ರೈತರ ಒಪ್ಪಿಗೆ ಪಡೆಯದೇ ಭೂಮಿ ಸ್ವಾಧೀನಕ್ಕೆ ಮುಂದಾಗಿದ್ದಕ್ಕೆ ವಿರೋಧ

KannadaprabhaNewsNetwork |  
Published : Apr 30, 2026, 01:45 AM IST
ಗ | Kannada Prabha

ಸಾರಾಂಶ

ಜಿಲ್ಲಾಡಳಿತ ಮತ್ತು ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ ಜನರಿಗೆ ನಿವೇಶನ ಹಂಚಲು ರೈತರ ಒಪ್ಪಿಗೆ ಪಡೆಯದೆ, ರೈತರ ಭೂಮಿ ಸ್ವಾಧೀನಕ್ಕೆ ಮಾಡಿಕೊಳ್ಳಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಮಾಚೇನಹಳ್ಳಿ ಗ್ರಾಮದಲ್ಲಿ ನೂರಾರು ರೈತರು ಟೂಡಾ ನಿವೇಶನಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿದ ಜಾಗದಲ್ಲಿಯೇ ಪ್ರತಿಭಟನಾ ಸಮಾವೇಶ ನಡೆಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಿಲ್ಲಾಡಳಿತ ಮತ್ತು ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ ಜನರಿಗೆ ನಿವೇಶನ ಹಂಚಲು ರೈತರ ಒಪ್ಪಿಗೆ ಪಡೆಯದೆ, ರೈತರ ಭೂಮಿ ಸ್ವಾಧೀನಕ್ಕೆ ಮಾಡಿಕೊಳ್ಳಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಮಾಚೇನಹಳ್ಳಿ ಗ್ರಾಮದಲ್ಲಿ ನೂರಾರು ರೈತರು ಟೂಡಾ ನಿವೇಶನಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿದ ಜಾಗದಲ್ಲಿಯೇ ಪ್ರತಿಭಟನಾ ಸಮಾವೇಶ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘ,ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್), ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು, ಗ್ರಾಮಸ್ಥರು, ಮಾಚೇನಹಳ್ಳಿ ಗ್ರಾಮದ ತಿರುಮಲ ರಂಗನಾಥಸ್ವಾಮೀ ದೇವಾಲಯದ ಬಳಿಯಿಂದ ಟೂಡಾ ನಿವೇಶನಕ್ಕೆ ಶಂಕು ಸ್ಥಾಪನೆ ನೆರವೇರಿದ ಜಾಗದವರೆಗೂ ಮೆರವಣಿಗೆ ನಡೆಸಿ, ತದನಂತರ ಜಿಲ್ಲಾಡಳಿತ ಮತ್ತು ಟೂಡಾದ ನಡೆ ಖಂಡಿಸಿ ಸಮಾವೇಶ ನಡೆಸಿದರು.

ಸಮಾವೇಶದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಐಕೆಎಸ್‌ನ ಕೆಂಬೇಗೌಡ,ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮಾಚೇನಹಳ್ಳಿ, ಸಿಂಗನಹಳ್ಳಿ ಮತ್ತು ಬೊಮ್ಮೇನಹಳ್ಳಿ ಗ್ರಾಮಗಳಲ್ಲಿ 70 ಎಕರೆ ಸರಕಾರಿ ಭೂಮಿಯೂ ಸೇರಿದಂತೆ,ಸುಮಾರು 200 ಎಕರೆಗೂ ಹೆಚ್ಚು ಭೂಮಿಯನ್ನು ವಶಪಡಿಸಿಕೊಂಡು ನಿವೇಶನಗಳಾಗಿ ಅಭಿವೃದ್ದಿ ಪಡಿಸಿ, 50:50ರ ಅನುಪಾತದಲ್ಲಿ ಹಂಚಿಕೆ ಮಾಡಲು ಯೋಜನೆ ರೂಪಿಸಿದೆ. ಆದರೆ ಇದಕ್ಕೆ ರೈತರ ಒಪ್ಪಿಗೆ ಪಡೆದಿಲ್ಲ. ಅಲ್ಲದೆ ಸರಕಾರಿ ಭೂಮಿಯನ್ನು ಉಳುಮೆ ಮಾಡುತ್ತಿರುವ ರೈತರನ್ನು ಸಹ ಪರಿಗಣಿಸಿಲ್ಲ. ಹಾಗಾಗಿ ಮೂರು ಗ್ರಾಮಗಳ ರೈತರು ಒಗ್ಗೂಡಿ, ಹೋರಾಟ ರೂಪಿಸಿದರೆ, ಈ ಯೋಜನೆಗೆ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಳ್ಳುವುದು ತಪ್ಪುತ್ತದೆ. ಹಾಗಾಗಿ ಹೋರಾಟಗಾರರು ತಮ್ಮಲ್ಲಿ ಒಡಕು ಉಂಟು ಮಾಡುವ ಶಕ್ತಿಗಳಿಂದ ದೂರವಿದ್ದು, ಇಂದೇ ಜಿಲ್ಲಾಡಳಿತ ಮತ್ತು ಟೂಡಾಗೆ ನಿಮ್ಮ ಯೋಜನೆಗೆ ನಮ್ಮ ಭೂಮಿ ನೀಡುವುದಿಲ್ಲ ಎಂದು ದೂರು ಸಲ್ಲಿಸುವಂತೆ ಸಲಹೆ ನೀಡಿದರು.

ಜಿಲ್ಲಾ ಸಂಚಾಲಕ ಸಿ.ಯತಿರಾಜು, ಐದು, ಹತ್ತು ಗುಂಟೆ, ಅರ್ಧ ಎಕರೆ,ಒಂದು ಎಕರೆ ಭೂ ಹಿಡುವಳಿ ಹೊಂದಿರುವವರ ಸಂಖ್ಯೆಯೇ ಹೆಚ್ಚು.ಇರುವ ಜಮೀನಿನನ್ನು ಕಿತ್ತುಕೊಂಡು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಪರಿಹಾರ ನೀಡುವುದರಿಂದ ರೈತರು ತಮ್ಮ ಫಲವತ್ತಾದ ಭೂಮಿ ಕಳೆದುಕೊಂಡು ಬೀದಿಗೆ ಬೀಳಬೇಕಾಗುತ್ತದೆ.ಹಾಗಾಗಿ ಎಲ್ಲರೂ ಧೀರ್ಘ ಕಾಲದ ಹೋರಾಟಕ್ಕೆ ಸಜ್ಜಾಗುವಂತೆ ಕರೆ ನೀಡಿದರು.

ಕೆಪಿಆರ್‌ಎಸ್‌ನ ಬಿ.ಉಮೇಶ್ ಮಾತನಾಡಿ ಒಗ್ಗಟ್ಟಿನಿಂದ ಹೋರಾಟಕ್ಕೆ ನಿಂತರೇ ನಿಮ್ಮ ಭೂಮಿಯನ್ನು ಉಳಿಸಿಕೊಳ್ಳಬಹುದು ಎಂದರು. ರೈತರ ಹೋರಾಟಗಾರರಾದ ಎಲ್.ಪ್ರಭಾ ಮಾತನಾಡಿದರು. ಪ್ರತಿಭಟನೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಮಾಚೇನಹಳ್ಳಿ,ಬೋಮ್ಮೆನಹಳ್ಳಿ ಗ್ರಾಮಸ್ಥರನ್ನು ಒಳಗೊಂಡು 15 ಜನರ ಸಮಿತಿಯನ್ನು ರಚಿಸಲಾಯಿತು. ಗ್ರಾಮದ ರೈತರಾದ ಮಹೇಂದ್ರ, ಕುಮಾರ್, ಲಕ್ಷ್ಮಣಯ್ಯ, ರಾಮಾಂಜೀನೇಯ, ಬೋಜರಾಜು, ಸಾವಿತ್ರ ಮಾತನಾಡಿದರು.

-----------------------

ನಿರ್ಣಯಗಳು

-ರೈತರ ಒಪ್ಪಿಗೆ ಇಲ್ಲದೆ ಹಾಕಿರುವ ಅಡಿಗಲ್ಲನ್ನು ಹಿಂಪಡೆಯಬೇಕು

- ಭೂ ಬಳಕೆ ಮತ್ತು ಭೂ ಹೊದಿಕೆ ಕಾಯ್ದೆ ಜಾರಿಗೆ ತರಬೇಕು.

- ಖಾಸಗಿ ಲೇಔಟ್‌ಗಳಲ್ಲಿ ಖಾಲಿ ಇರುವ ನಿವೇಶನಗಳನ್ನು ವಶಪಡಿಸಿಕೊಂಡು ನಿವೇಶನ ಅಗತ್ಯ ಇರುವವರಿಗೆ ಹಂಚಿಕೆ ಮಾಡಬೇಕು.

- ಬಲವಂತದ ಭೂಸ್ವಾಧೀನ ಕೈಬಿಡಬೇಕು.

ಸರ್ಕಾರಿ ಭೂಮಿಯನ್ನು ಸರ್ಕಾರದ ಯೋಜನೆಗಳಾದ ಆಸ್ಪತ್ರೆ, ಶಾಲೆ,ಕಾಲೇಜು ನಿರ್ಮಾಣಕ್ಕೆ ಮೀಸಲಿಡಬೇಕು.

- ಬಗರ್ ಹುಕ್ಕಂ ಸಾಗುವಳಿದಾರರಿಗೆ ಮೊದಲು ಸಾಗುವಳಿ ಚೀಟಿ ವಿತರಣೆಯಾಗಬೇಕು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆಗೂ ಮುನ್ನ ಪ್ರತಿ ಗ್ರಾಮಕ್ಕೆ ಕುಡಿವ ನೀರಿನ ವ್ಯವಸ್ಥ ಮಾಡಿ: ಶಾಸಕ ಬಿ.ವೈ.ವಿಜಯೇಂದ್ರ
ಸಾಲ ಮನ್ನಾ ನೆಪದಲ್ಲಿ ಜನರಿಗೆ ವಂಚನೆ ತಪ್ಪಿಸಿ