ಸಾರ್ವಜನಿಕ ಆಸ್ಪತ್ರೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವ
ಕನ್ನಡಪ್ರಭ ವಾರ್ತೆ ಕೊರಟಗೆರೆರಾಜ್ಯೋತ್ಸವ ಕೇವಲ ನವೆಂಬರ್ 1ಕ್ಕೆ ಸಿಮೀತವಾಗದೆ ಪ್ರತಿದಿನ ನಮ್ಮ ಕನ್ನಡ ಭಾಷೆ ಬಳಕೆಯಾಗಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳಿಂದ ಆಯೋಜನೆ ಮಾಡಲಾಗಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ನವಂಬರ್ ಮಾತ್ರವೇ ಕನ್ನಡ ರಾಜ್ಯೋತ್ಸವ ಅಲ್ಲ ಪ್ರತಿದಿನ ಪ್ರತಿ ಕ್ಷಣವೂ ಕನ್ನಡ ನಾಡಿನಲ್ಲಿ ದೀಪ ಬೆಳಗುವ ಹಾಗೆ ಕನ್ನಡ ಬೆಳಗುತ್ತಿರಬೇಕು. ಇಲ್ಲಿ ಅನೇಕ ಮಹನೀಯರು ಹುಟ್ಟಿ ಬೆಳೆದ ನಮ್ಮ ಕನ್ನಡ ಭಾಷೆಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಈರಣ್ಣ ಮಾತನಾಡಿ ನ. 1 ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ದಿನವೆಂದು ಆಚರಣೆ ಮಾಡಲಾಗುತ್ತದೆ. 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನ ವಿಲೀನಗೊಳಿಸಿ ಮೈಸೂರು ರಾಜ್ಯವನ್ನ ರಚಿಸಲಾಯಿತು. ಕರ್ನಾಟಕ ಹೆಸರು ಬಂದಿದ್ದು ಹೇಗೆ ಎಂದರೆ ಕರ್ನಾಟಕದ ಪದದ ಮೂಲ ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ ಎಂದು ತಿಳಿಸಿದರು.68ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವೈದ್ಯಕೀಯ ಹಾಗೂ ಆಸ್ಪತ್ರೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಆಸ್ಪತ್ರೆಯನ್ನು ಸ್ವಚ್ಛತೆಯಿಂದ ತನ್ನ ಮನೆಯಂತೆ ಕಾಪಾಡಿಕೊಂಡು ಬಂದಿರುವ ಸಿಬ್ಬಂದಿಗೂ ಹಾಗೂ ಉತ್ತಮ ಸೇವೆ ಸಲ್ಲಿಸಿ ಇಲ್ಲಿಂದ ಮುಂಬಡ್ತಿ ಹೊಂದಿರುವ ಡಾಕ್ಟರ್ ಮೋಹನ್ ದಾಸ್ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವೈದ್ಯರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೆ ತಾಲೂಕು ವೈದ್ಯಾಧಿಕಾರಿ ಡಾ. ಲಕ್ಷ್ಮಿಕಾಂತ್ ಹಾಗೂ ಆಸ್ಪತ್ರೆಯ ವೈದ್ಯರ ತಂಡದಿಂದ ಬಹುಮಾನ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರುದ್ರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಈರಣ್ಣ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ. ಪುಷಲತಾ, ಡಾ. ಶಶಿಧರ್, ಡಾ. ನವೀನ್, ಡಾ. ಪುರುಷೋತ್ತಮ್ ನಾಯಕ್ ಹಾಜರಿದ್ದರು.