿಶ್ವಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಮುಂದಿನ ಪೀಳಿಗೆಯನ್ನು ವಿಶ್ವ ಮಾನವರನ್ನಾಗಿ ರೂಪಿಸುವಲ್ಲಿ ಕುವೆಂಪು ಮುಂತಾದ ದಾರ್ಶನಿಕರ ಕಾರ್ಯಕ್ರಮಗಳು ಹೆಚ್ಚು ವಿಸ್ತಾರವಾಗಿ ನಡೆಯುವಂತಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ತೀರ್ಥಹಳ್ಳಿ: ವಿಶ್ವಮಾನವ ಸಂದೇಶವನ್ನು ಸಾರಿದ ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಮುಂದಿನ ಪೀಳಿಗೆಯನ್ನು ವಿಶ್ವ ಮಾನವರನ್ನಾಗಿ ರೂಪಿಸುವಲ್ಲಿ ಕುವೆಂಪು ಮುಂತಾದ ದಾರ್ಶನಿಕರ ಕಾರ್ಯಕ್ರಮಗಳು ಹೆಚ್ಚು ವಿಸ್ತಾರವಾಗಿ ನಡೆಯುವಂತಾಗಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ರಾಷ್ಟ್ರಕವಿ ಕುವೆಂಪುರವರ 121ನೇ ಜನ್ಮದಿನಾಚರಣೆಯ ಅಂಗವಾಗಿ ಕುಪ್ಪಳಿಯ ಹೇಮಾಂಗಣದಲ್ಲಿ ನಡೆದ ವಿಶ್ವಮಾನವ ದಿನಾಚರಣೆಯನ್ನು ಉದ್ಘಾಟಿಸಿ, ಕೊಂಕಣಿ ಸಾಹಿತಿ ಮಹಾಬಲೇಶ್ವರ ಸೈಲ್‍ರವರಿಗೆ 2025ನೇ ಸಾಲಿನ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು.

ಕುವೆಂಪುರವರ ಅಭಿಮಾನಿಯಾಗಿದ್ದ ನಮ್ಮ ತಂದೆ ಬಂಗಾರಪ್ಪವರ ಅಧಿಕಾರವಧಿಯಲ್ಲಿ ಕುವೆಂಪು ಪ್ರತಿಷ್ಠಾನ ಸ್ಥಾಪನೆಯಾಗಿರುವುದು ಮಾತ್ರವಲ್ಲದೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕವಿಯ ಮನೆಗೆ ತೆರಳಿ ವಿತರಣೆ ಮಾಡಿರುವುದು ಅಭಿಮಾನದ ಸಂಗತಿಯಾಗಿದೆ. ನನ್ನಿಂದಾಗಬಹುದಾದ ನೆರವು ನೀಡಲು ಸದಾ ಬದ್ಧನಾಗಿದ್ದೇನೆ ಎಂದರು.ಪ್ರಸ್ತುತ ಜಾತಿ, ಧರ್ಮದ ಅಮಲಿನಲ್ಲಿ ಅಲ್ಪಮಾನವರಾಗುತ್ತಿರುವ ಈಚಿನ ದಿನಗಳಲ್ಲಿ ಮುಂದಿನ ಪೀಳಿಗೆಯನ್ನು ವಿಶ್ವ ಮಾನವರನ್ನಾಗಿ ರೂಪಿಸುವಲ್ಲಿ ನೈತಿಕ ಶಿಕ್ಷಣದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಒಂದನೇ ತರಗತಿಯಿಂದ ಮಕ್ಕಳ ಭವಿಷ್ಯಕ್ಕೆ ಪೂರಕವಾದ ನೀತಿ ವಿಜ್ಞಾನ ವಿಷಯವನ್ನೂ ಅಳವಡಿಸಲಾಗುವುದು. ಮತ್ತು ಕುವೆಂಪುರವರ ನಾಡಗೀತೆಯನ್ನು ಕಡ್ಡಾಯವಾಗಿ ಪಠ್ಯಪುಸ್ತಕಗಳಲ್ಲಿ ಪ್ರಕಟಿಸಲಾಗುವುದು. ಶಿಕ್ಷಣ ಸಚಿವನಾಗಿ ಕನ್ನಡ ಭಾಷೆಯನ್ನು ಉಳಿಸುವ ಹೊಣೆಗಾರಿಕೆ ಇದ್ದು, ಶಿಕ್ಷಣ ಇಲಾಖೆಗೆ ಪೂರಕವಾದ ಅನುದಾನವೂ ಲಭ್ಯವಿದೆ ಎಂದು ಹೇಳಿದರು. 5 ಲಕ್ಷ ರು. ನಗದು ಮತ್ತು ಪ್ರಶಸ್ತಿ ಫಲಕವನ್ನು ಸ್ವೀಕರಿಸಿ ಕನ್ನಡದಲ್ಲೇ ಮಾತನಾಡಿದ ಮಹಾಬಲೇಶ್ವರ ಸೈಲ್, ನಾನೊಬ್ಬ ವಾಸ್ತವವಾದಿ ಲೇಖಕನಾಗಿದ್ದು, ವಾಸ್ತವ ಎಂದರೆ ಸಾಹಿತ್ಯದ ಸತ್ಯ ಮತ್ತು ಲೇಖಕನ ಪ್ರಾಮಾಣಿಕತೆಯಾಗಿದೆ. ನನಗೆ ದೊರೆತಿರುವ ಬೇರೆಲ್ಲಾ ಪ್ರಶಸ್ತಿಗಳಿಗಿಂತ ಕುವೆಂಪುರವರ ಹೆಸರಿನ ಈ ರಾಷ್ಟ್ರೀಯ ಪ್ರಶಸ್ತಿ ಶಿಖರಪ್ರಾಯವಾಗಿದೆ. ಈ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಿರುವ ಸರ್ವರಿಗೂ ಆಭಾರಿಯಾಗಿದ್ದೇನೆ ಎಂದರು.

ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಮಾತನಾಡಿ, ಪ್ರತಿಷ್ಠಾನದಿಂದ ಈವರೆಗೆ ಇಂಗ್ಲಿಷ್ ಮತ್ತು ಕೊಂಕಣಿ ಸಾಹಿತ್ಯವನ್ನು ಹೊರತು ಪಡಿಸಿ ದೇಶದ ಬಹುತೇಕ ಎಲ್ಲ ಭಾಷಾ ಸಾಹಿತಿಗಳಿಗೂ ಪ್ರಶಸ್ತಿ ನೀಡಲಾಗಿದೆ. ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾಗಿರುವ ಮಹಾಬಲೇಶ್ವರ ಸೈಲ್‍ರವರು ಮಾಡಿರುವ ಸಾಧನೆ ಅಮೋಘವಾಗಿದೆ. ಹೀಗಾಗಿ ನಾವೇ ಅಲವಡಿಸಿಕೊಂಡಿರುವ ಕುವೆಂಪು ಪ್ರಶಸ್ತಿ ನಿಯಮವನ್ನು ಮೀರಿ ಶ್ರೀಯುತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.ಕುವೆಂಪು ವಿವಿ ಕುಲಪತಿ ಡಾ.ಶರತ್ ಅನಂತಮೂರ್ತಿ ಮಾತನಾಡಿ, ಕುವೆಂಪು ರಾಷ್ಟ್ರಮಟ್ಟದಲ್ಲಿ ಆಧುನಿಕ ಕರ್ನಾಟಕದ ತಳಹದಿ ತಂದು ಕೊಟ್ಟವರು. ಇದೀಗ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯ ಮೂಲಕ ಇಡೀ ಭಾರತ ಒಂದು ಒಕ್ಕೂಟದಂತೆ ಭಾಸವಾಗುತ್ತಿರುವುದು ಕನ್ನಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಜಾತಿ ವ್ಯವಸ್ಥೆಯನ್ನೇ ಗುರಾಣಿಯಾಗಿ ಬಳಸಿಕೊಳ್ಳುತ್ತಿರುವ ಈ ದಿನಗಳಲ್ಲಿ ಸಾಹಿತ್ಯದ ಮೂಲಕ ಮಲೆನಾಡನ್ನು ಶಾಶ್ವತಗೊಳಿಸಿದ ಕುವೆಂಪುರವರ ಸಂದೇಶ ಪಾಲನೆ ಇಂದಿನ ಅಗತ್ಯವಾಗಿದೆ. ಕುವೆಂಪು ಸಾಹಿತ್ಯ ಮನುಕುಲಕ್ಕೇ ಮಾರ್ಗದರ್ಶಿಯೂ ಆಗಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕಿ ಕೆ.ಎಂ.ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ವೇಳೆ ಪ್ರತಿಷ್ಠಾನದಿಂದ ಹೊರತಂದ ಬೊಮ್ಮನಹಳ್ಳಿ ಕಿಂದರಜೋಗಿ ಕ್ಯಾಲೆಂಡರನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್‍ಬಾನು ಬಿಡುಗಡೆಗೊಳಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಕವಿಶೈಲದಲ್ಲಿರುವ ಕವಿಯ ಸಮಾಧಿಗೆ ಸಚಿವ ಮಧು ಬಂಗಾರಪ್ಪ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು.

ಸಮಾರಂಭದಲ್ಲಿ ದೇವಂಗಿ ಗ್ರಾಪಂ ಅಧ್ಯಕ್ಷೆ ಎಚ್.ಸಿ.ಸರೋಜಾ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಡಾ.ಆಂಶುಮಾನ್, ಕೇಶವ ಮಳಗಿ, ತಹಸೀಲ್ದಾರ್ ಎಸ್.ರಂಜಿತ್, ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್, ಖಜಾಂಚಿ ದೇವಂಗಿ ಮನುದೇವ್ ವೇದಿಕೆಯಲ್ಲಿದ್ದರು. ಟಿ.ಎನ್.ಅರವಿಂದ ಮತ್ತು ರಮಾಂಜಿ ನಾಡಗೀತೆ ಹಾಡಿದರು. ಶಿವಾನಂದ ಕರ್ಕಿ ಸ್ವಾಗತಿಸಿದರು. ಎಸ್.ದಯಾನಂದ್ ಅತಿಥಿಗಳನ್ನು ಪರಿಚಯಿಸಿದರು. ಡಾ.ರಾಜೇಂದ್ರ ಬುರುಡೀಕಟ್ಟಿ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ

ಕುವೆಂಪು ಜನ್ಮದಿನದ ಅಂಗವಾಗಿ ಕುವೆಂಪು ಪ್ರತಿಷ್ಠಾನದಿಂದ ನಟಮಿತ್ರರು ಸಹಯೋಗದಲ್ಲಿ ಸೋಮವಾರ ಸಂಜೆ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಸ್ಥಳೀಯ ರಾಜರಾಜೇಶ್ವರಿ ಮತ್ತು ಸುಮುಖ ನೃತ್ಯ ಶಾಲೆಯ ಕಲಾವಿದರಿಂದ ಕುವೆಂಪು ಗೀತೆಗಳ ನೃತ್ಯ ವೈಭವ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಳಿಯವರಿಂದ ಬೆರಳ್ಗೆ ಕೊರಳ್ ನಾಟಕವನ್ನು ಪ್ರದರ್ಶಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ
ಹಳೆ ದ್ವೇಷ: ರಸ್ತೆಯಲ್ಲಿ ಅಟ್ಟಾಡಿಸಿ ಅಪ್ಪ, ಮಗನ ಮೇಲೆ ಹಲ್ಲೆ ನಡೆಸಿ ಪರಾರಿ