ಕಾಸರಕೋಡ ಟೊಂಕಾ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ: ಚಿತ್ರನಟ ಚೇತನ್

KannadaprabhaNewsNetwork |  
Published : Apr 04, 2025, 12:46 AM IST
ಸ | Kannada Prabha

ಸಾರಾಂಶ

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಹುನ್ನಾರ ನಡೆಯುತ್ತಿದೆ.

ಹೊನ್ನಾವರ: ತಾಲೂಕಿನ ಕಾಸರಕೋಡ ಟೊಂಕಾದಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕಾಗಿ ಹುನ್ನಾರ ನಡೆಯುತ್ತಿದ್ದು, ಇದರಿಂದ ಮೀನುಗಾರರಿಗೆ ಬಹಳ ದೊಡ್ಡ ಅನ್ಯಾಯ ಆಗುತ್ತಿದೆ. ಇದನ್ನು ಕಾಸರಕೋಡ ಭಾಗದ ಜನರು ಮಾತ್ರವಲ್ಲ ಜನಪರ ಕಾಳಜಿ ಇರುವ ಕರ್ನಾಟಕದ ಎಲ್ಲ ಜನರೂ ವಿರೋಧಿಸಬೇಕು ಎಂದು ಚಿತ್ರನಟ ಚೇತನ್ ಹೇಳಿದರು.

ಕಾಸರಕೋಡ ಟೊಂಕಾದಲ್ಲಿ ಗುರುವಾರ ಮೀನುಗಾರರೊಂದಿಗೆ ಮಾತುಕತೆ ನಡೆಸಿ ಬಂದರು ಯೋಜನೆ ಅನುಷ್ಠಾನದಿಂದಾಗುವ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ವಾಣಿಜ್ಯ ಬಂದರು ನಿರ್ಮಾಣದಿಂದ 6000 ಜನರ ಬದುಕು ಮತ್ತು ಮೀನುಗಾರಿಕೆ ನಾಶ ಆಗುತ್ತದೆ ಎಂದು ಪರಿಸರವಾದಿಗಳು, ಜನಪರ ಕಾಳಜಿ ಇದ್ದವರು ಹಾಗೂ ಇಲ್ಲಿನ ಜನರು ಇದನ್ನು ವಿರೋಧಿಸುತ್ತಿದ್ದಾರೆ. ಇಲ್ಲಿ ವಿಶೇಷವಾದ ಆಲೀವ್ ರಿಡ್ಲೆ ಆಮೆ ಸಂತತಿ ಇದೆ. ಅದರ ಸಂತತಿಗೂ ಹಾನಿಯಾಗಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಈಗಾಗಲೇ ಬೇಲೆಕೇರಿ, ಕಾರವಾರ ಬಂದರು ಇವೆ. ಆದರೂ ಮತ್ತೊಂದು ವಾಣಿಜ್ಯ ಬಂದರು ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ ಎಂದರು.

ಶ್ರೀಮಂತರ ಜೇಬು ತುಂಬಿಸುವ ಯೋಜನೆ: ಖಾಸಗಿಯವರ ಸಹಭಾಗಿತ್ವದಲ್ಲಿ ಹೊನ್ನಾವರದಲ್ಲಿ ಪೋರ್ಟ್ ನಿರ್ಮಿಸಿ ಇಲ್ಲಿನ ಜನಜೀವನ ನಾಶ ಮಾಡಿ ಶ್ರೀಮಂತರ ಜೇಬು ತುಂಬಿಸುವ ಕೆಲಸ ಆಗುತ್ತಿದೆ. ಇಲ್ಲಿನ ಮಹಿಳೆಯರು ಸೇರಿ ಹೋರಾಟಗಾರರ ಮೇಲೆ ಸುಳ್ಳು ಕೇಸು ದಾಖಲಿಸಿ ಮಾನಸಿಕ, ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಇವರೆಲ್ಲ ಜನಪರ ಹೋರಾಟ ಮಾಡಿದವರು. ಅವರು ಬದುಕಿಗಾಗಿ ಸಂವಿಧಾನಾತ್ಮಕ ಹಕ್ಕು ಚಲಾಯಿಸಿದ್ದಾರೆ. ಇಲ್ಲಿಯ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಕೈಗೊಂಬೆಯಾಗಿ ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ದೌರ್ಜನ್ಯ ಮಾಡುತ್ತಿದ್ದಾರೆ. ಈ ಯೋಜನೆ ಸಂಪೂರ್ಣವಾಗಿ ಕೈಬಿಡಬೇಕು. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸ್ಥಳ ಪರಿಶೀಲನೆಗೆ ಬಂದಿದ್ದೇನೆ. ನಾನು ಕೂಡ ಈ ಹೋರಾಟಕ್ಕೆ ಬೆಂಬಲಿಸಿ ಇಲ್ಲಿನ ಜನರ ಪರ ನಿಲ್ಲುತ್ತೇನೆ ಎಂದರು.

ಮೀನುಗಾರ ಮುಖಂಡರಾದ ಗಣಪತಿ ತಾಂಡೇಲ್, ರಾಜೇಶ್ ತಾಂಡೇಲ್, ರಾಜು ತಾಂಡೇಲ್, ಮೀನುಗಾರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಚೇರಿಯಲ್ಲೇ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಆತ್ಮ*ತ್ಯೆ
ಡಿಜಿ ಅರೆಸ್ಟ್‌ನಿಂದ ₹15 ಕೋಟಿ ಕಳೆದುಕೊಂಡ ವೃದ್ಧ ಉದ್ಯಮಿ!