)
ಕನ್ನಡಪ್ರಭ ವಾರ್ತೆ ಬೆಂಗಳೂರು
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಘಟಿಕೋತ್ಸವದಲ್ಲಿ ಭಾಗವಹಿಸುವುದಕ್ಕೆ ಎನ್ಎಲ್ಎಸ್ಐಯುನ ನೂರಾರು ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಇತ್ತೀಚೆಗೆ ತೀವ್ರ ಆಕ್ಷೇಪ, ವಿರೋಧ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯ ಘಟಿಕೋತ್ಸವವನ್ನೇ ರದ್ದುಪಡಿಸಿದೆ.
ಈ ಸಂಬಂಧ ವಿವಿಯ ಎಲ್ಲ ಪದವೀಧರ ವಿದ್ಯಾರ್ಥಿಗಳಿಗೆ ಗುರುವಾರ ಪತ್ರದ ಮೂಲಕ ಮಾಹಿತಿ ನೀಡಿರುವ ಎನ್ಎಲ್ಎಸ್ಐಯು ಕುಲಸಚಿವರು, ವಿವಿಯ ಶೈಕ್ಷಣಿಕ ಆಡಳಿತ ಮಂಡಳಿಯು 2026ನೇ ಸಾಲಿನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಸೆ.12ರಂದು 34ನೇ ವಾರ್ಷಿಕ ಘಟಿಕೋತ್ಸವದ ಮೂಲಕ ಪದವಿ ಪ್ರದಾನ ಮಾಡಲು ದಿನಾಂಕ ಪ್ರಸ್ತಾಪಿಸಿ ಇಮೇಲ್ ಕಳುಹಿಸಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಹಾಗೂ ವಿವಿಯ ಶಕ್ತಿ ಮೀರಿದ ಪ್ರಯತ್ನಗಳ ಹೊರತಾಗಿಯೂ 34 ನೇ ವಾರ್ಷಿಕ ಘಟಿಕೋತ್ಸವವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.ಅಲ್ಲದೆ, ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅವರ ಗೈರುಹಾಜರಿಯಲ್ಲಿ ಪದವಿಗಳನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರಮಾಣಪತ್ರಗಳನ್ನು ಕ್ಯಾಂಪಸ್ನಲ್ಲಿ ಪಡೆಯಬಹುದು ಆಥವಾ ಕೊರಿಯರ್ ಮೂಲಕವೂ ಪಡೆಯಬಹುದು. ಇದರಲ್ಲಿ ಯಾವುದೇ ಆಯ್ಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.