ಸಹಿಪ್ರಾ ಶಾಲಾವರಣದಲ್ಲಿ ಮೌಲಾನಾ ಅಜಾದ್ ಶಾಲೆ ಕಟ್ಟಡಕ್ಕೆ ವಿರೋಧ

KannadaprabhaNewsNetwork |  
Published : Mar 29, 2026, 02:15 AM IST
ಕಂಪ್ಲಿಯ ಸಕ್ಕರೆ ಕಾರ್ಖಾನೆ ಪ್ರದೇಶದ ಸಹಿಪ್ರಾ ಶಾಲಾವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೌಲಾನಾ ಅಜಾದ್ ಮಾದರಿ ಶಾಲೆ ಕಟ್ಟಡದ ಬಳಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಭೇಟಿ ನೀಡಿ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಸ್ಥಳ ವೀಕ್ಷಣೆಗೆ ಬಂದಾಗ ಸ್ಥಳೀಯರೊಂದಿಗೆ ವಾಗ್ವಾದ ಸೃಷ್ಟಿಯಾಯಿತು.  | Kannada Prabha

ಸಾರಾಂಶ

ಶಾಸಕರ ಸೂಚನೆ ಮೇರೆಗೆ ಸ್ಥಳ ವೀಕ್ಷಣೆಗೆ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರೊಂದಿಗೆ ಅಲ್ಲಿನ ನಿವಾಸಿಗಳು ಮಾತಿನ ಚಕಮಕಿ ನಡೆಸಿದರು.

ಕಂಪ್ಲಿ: ಪಟ್ಟಣದ ಸಕ್ಕರೆ ಕಾರ್ಖಾನೆ ಪ್ರದೇಶದ ಸಹಿಪ್ರಾ ಶಾಲಾವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡಕ್ಕೆ ಸಂಬಂಧಿಸಿದಂತೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಶಾಸಕರ ಸೂಚನೆ ಮೇರೆಗೆ ಸ್ಥಳ ವೀಕ್ಷಣೆಗೆ ಆಗಮಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರೊಂದಿಗೆ ಅಲ್ಲಿನ ನಿವಾಸಿಗಳು ಮಾತಿನ ಚಕಮಕಿ ನಡೆಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್ ಮಾತನಾಡಿ, ಶಾಸಕರ ನಿರ್ದೇಶನದಂತೆ ಪ್ರಸ್ತಾವಿತ ಸ್ಥಳವನ್ನು ವೀಕ್ಷಿಸಲು ಬಂದಿದ್ದೇವೆ. ಸ್ಥಳೀಯ ನಿವಾಸಿಗಳು, ಪಾಲಕ-ಪೋಷಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ಶಾಲೆ ಕಟ್ಟಡ ನಿರ್ಮಾಣ ಕುರಿತು ಅಂತಿಮ ತೀರ್ಮಾನವನ್ನು ಶಾಸಕರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪುರಸಭೆ ಮಾಜಿ ಸದಸ್ಯ ಸಿ.ಆರ್. ಹನುಮಂತ ಮಾತನಾಡಿ, ಮೌಲಾನಾ ಆಜಾದ್ ಶಾಲೆ ಕಟ್ಟಡ ನಿರ್ಮಾಣ ವಿಷಯದಲ್ಲಿ ಕೆಲವರು ತಪ್ಪು ಮಾಹಿತಿ ಹಬ್ಬಿಸುತ್ತಿದ್ದಾರೆ. ವಿಜಯ ಪ್ರೌಢಶಾಲೆಯ ಆಡಳಿತ ಮಂಡಳಿಯವರು ಜನರಲ್ಲಿ ಭೀತಿ ಮೂಡಿಸಿ ಮನೆಗಳನ್ನು ತೆರವುಗೊಳಿಸಲಾಗುತ್ತದೆ ಎಂಬ ಭಾವನೆ ಮೂಡಿಸುತ್ತಿದ್ದಾರೆ. ಆದರೆ, ನಮ್ಮ ಉದ್ದೇಶ ಅದು ಅಲ್ಲ. ಈ ಶಾಲೆಯು ಹರಪನಹಳ್ಳಿಯ ಶರಣಬಸವ ಬುದ್ಧ ಭೀಮಾಜಿ ವಿದ್ಯಾಸಂಸ್ಥೆಗೆ ಸೇರಿದದ್ದು, ಅವರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಎಪಿಎಂಸಿ ಅಧ್ಯಕ್ಷ ಎನ್.ಹಬೀಬ್ ರೆಹಮಾನ್ ಮಾತನಾಡಿ, ಮೌಲಾನಾ ಆಜಾದ್ ಶಾಲೆ ಆಂಗ್ಲ ಮಾಧ್ಯಮದ ಗುಣಮಟ್ಟದ ಶಿಕ್ಷಣವನ್ನು ನೀಡುವ ಸಂಸ್ಥೆಯಾಗಿದೆ. ಆರ್ಥಿಕವಾಗಿ ಹಿಂದುಳಿದ ಶೇ.75ರಷ್ಟು ಅಲ್ಪಸಂಖ್ಯಾತರ ಮಕ್ಕಳಿಗೆ ಹಾಗೂ ಶೇ.25ರಷ್ಟು ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರೆ ವರ್ಗದ ಮಕ್ಕಳಿಗೆ ಇದು ದೊಡ್ಡ ಅವಕಾಶವಾಗಿದೆ. ಜಾತಿ-ಧರ್ಮದ ಹೆಸರಿನಲ್ಲಿ ಯೋಜನೆಗೆ ಅಡ್ಡಿ ಪಡಿಸುವುದು ಸರಿಯಲ್ಲ. ಶಿಕ್ಷಣದ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ನಿವಾಸಿಗಳಾದ ರಬಿಯಾ ಟಿ.ನಿಸಾರ್, ಪಾರ್ವತಮ್ಮ, ಪದ್ಮಾ, ಪಾರ್ವತಿ, ನೀಲಮ್ಮ, ಫಾತೀಮಾ, ಚಾಂದ್‌ಬೀ ಹಾಗೂ ರಮಿಜಾಬಿ ಮಾತನಾಡಿ, ಮೌಲಾನಾ ಅಜಾದ್ ಶಾಲೆ ನಿರ್ಮಾಣಕ್ಕೆ ನಾವು ವಿರೋಧಿಗಳಲ್ಲ. ಆದರೆ ಈ ಸಹಿಪ್ರಾ ಶಾಲಾವರಣ ಚಿಕ್ಕದಾಗಿದ್ದು, ಇಲ್ಲಿ ಮತ್ತೊಂದು ಕಟ್ಟಡ ನಿರ್ಮಾಣವು ಮಕ್ಕಳಿಗೆ ತೊಂದರೆಯಾಗುತ್ತದೆ. ಫ್ಯಾಕ್ಟರಿ ಪ್ರದೇಶದಲ್ಲಿ ವಿಶಾಲ ಜಾಗದಲ್ಲಿ ಶಾಲೆ ನಿರ್ಮಿಸಬೇಕು ಎಂಬುದು ನಮ್ಮ ಒತ್ತಾಯ ಎಂದು ತಿಳಿಸಿದರು.

ಸ್ಥಳ ವೀಕ್ಷಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ. ಸಿದ್ದಪ್ಪ, ಕೆ. ಮಸ್ತಾನ್‌ಸಾಬ್, ಎಂ. ಉಸ್ಮಾನ್, ಲಡ್ಡು ಹೊನ್ನೂರವಲಿ, ಆರ್.ಪಿ. ಶಶಿಕುಮಾರ್, ಕೆ. ಕೃಷ್ಣ, ಎಚ್. ನಾಗರಾಜ, ಐ. ಹೊನ್ನೂರಸಾಬ್ ಹಾಗೂ ಎಂ. ರಾಜಭಕ್ಷಿ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ನೌಕರರ ಆರೋಗ್ಯ ಆಡಳಿತದ ಅಡಿಪಾಯ: ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ
ಮೇ 9,10ರಂದು ಅಖಿಲ ಭಾರತ ದೇವಾಂಗ ಜಾಗೃತ ಸಮಾವೇಶ: ಶ್ರೀನಿವಾಸ ಕಂಟ್ಲಿ