ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ
ಕನ್ನಡಪ್ರಭ ವಾರ್ತೆ ಯಲ್ಲಾಪುರಸೋಂದಾ ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಇತ್ತೀಚೆಗೆ ಕೈಗೊಂಡ ನಿರ್ಧಾರದಂತೆ ಅ.೩ರಂದು ಉಮ್ಮಚಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಬೇಡ್ತಿ ವರದಾ ನದಿ ಜೋಡಣೆ ಯೋಜನೆ ವಿರುದ್ಧ ತೀವ್ರ ವಿರೋಧ ವ್ಯಕ್ತಗೊಂಡಿತು.
ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಗೊಂಡಿತು. ವಿವಿಧ ಗ್ರಾಪಂಗಳು, ಸಹಕಾರಿ ಸಂಘಗಳು, ಯುವಕ ಸಂಘಗಳು, ಮಹಿಳಾ ಸಂಘಗಳು, ಮಾತೃಮಂಡಳಿ, ಕಿಸಾನ್ ಸಂಘ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ರೈತ ಸಂಘಟನೆಗಳ ಪ್ರಮುಖರು, ಮಂಚಿಕೇರಿ, ಹಾಸಣಗಿ ಕುಂದರಗಿ ಹಿತ್ಲಳ್ಳಿ ಉಮ್ಮಚಗಿ ಪಂಚಾಯತದ ಭಾಗಗಳಿಂದ ಜನರು ಆಗಮಿಸಿದ್ದರು.ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಈ ಯೋಜನೆಯ ಕುರಿತ ಮಾಹಿತಿ ನೀಡಿದರಲ್ಲದೇ ಶರಾವತಿ, ಕೇಣಿ ಸೇರಿದಂತೆ ಉ.ಕ.ದಲ್ಲಿ ಬೃಹತ್ ಯೋಜನೆಗಳ ಜಾರಿಗೆ ತಯಾರಿ ನಡೆದಿದೆ. ಹಿಂದೊಮ್ಮೆ ಹೋರಾಟ ಮಾಡಿ ಈ ಯೋಜನೆ ನಿಲ್ಲಿಸಲಾಗಿತ್ತು. ಆದರೆ ಮತ್ತೆ ಈಗ ತಲೆ ಎತ್ತಿದೆ. ಯೋಜನೆಯಿಂದ ಆಗುವ ದುಷ್ಪರಿಣಾಮ, ಯೋಜನೆಯ ಸ್ಥಿತಿ ಬಗ್ಗೆ ಎತ್ತಿನಹೊಳೆ ಯೋಜನೆಯಲ್ಲಿ ಕಂಡುಕೊಂಡು ಪಾಠ ಕಲಿತಿದ್ದೇವೆ. ನಮಗೆ ಇಲ್ಲಿ ಪಾಠ ಕಲಿಯಬೇಕಿಲ್ಲ. ನಮ್ಮ ಜನಪ್ರತಿನಿಧಿಗಳು ಯೋಜನೆಯ ತಡೆಗೆ ಸರಕಾರದ ಮೇಲೆ ಒತ್ತಡ ಹೇರಬೇಕು. ಈ ತಿಂಗಳ ಕೊನೆಯಲ್ಲಿ ಬೇಡ್ತಿ ನದಿತಿರುವು ಸೂರೆಮನೆ ಬಳಿಯ ಅಣೆಕಟ್ಟೆ ವಿರುದ್ದ ಬೇಡ್ತಿ ತಟದಲ್ಲಿ ಬ್ರಹತ್ ಪ್ರತಿಭಟನೆ ಮಾಡಿ ನದಿ ಕಣಿವೆ ಉಳಿಸಿಕೊಳ್ಳುವ ಸಂಕಲ್ಪ ಮಾಡಲಿದ್ದೇವೆ ಎಂದರು.
ಸ್ವರ್ಣವಲ್ಲಿ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ನಳ್ಳಿ ಮಾತನಾಡಿ, ಆಧ್ಯಾತ್ಮ ನಾಯಕತ್ವ ನಮಗೆ ಸಿಕ್ಕಿದೆ ಎಂಬುದು ಸೌಭಾಗ್ಯ. ಇದರಿಂದ ಅನೇಕ ನಮ್ಮ ಜನಾಂದೋಲನಕ್ಕೆ ಯಶಸ್ಸು ಸಿಕ್ಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಉಮ್ಮಚಗಿ ವ್ಯ.ಸೇ.ಸ.ಸಂಘದ ಅಧ್ಯಕ್ಷ ಎಂ.ಜಿ. ಭಟ್ಟ ಸಂಕದಗುಂಡಿ ಮಾತನಾಡಿ, ಅ.೨೭ ರಂದು ಅಣೆಕಟ್ಟು ಯೋಜನಾ ಪ್ರದೇಶದಲ್ಲಿ ಪ್ರತಿಭಟನೆ ನಡೆಸೋಣ ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಬೇಕು. ಇದು ಈ ಪ್ರದೇಶದ ಎಲ್ಲರ ಹೋರಾಟವಾಗಬೇಕು ಎಂದರು.
ಈ ಸಂದರ್ಭ ಹಾಸಣಗಿ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ, ಕುಂದರಗಿ ಸಹಕಾರಿ ಸಂಘದ ಅಧ್ಯಕ್ಷ ಹೇರಂಭ ಹೆಗಡೆ, ಹಿತ್ಲಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಜಿ.ವಿ. ಹೆಗಡೆ, ಉಮ್ಮಚಗಿ ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ, ಹಿತ್ಲಳ್ಳಿ ಗ್ರಾಪಂ ಅಧ್ಯಕ್ಷ ಸತ್ಯನಾರಾಯಣ ಹೆಗಡೆ ವೇದಿಕೆಯಲ್ಲಿದ್ದರು.ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ರಂಗಸಮೂಹ ಸಂಸ್ಥೆಯ ರಾಮಕೃಷ್ಣ ದುಂಡಿ, ಪ್ರಮುಖರಾದ ಎನ್.ಜಿ. ಹೆಗಡೆ ಭಟ್ರಕೇರಿ, ರಘುಪತಿ ಕಂಪ್ಲಿ, ಗುರುಪ್ರಸಾದ ಭಟ್ಟ ಹೊನ್ನಳ್ಳಿ, ಎಂ.ಆರ್. ಹೆಗಡೆ ತಾರೆಹಳ್ಳಿ, ಗಣಪತಿ ಶಂಕರಗದ್ದೆ, ಸತೀಶ ಕುಣಬಿ ಸೂರೆಮನೆ, ಕೈತಾನ್ ಡಿಸೋಜಾ, ಮಂಜುನಾಥ ಜಡ್ಡಿಗದ್ದೆ, ಸೂರ್ಯನಾರಾಯಣ ಹಿತ್ಲಳ್ಳಿ, ಆರ್.ಜಿ. ಹೆಗಡೆ ಬೆದೆಹಕ್ಲು, ಪವನಕುಮಾರ ಕೇಸರಕರ್, ಎಂ.ಕೆ. ಹೆಗಡೆ ಚಿಪಗೇರಿ, ಸುಭಾಸ ಸೂರೆಮನೆ, ಗಣಪತಿ ಹಿರೇಸರ, ಕೆ.ಎಸ್. ಭಟ್ಟ, ಗ್ರಾಪಂಗಳ ಒಕ್ಕೂಡದ ಅಧ್ಯಕ್ಷ ಎಂ.ಕೆ. ಭಟ್ಟ ಯಡಳ್ಳಿ, ಮಾತೃಮಂಡಳಿ ಅಧ್ಯಕ್ಷೆ ಗೀತಾ ಹೆಗಡೆ ಶೀಗೆಮನೆ, ಮತ್ತಿತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಳ್ಳ ಸಂರಕ್ಷಣಾ ಸಮಿತಿಯ ಸಂಚಾಲಕ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ವಂದಿಸಿದರು.