ಹಲಗೂರು ಸಮೀಪದ ಗುಂಡಾಪುರ ರವಿ ಅವರ ಬಾಳೆ ತೋಟದಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂಟಿ ಕಾಡಾನೆಯನ್ನು ಕಾಡಿಗೆ ಹಟ್ಟಲು ಹರಸಾಹಸ ಪಡುತ್ತಿದ್ದಾರೆ.
ಹಲಗೂರು:
ಸಮೀಪದ ಗುಂಡಾಪುರ ರವಿ ಅವರ ಬಾಳೆ ತೋಟದಲ್ಲಿ ಭಾನುವಾರ ಬೆಳಗ್ಗೆ ಕಾಡಾನೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒಂಟಿ ಕಾಡಾನೆಯನ್ನು ಕಾಡಿಗೆ ಹಟ್ಟಲು ಹರಸಾಹಸ ಪಡುತ್ತಿದ್ದಾರೆ. ಕಾಡಿಗಟ್ಟುವ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಿದ್ದ ಅರಣ್ಯ ಇಲಾಖೆ ಜೀಪ್ ಚಾಲಕ ಎಸ್.ಚೇತನ್ ಅವರನ್ನು ಕಾಡಾನೆ ಅಟ್ಟಿಸಿಕೊಂಡು ಬಂದಿತ್ತು. ಅದೃಷ್ಟವಾಸತ್ ಪ್ರಾಣಾಪಾಯದಿಂದ ಪಾರಾದರು. ಒಂಟಿ ಕಾಡಾನೆಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಕೆಲವು ದಿನಗಳ ಹಿಂದೆ ಮದ್ದೂರಿನಲ್ಲಿ ಕಾಣಿಸಿಕೊಂಡಿದ್ದ ಮೂರು ಕಾಡಾನೆಗಳು ಕಬ್ಬಾಳು ಅರಣ್ಯ ಪ್ರದೇಶದಿಂದ ಈ ಕಡೆ ಬಂದಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಹಲಗೂರು ಕಡೆಗೆ ಬಂದಾಗ ಎರಡು ಕಾಡಾನೆಗಳು ಬಸವನ ಬೆಟ್ಟದ ಕಾಡಿಗೆ ಹೊರಟು ಹೋದರೆ ಗುಂಪಿನಿಂದ ಬೇರ್ಪಟ್ಟ ಒಂಟಿ ಕಾಡಾನೆ ಒಂದು ಬಾಳೆ ತೋಟದಲ್ಲಿ ಸೇರಿಕೊಂಡಿದ್ದು, ನಂತರ ಅರಣ್ಯ ಇಲಾಖೆಯ ಕಚೇರಿಯ ಹಿಂಭಾಗ ಇರುವ ಹಳ್ಳದಲ್ಲಿ ಬೀಡು ಬಿಟ್ಟಿತ್ತು. ಈ ಕಾಡಾನೆಯನ್ನು ಮತ್ತೆ ಕಾಡಿಗೆ ಓಡಿಸಲು ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.
ಆನೆಯು ಸುರಕ್ಷಿತ ಸ್ಥಳದಲ್ಲಿ ಇದ್ದು, ಚಲನವಲನದ ಬಗ್ಗೆ ಅರಣ್ಯಾಧಿಕಾರಿಗಳು, ಸಿಬ್ಬಂದಿ ಗಮನ ಹರಿಸಿದ್ದಾರೆ. ಜನಸಂಚಾರ ಕಡಿಮೆಯಾಗಿ ಸಂಜೆ ನಂತರ ಬಸವನಬೆಟ್ಟ ಅರಣ್ಯ ಪ್ರದೇಶಕ್ಕೆ ಆನೆಯನ್ನು ಸುರಕ್ಷಿತವಾಗಿ ಓಡಿಸಲಾಗುವುದು ಎಂದು ಎಸಿಎಫ್ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.