ಆಪರೇಷನ್ ಸಿಂದೂರ- ಅಭಿಪ್ರಾಯಗಳು...

KannadaprabhaNewsNetwork |  
Published : May 14, 2025, 01:51 AM IST
ಆಪರೇಷನ್ ಸಿಂದೂರ ಅಭಿಪ್ರಾಯಕ್ಕೆ ಫೋಟೋಗಳು | Kannada Prabha

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವಣ ಕದನ ವಿರಾಮ ಘೋಷಣೆಯಾಗಿದೆ‌. ಏಷಿಯಾದ ಪ್ರಬಲ ದೇಶವಾಗಿ ಭಾರತ ಬೆಳೆಯಲು ಈ ಕದನ ವಿರಾಮ ಅನುಕೂಲವಾಗಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಣ ಕದನ ವಿರಾಮ ಘೋಷಣೆಯಾಗಿದೆ‌. ಏಷಿಯಾದ ಪ್ರಬಲ ದೇಶವಾಗಿ ಭಾರತ ಬೆಳೆಯಲು ಈ ಕದನ ವಿರಾಮ ಅನುಕೂಲವಾಗಲಿದೆ. ಗಡಿಯಲ್ಲಿ‌ ಶಾಂತಿ ನೆಲೆಸುವುದರಿಂದ ಭಾರತದ ಷೇರು ಮಾರುಕಟ್ಟೆಗೆ ವಿದೇಶಿ ಹಣದ ಒಳಹರಿವು ಹೆಚ್ಚಾಗಿ ಭಾರತದ ಏಳಿಗೆಗೆ ಅನುಕೂಲವಾಗಲಿದೆ. ನಾವೆಲ್ಲರೂ ಭಾರತದ ಸೇನೆಯ ಶೌರ್ಯಕ್ಕೆ ತಲೆಬಾಗುತ್ತೇವೆ. ಐದಾರು ದಿನಗಳಿಂದ ಪಾಕಿಸ್ತಾನದ ಯೋಗ್ಯತೆ ಏನೆಂಬುದು ಜಾಗತಿಕ ಮಟ್ಟದಲ್ಲಿ ಜಗಜ್ಜಾಹೀರಾಗಿದೆ.

- ಕೆ.ಸೌಮ್ಯ ಗಣೇಶ, ಗೃಹಿಣಿ, ದಾವಣಗೆರೆ

(-12ಕೆಡಿವಿಜಿ8)

- - - ಭಾರತೀಯ ವೀರಯೋಧರ ಶೌರ್ಯ, ಸಾಹಸ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಉಗ್ರ ತಾಣಗಳ ಮೇಲೆ ಮಾಡಿದ ದಾಳಿಯಿಂದಾಗಿ ಭಾರತದಲ್ಲಿ ತಂಗಾಳಿ ಬೀಸಿದಂತಾಯಿತು. ಭಯೋತ್ಪಾದನೆ ನಾಶವಾಗಿ ಭಾರತೀಯರು ನೆಮ್ಮದಿ ಕಾಣಬೇಕು. ಎಲ್ಲ ಕಾಲಕ್ಕೂ ಶಾಂತಿಮಂತ್ರ ಫಲಿಸದು. ದಂಡ ದಶಗುಣಂ ಎಂಬಂತೆ ಉಗ್ರರ ದಮನಕ್ಕೆ ಯುದ್ಧವಾಗಲೇಬೇಕು. ವೈರಿಗಳ ನಾಶದಿಂದ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಸಿಂದೂರ ಕಳೆದುಕೊಂಡ ಭಾರತೀಯ ನಾರಿಯರ ಕಣ್ಣೀರನ್ನು ಒಂದಿಷ್ಟು ಒರೆಸಿದಂತಾಗುತ್ತದೆ.

- ಜಿ.ಎಸ್.ಗಾಯತ್ರಿ, ಶಿಕ್ಷಕಿ, ಬಾಪೂಜಿ ಶಾಲೆ, ಹರಿಹರ.

(-12ಕೆಡಿವಿಜಿ9)

- - - ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಜೊತೆಗೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ಭಾರತದ ತೆಕ್ಕೆಗೆ ಪಡೆಯಲು ಇದೊಂದು ಸುವರ್ಣಾವಕಾಶ. ನಮ್ಮ ವೀರಯೋಧರು ಪಿಒಕೆಯನ್ನು ಮರಳಿ ಪಡೆಯುವ ಮೂಲಕ ಭಾರತೀಯರು ಆ ನೆಲದಲ್ಲಿ ತಲೆಎತ್ತಿ ಓಡಾಡುವಂತೆ ಮಾಡುತ್ತಾರೆಂಬ ಸಂಪೂರ್ಣ ನಂಬಿಕೆ 140 ಕೋಟಿ ಭಾರತೀಯರಲ್ಲಿದೆ. ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತೆ ಇಂದಿರಾ ಗಾಂಧಿ ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಿದ್ದರು. ಪ್ರಧಾನಿ ಮೋದಿ ಅವರಿಗೂ ಅಂಥ ಅವಕಾಶ ಈಗ ಲಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕದನ ವಿರಾಮ, ಶಾಂತಿ ಮಾತುಕತೆ ಸರಿಯಲ್ಲ. ಯಾವುದೇ ಕಾರಣಕ್ಕೂ ಆಪರೇಷನ್ ಸಿಂದೂರ ನಿಲ್ಲಬಾರದು. ನಮ್ಮ ಸೇನೆಗೆ ಮುಕ್ತ ಅಧಿಕಾರ ನೀಡಿ, ಪಾಕ್ ಸರ್ವನಾಶ ಮಾಡಲಿ.

-ಮಲ್ಲಿಕಾರ್ಜುನ ಇಂಗಾಳೇಶ್ವರ, ಸಾಮಾಜಿಕ ಕಾರ್ಯಕರ್ತ

(-12ಕೆಡಿವಿಜಿ10)

- - - ಕೇವಲ ನಾಲ್ಕೈದು ದಿನಗಳ ದಾಳಿಯಿಂದ ಕಂಗಾಲಾಗಿರುವ ಪಾಕಿಸ್ತಾನಕ್ಕೆ ಅಮಾಯಕರ ಪ್ರಾಣಕ್ಕೆ ಎಷ್ಟು ಬೆಲೆ ಇದೆ ಎಂಬುದನ್ನು ಭಾರತ ತಿಳಿಸಿಕೊಟ್ಟಿದೆ. ಭಾರತದ ಯೋಧರ ಏಟಿಗೆಗೆ ಪ್ರತ್ಯುತ್ತರ ನೀಡಲಾಗದ ಹೇಡಿ ಪಾಕಿಸ್ತಾನ ಕದನ ವಿರಾಮವೆಂದು ಅಮೆರಿಕಾ ಅಧ್ಯಕ್ಷರಿಂದ ಹೇಳಿಸಿ, ರಾತ್ರೋರಾತ್ರಿ ಮತ್ತೆ ಗುಂಡು ಹಾರಿಸಿ, ತಾನು ನಂಬಿಕೆಗೆ ಅರ್ಹವಲ್ಲದ ದೇಶ ಎಂಬುದನ್ನು ಸಾಬೀತುಪಡಿಸಿದೆ. ನಮ್ಮೆಲ್ಲಾ ಸೇನೆಗಳಿಗೆ, ಯೋಧರಿಗೆ ದೊಡ್ಡ ಸಲಾಂ. ನರಿಬುದ್ಧಿಯ ಪಾಕಿಸ್ತಾನಕ್ಕೆ ಇಷ್ಟಕ್ಕೆ ಬಿಡಬಾರದು. ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ್ ಮುಂದುವರಿಯಲಿ.

- ಡಿ.ಎನ್.ಶಾಂಭವಿ, ಅಧ್ಯಕ್ಷ, ಹರಿಹರ ತಾಲೂಕು ಕಾನಿಪಸಂ,

(-12ಕೆಡಿವಿಜಿ11)

- - - ವಿಶ್ವಕ್ಕೆ ಪಾಕಿಸ್ತಾನದ ನರಿಬುದ್ಧಿ ತೋರಿಸುವ ಸಲುವಾಗಿ ಸದ್ಯಕ್ಕೆ ಭಾರತ ಕದನ ವಿರಾಮ ಘೋಷಣೆಗೆ ಒಪ್ಪಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನ ರಾತ್ರೋರಾತ್ರಿ ದಾಳಿ ಸಹ ಮಾಡಿ, ಭಾರತದಿಂದ ಬೆಂಕಿಯುಂಡೆ ಬೀಳುತ್ತಿದ್ದಂತೆ ಬಾಲ ಮುದುರಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಕದನ ವಿರಾಮದ ವೇಳೆ ಪಾಕಿಸ್ತಾನದಿಂದ ಒಂದೇ ಒಂದು ಗುಂಡು ಬಿದ್ದರೂ, ಅದನ್ನು ಯುದ್ಧ ಘೋಷಿಸಿದಂತೆಯೇ ಎಂಬುದಾಗಿ ಪರಿಗಣಿಸುವುದಾಗಿ, ಒಂದು ಗುಂಡು ಹಾರಿ ಬಂದರೂ ಇತ್ತಲಿಂದ ಬಾಂಬ್ ಸಿಡಿಯುತ್ತವೆಂಬ ಎಚ್ಚರಿಕೆ ನೀಡಿದ್ದಾರೆ.

- ಗಿರೀಶ ಎಸ್.ದೇವರಮನಿ, ಅಧ್ಯಕ್ಷ, ಪರಿಸರ ಸಂರಕ್ಷಣಾ ವೇದಿಕೆ

(12ಕೆಡಿವಿಜಿ12)

- - - ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ನಡೆಗೆ ವಿಶ್ವದ ಎಲ್ಲ ದೇಶಗಳೂ ವಿರೋಧಿಸುತ್ತಿವೆ. ಉಗ್ರರ ನಿಗ್ರಹಕ್ಕೆ ಪಣತೊಟ್ಟಿರುವ ಭಾರತದ ನಿಲುವಿಗೆ ಬಹುತೇಕ ಎಲ್ಲ ದೇಶಗಳೂ ಬೆಂಬಲಿಸುತ್ತಿವೆ. ನಮ್ಮ ಸಮರ್ಥ ಸೇನೆಗಳು, ವೀರಯೋಧರು ಶತ್ರುರಾಷ್ಟ್ರ ಪಾಕಿಸ್ತಾನವನ್ನು ಸಂಪೂರ್ಣ ಸದೆಬಡಿಯುವ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಆಪರೇಷನ್ ಸಿಂದೂರ ಅರ್ಧಕ್ಕೆ ನಿಲ್ಲಬಾರದು. ಕದನ ವಿರಾಮದ ನೆಪದಲ್ಲಿ ಬೀಸೋ ದೊಣ್ಣೆಯಿಂದ ಪಾಕಿಸ್ತಾನ ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರ ಬಿಡಬಾರದು.

- ಎ.ಜೆ.ರವಿಕುಮಾರ, ಜಿಲ್ಲಾಧ್ಯಕ್ಷ, ರಾಜ್ಯ ಅಸಂಘಟಿಕ ಕಾರ್ಮಿಕರ ಸಂಘ.

(-12ಕೆಡಿವಿಜಿ13)

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ