ಕನ್ನಡ ಪ್ರಭ ವಾರ್ತೆ ಮದ್ದೂರು
ಹಿಂದುತ್ವ ವಿಚಾರ ಮುಂದಿಟ್ಟುಕೊಂಡು ವಿಪಕ್ಷ ನಾಯಕರು ಸದನದ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ವಾಗ್ದಾಳಿ ನಡೆಸಿದರು.ತಾಲೂಕಿನ ಕುದುರಗುಂಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಅಭಿವೃದ್ಧಿ, ಸಮಸ್ಯೆ ಹಾಗೂ ರೈತರ ಬಗ್ಗೆ ಸದನದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದ್ದ ವಿಪಕ್ಷ ನಾಯಕರು ದೇವಸ್ಥಾನ, ಹಿಂದುತ್ವದ ವಿಚಾರಗಳನ್ನಷ್ಟೆ ಮುಂದಿಟ್ಟುಕೊಂಡು ಎರಡರೆಡು ವಾರಗಳ ಕಾಲ ಚರ್ಚಿಸಿ ಸದನದ ಅಮೂಲ್ಯ ಸಮಯ ಹಾಳು ಮಾಡುತ್ತಿದ್ದಾರೆ ಎಂದರು ಕಿಡಿಕಾರಿದರು.
ವಿಪಕ್ಷ ನಾಯಕರಿಗೆ ರಾಜ್ಯದ ಅಭಿವೃದ್ಧಿ ಪಡಿಸುವ ಬಗ್ಗೆ ಚಿಂತೆಯಿಲ್ಲ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳ ಶಾಸಕರ ಸಮಸ್ಯೆ ಚರ್ಚಿಸಲು ಸಮಯಾವಕಾಶ ಕೊರತೆಯಾಗುತ್ತಿದೆ. ಕೆಲ ಬಿಲ್ ಗಳಿಗೆ ಮಾತ್ರ ಅನುಮತಿ ಸಿಗುತ್ತಿದೆ. ಶಾಸಕರು ಸಂಕ್ಷಿಪ್ತವಾಗಿ ಚರ್ಚಿಸಲು ವಿಪಕ್ಷ ನಾಯಕರ ಕಾಲಹರಣದಿಂದ ಅಡ್ಡಿಯಾಗುತ್ತಿದೆ ಎಂದರು.ಸದನದಲ್ಲಿ ಚರ್ಚೆಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಪ್ರತ್ಯೆಕವಾಗಿ ಮಂಡ್ಯ ಜಿಲ್ಲೆಯ ಶಾಸಕರ ಸಭೆ ನಡೆಸಿದರು. ಈ ವೇಳೆ ನಾನು ಆತಗೂರು ಹೋಬಳಿಯ ರೀ ಸರ್ವೇ, ಕೊನೇ ಭಾಗದವರೆಗೆ ನೀರಾವರಿ ಯೋಜನೆ ಅನುದಾನ, ನ್ಯಾಯಾಲಯದ ಸಂಕೀರ್ಣ, ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಹಾಗೂ ತಾಲೂಕು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದರು.
ಮದ್ದೂರು ಪಟ್ಟಣವನ್ನು ಬಿಎಂಐಸಿ ಯೋಜನೆಯಿಂದ ಕೈ ಬಿಡುವಂತೆ ಸದನದಲ್ಲಿ ಮಂಗಳವಾರ ಚರ್ಚೆ ನಡೆಸಿದ್ದೇನೆ. ಆದರೆ, ಸುಪ್ರಿಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲಾಗುವುದಿಲ್ಲ. ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿ ಚರ್ಚಿಸಿ ಮೂರು ಇಲಾಖೆಗಳನ್ನು ಸಭೆ ನಡೆಸಿ ಮದ್ದೂರು ನಗರಸಭೆ ವ್ಯಾಪ್ತಿಯಿಂದ ಬಿಎಂಐಸಿ ಯೋಜನೆ ಕೈಬಿಡುವಂತೆ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದರು.ಇದೇ ವೇಳೆ ಗ್ರಾಪಂ ಮಾಜಿ ಅಧ್ಯಕ್ಷರಾದ ಪ್ರಭು, ಹರೀಶ್, ಕುದರಗುಂಡಿ ಕೆ.ಪಿ.ಶ್ರೀಧರ್, ರೈತ ಮುಖಂಡ ನಾಗರಾಜ್, ನಯನ್ ಕುಮಾರ್, ಧ್ರುವಕುಮಾರ್, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಮಹದೇವಪ್ಪ, ರಾಜೇಂದ್ರ, ಸಿದ್ದರಾಜು, ಗ್ರಾಪಂಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.