ಅಮೆರಿಕ ಉಪಾಧ್ಯಕ್ಷರ ಭಾರತ ಭೇಟಿಗೆ ವಿರೋಧ

KannadaprabhaNewsNetwork | Published : Apr 22, 2025 1:52 AM

ಸಾರಾಂಶ

ದೇಶದಲ್ಲೇ ಎರಡನೆ ಅತಿ ದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ದೇಶದಲ್ಲಿ ತರಕಾರಿ, ಮೀನುಗಾರಿಕೆ, ಹೈನುಗಾರಿಕೆ, ಕೃಷಿ ಉತ್ಪನ್ನಗಳಿಗೆ ಉತ್ತಮ ದರ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಸುಂಕ ರಹಿತ ಅಮದಿಗೆ ಅ‍ವಕಾಶ ನೀಡಿದರೆ ರೈತ ದಿವಾಳಿ.

ಕನ್ನಡಪ್ರಭ ವಾರ್ತೆ ಕೋಲಾರಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡುವುದನ್ನು ವಿರೋಧಿಸಿ ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಸೋಮವಾರ ಪ್ರತಿಭಟನೆ ನಡೆಸಿತು.ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದ ಬೆದರಿಕೆ ಮೂಲಕ ಭಾರತದಲ್ಲಿ ಆಮೇರಿಕದ ಉತ್ಪನ್ನಗಳಿಗೆ ಸುಂಕ ಮುಕ್ತಗೊಳಿಸುವಂತೆ ಒತ್ತಡ ಹಾಕುತ್ತಿದೆ. ಇದು ದೇಶದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮರಣ ಶಾಸನವಾಗಲಿದೆ ಎಂದು ಆರೋಪಿಸಿದರು.ಸುಂಕಮುಕ್ತ ಕೃಷಿ ಉತ್ಪನ್ನಗಳು

ದೇಶದಲ್ಲೇ ಎರಡನೆ ಅತಿ ದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಲಕ್ಷಾಂತರ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ. ದೇಶದಲ್ಲಿ ತರಕಾರಿ, ಮೀನುಗಾರಿಕೆ, ಹೈನುಗಾರಿಕೆ, ಕೃಷಿ ಉತ್ಪನ್ನಗಳಿಗೆ ಉತ್ತಮ ದರ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಕಷ್ಟ ಹಾಗೂ ನಷ್ಟವನ್ನು ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ತೋಟಾಗಾರಿಕೆ ಉತ್ಪನ್ನಗಳ ಸುಂಕ ರಹಿತ ಅಮದಿಗೆ ಅ‍ವಕಾಶ ನೀಡಿದರೆ ರೈತರು ಸಂಪೂರ್ಣವಾಗಿ ದಿವಾಳಿಯಾಗಲಿದ್ದಾರೆ ಎಂದರುಅಮೇರಿಕಾದಲ್ಲಿ ಶೇ.೭೦ರಷ್ಟು ಮಾರುಕಟ್ಟೆ ಹೊಂದಿದ್ದ ಚೀನಾ, ಕೆನಡಾ, ಮೆಕ್ಸಿಕೋ ಮುಂತಾದ ದೇಶಗಳು ಆಮೇರಿಕಾದ ಸುಂಕ ಸಮರದ ಬೆದರಿಕೆಗೆ ಮಣಿಯದೇ ತಿರುಗೇಟು ನೀಡಿವೆ. ಆದರೆ ಆಮೆರಿಕಾದ ಜೊತೆ ವ್ಯಾಪಾರದ ಕೊರತೆ ಇರುವ ಭಾರತ ಇಂತಹ ದಿಟ್ಟ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸ್ವತಃ ನರೇಂದ್ರ ಮೋದಿರವರ ಸಮ್ಮುಖದಲ್ಲೇ ಭಾರತವನ್ನು ಸುಂಕ ರಾಜ ಎಂದು ಟ್ರಂಪ್ ಅಣಕಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದಾಗಲೂ ಸೂಕ್ತ ಪ್ರತಿಭಟನೆ ವ್ಯಕ್ತಪಡಿಸಲಿಲ್ಲ ಎಂದು ಟೀಕಿಸಿದರು. ಉದ್ಯಮಿಗಳ ಹಿತರಕ್ಷಣೆ

ಕೆಲವೇ ಕೆಲವು ದೊಡ್ಡ ಉದ್ಯಮಿಗಳಿಗೆ, ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಕೋಟ್ಯಂತರ ರೈತರ ಜೀವನವನ್ನೇ ಸರ್ವನಾಶ ಮಾಡಲು ಮಾತುಕತೆಗಳು ನಡೆಯುತ್ತಿವೆ. ವಾನ್ಸ್ ಭೇಟಿ ಹಿನ್ನೆಲೆಯಲ್ಲಿ ಆಮೇರಿಕಾ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ರವರು ಕೃಷಿ ಮಾರುಕಟ್ಟೆ ಮುಕ್ತಗೊಳಿಸುವುದೇ ಭಾರತದ ಮಾತುಕತೆಯಲ್ಲಿ ಪ್ರಮುಖ ಅದ್ಯತಾ ವಿಷಯವಾಗಿದ್ದು ಯಾವುದೇ ಸುಂಕ ಹಾಗೂ ಇತರೆ ತಡೆಗಳನ್ನು ನಿವಾರಿಸಬೇಕು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು.

ಶಾಸನ ಸಬೆಯಲ್ಲಿ ಚರ್ಚಿಸಲಿ

ಅದ್ದರಿಂದ ಆಮೇರಿಕಾ ಉಪಾಧ್ಯಕ್ಷ ಜೊತೆ ವಾಣಿಜ್ಯ ಮಾತುಕತೆಗಳನ್ನು ರದ್ದುಪಡಿಸಬೇಕು. ಆಮೇರಿಕಾದ ಸುಂಕ ಸಮರದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸಲು ಕೂಡಲೇ ಸಂಸತ್ತು ಹಾಗೂ ಶಾಸನಸಭೆಗಳಲ್ಲಿ ಚರ್ಚಿಸಿ ಸೂಕ್ತ ಮಾರ್ಗೋಪಾಯಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದರು.ಈ ಸಂದರ್ಭದಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅಲಹಳ್ಳಿ ವೆಂಕಟೇಶಪ್ಪ, ಉಪಾಧ್ಯಕ್ಷರಾದ ಎನ್.ಎನ್.ಶ್ರೀರಾಮ್, ಗಂಗಮ್ಮ, ಕಾರ್ಯದರ್ಶಿ ವಿ.ನಾರಾಯಣರೆಡ್ಡಿ, ಶ್ರೀಧರ್ ರೆಡ್ಡಿ, ವಿರೇಗೌಡ, ನಾರಾಯಣಸ್ವಾಮಿ, ರಾಜೇಂದ್ರಪ್ರಸಾದ್, ನೀಲಮ್ಮ, ಸರೋಜಮ್ಮ, ನಾರಾಯಣಪ್ಪ, ವಿಜಯಕೃಷ್ಣ, ಎಂ.ಭೀಮರಾಜ್ ಇದ್ದರು.

Share this article