ಹಾವೇರಿ: ಶಿಕ್ಷಣವು ಸಾಮಾನ್ಯ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ಬದಲಾಗಿ ವ್ಯಾಪಾರೀಕರಣವಾಗುತ್ತಿದೆ. ಆದರಿಂದ ಶೈಕ್ಷಣಿಕ ಸಮಗ್ರ ಅಭಿವೃದ್ಧಿಗಾಗಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಂಘಟಿತರಾಗಬೇಕು ಎಂದು ಡಿವೈಎಫ್ಐ ಜಿಲ್ಲಾ ಸಂಚಾಲಕ, ವಕೀಲ ನಾರಾಯಣ ಕಾಳೆ ಹೇಳಿದರು.
ಪ್ರಾಚಾರ್ಯ ಡಿ.ಟಿ. ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳ ಪರವಾಗಿ ಹೀಗೆ ನಿರಂತರವಾಗಿ ಚಳವಳಿ ರೂಪಿಸುವ ಸಂಘಟನೆಯ ನ್ಯಾಯಯುತ ಬೇಡಿಕೆಗಳು ಈಡೇರಲಿ. ಅಭ್ಯಾಸದ ಕಡೆ ಹೆಚ್ಚು ಗಮನ ನೀಡಬೇಕು. ದೇಶದ ಮುಂದಿನ ಪ್ರಜೆಗಳು ವಿದ್ಯಾರ್ಥಿ-ಯುವಕರು ಜಾಗ್ರತರಾಗಬೇಕು. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಹೋರಾಟ, ಸಮ್ಮೇಳನ ಯಶಸ್ವಿಯಾಗಲಿ ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಮಾರುಕಟ್ಟೆಯಲ್ಲಿ ಸರಕುಗಳನ್ನು ಮಾರಾಟ ಮಾಡಿದಂತೆ ಶಿಕ್ಷಣವನ್ನು ವ್ಯಾಪಾರ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿದ್ದು, ದೇಶದ ಶಿಕ್ಷಣ ವ್ಯವಸ್ಥೆಯನ್ನು ವಿದೇಶಿಯರ ಜವಾಬ್ದಾರಿಗೆ ಒಪ್ಪಿಸುತ್ತಿದೆ. ಸಂಕಷ್ಟದಲ್ಲಿರುವ ಬಡವರನ್ನು ಶಿಕ್ಷಣದಿಂದ ಸಂಪೂರ್ಣವಾಗಿ ವಂಚಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ. ಶಿಕ್ಷಣಕ್ಕಾಗಿ ಬೇರೆ ದೇಶಗಳಿಂದ ಸಾಲ ತರುವ ಭಾರತ ಸರ್ಕಾರದ ಕ್ರಮ ಶಿಕ್ಷಣ ವಿರೋಧಿಯಾಗಿದೆ. ಇದರ ವಿರುದ್ಧ ಧ್ವನಿ ಎತ್ತಲು ವಿದ್ಯಾರ್ಥಿ-ಯುವಜನರ ಮುಂದಾಗಬೇಕು ಎಂದರು.ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್, ರಾಣಿಬೆನ್ನೂರು ತಾಲೂಕು ಕಾರ್ಯದರ್ಶಿ ಶ್ರುತಿ ಆರ್.ಎಂ, ಕೀರ್ತನಾ ಎಚ್. ಉಪಸ್ಥಿತರಿದ್ದರು. ಎಸ್ಎಫ್ಐ ಮುಖಂಡರಾದ ಸುಲೇಮಾನ್ ಮತ್ತಿಹಳ್ಳಿ, ಪರಶುರಾಮ ಹರಿಜನ, ಜಗದೀಶ ಎರೇಸೀಮಿ, ಜಗದೀಶ ಬಡಿಗೇರ, ಮಲ್ಲಿಕಾರ್ಜುನ, ಪ್ರಗತಿ ಪಾಟೀಲ, ವಿಜಯ ಶಿರಹಟ್ಟಿ ಹಾಗೂ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪಾರ್ವತಿ ಕರೆಮ್ಮಣ್ಣನವರ ಸ್ವಾಗತಿಸಿದರು. ಸ್ವಾತಿ ಓಲೇಕಾರ ಕಾರ್ಯಕ್ರಮ ನಿರೂಪಿಸಿದರು. ಗುದ್ಲೇಶ್ ಇಚ್ಚಂಗಿ ವಂದಿಸಿದರು.