ಉ.ಕ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ

KannadaprabhaNewsNetwork |  
Published : Nov 20, 2025, 04:00 AM IST
ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ ಅವರು ಬೆಳಗಾವಿ ಸುವರ್ಣವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸುವರ್ಣ ವಿಧಾನಸೌಧದಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ ಹೇಳಿದರು.

ಸುವರ್ಣವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಶಾಸಕರು ಧ್ವನಿ ಎತ್ತಿ, ಸರ್ಕಾರದಿಂದ ಉತ್ತರ ಪಡೆಯಲು ಪ್ರಯತ್ನಿಸಬೇಕು. ಇಡೀ ರಾಜ್ಯದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ. ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು. ಈ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಿ, ಸರ್ಕಾರದಿಂದ ಉತ್ತರ ಪಡೆಯಬೇಕಾದದ್ದು ಶಾಸಕರ ಜವಾಬ್ದಾರಿ. ಚಳಿಗಾಲ ಅಧಿವೇಶನವನ್ನು ಅಚ್ವುಕಟ್ಟಾಗಿ ಅಧಿವೇಶನ‌ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿದಿನ 500 ವಿದ್ಯಾರ್ಥಿಗಳಿಗೆ ಸುಗಮ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಂಸದೀಯ ವ್ಯವಸ್ಥೆಯ ಕುರಿತು ಅರಿವು ಮೂಡಿಸಲು ವಿವಿಗಳ ಆಯ್ದ 30 ವಿದ್ಯಾರ್ಥಿಗಳಿಗೆ ಇಡೀ ದಿನ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.

ಸಮಾಜದ ಎಲ್ಲ ವರ್ಗದವರಿಗೆ ಕಲಾಪ ವೀಕ್ಷಣೆಗೆ ಅನುಕೂಲವಾಗುವಂತೆ ಕ್ರೀಡಾಪಟುಗಳು, ಮಹಿಳೆಯರು, ಕಾರ್ಮಿಕರು, ಪೌರಕಾರ್ಮಿಕರು, ತೃತೀಯ ಲಿಂಗಿಗಳು ಹೀಗೆ ಎಲ್ಲರಿಗೂ ವಿಶೇಷ ಅವಕಾಶ ನೀಡಲಾಗುವುದು. ಉತ್ತರ ಕರ್ನಾಟಕ ವಿಷಯಗಳ ಚರ್ಚೆಗೆ ಆದ್ಯತೆ ನೀಡಲಾಗುವುದು. ಬಿಎಸಿ ಸಭೆಯಲ್ಲಿ ಚರ್ಚೆಯ ವಿಷಯಗಳ ಬಗ್ಗೆ ತೀರ್ಮಾನಿಸಲಾಗುವುದು. ಸದನದಲ್ಲಿ ಹಾಜರಾತಿ ಪ್ರಮಾಣ ಕ್ರಮೇಣ ಸುಧಾರಣೆಯಾಗುತ್ತಿದೆ. ಕಳೆದ ಬಾರಿಯ ಅಧಿವೇಶನ ಯಶಸ್ವಿಯಾಗಿದೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಭರಮಗೌಡ ಕಾಗೆ ಹೇಳಿಕೆ ನೀಡಿರುವುದು ತಪ್ಪು. ಅಂತಹ ಬೇಡಿಕೆಗಳನ್ನು ಯಾರೂ ಮಂಡಿಸಬಾರದು ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಸದನದ ನಿಯಮಾವಳಿಯ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗುತ್ತದೆ. ಕಳೆದ ಬಾರಿ ಪ್ರತಿಭಟನಾ ಸ್ಥಳಗಳಿಗೆ ಸಚಿವರನ್ನು ಕಳುಹಿಸಿ ಜನರ‌ ಅಹವಾಲು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿತ್ತು. ಈ ಸಲ ಕೂಡ ಅದೇ ಮಾದರಿಯಲ್ಲಿ ಕ್ರಮ ವಹಿಸಲಾಗುವುದು. ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಿದೆ. ಅದಲ್ಲದೇ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಸ್ಯೆಗಳ ಬಗ್ಗೆ ಮುಂಚಿತವಾಗಿ ಚರ್ಚಿಸಲು ತಿಳಿಸಲಾಗಿರುತ್ತದೆ ಎಂದು ತಿಳಿಸಿದರು.---

PREV

Recommended Stories

ಶಿಸ್ತು, ನ್ಯಾಯಪರತೆ, ಆತ್ಮಸಾಕ್ಷಿಗಳಿಂದ ಕೆಲಸ ಮಾಡಿ
ಸಹಕಾರಿದಲ್ಲಿ ವಿಜಯಪುರ ದೇಶಕ್ಕೆ ಮಾದರಿ