ಕನ್ನಡಪ್ರಭ ವಾರ್ತೆ ಕುಂದಾಪುರ
ಕೃಷಿ ಕಾಯಕ ಉಳಿದರೆ ಮಾತ್ರ ಮುನುಕುಲ ಉಳಿಯಲು ಸಾಧ್ಯ. ರೈತ ಬೆಳೆದರೆ ದೇಶ ಬೆಳೆಯಲು ಸಾಧ್ಯ, ಈ ನಿಟ್ಟಿನಲ್ಲಿ ಕೃಷಿ ಕಾಯಕದಿಂದ ವಿಮುಖರಾಗದಂತೆ ಪ್ರತಿಯೊಬ್ಬರು ಯೋಚಿಸಬೇಕಿದೆ ಎಂದು ಬ್ರಹ್ಮಾವರ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ಹೇಳಿದರು.ಅವರು ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್, ರೈತಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ಸ್ನೇಹಕೂಟ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಮಾಲಿಕೆಯ ೪೬ನೇ ಕಾರ್ಯಕ್ರಮದಲ್ಲಿ ಐರೋಡಿ ರಘುರಾಮ ಮಡಿವಾಳ ಇವರನ್ನು ಗೌರವಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪಂಚವರ್ಣ ಸಂಘಟನೆ ರೈತರೆಡೆಗೆ ಕಾರ್ಯಕ್ರಮ ಮನೆಮನ ಮುಟ್ಟುವಂತಾಗಿದೆ. ಸಾಮಾಜಿಕ ಬದ್ಧತೆಯಲ್ಲಿ ಪಂಚವರ್ಣ ಇತಿಹಾಸ ಸೃಷ್ಟಿಸಲು ಸಜ್ಜಾಗಿರುವುದು ಶ್ಲಾಘನೀಯ. ಯುವ ಸಮೂಹ ಹೆಚ್ಚೆಚ್ಚು ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ರೈತ ಸಾಧಕ ರಘುರಾಮ ಮಡಿವಾಳ ದಂಪತಿಯನ್ನು ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು.ರೈತರೆಡೆಗೆ ಕಾರ್ಯಕ್ರಮದ ವಿಶೇಷತೆಯ ಅಂಗವಾಗಿ ಗೋ ಪೂಜೆ ನೆರವೆರಿಸಿಕೊಂಡು ಗಿಡ ನೆಟ್ಟು ಪರಿಸರ ಜಾಗೃತಿ ಮೆರೆಯಲಾಯಿತು.ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಸ್ಥಳೀಯ ಸಾಂಸ್ಕೃತಿಕ ಚಿಂತಕ ಭೀಷ್ಮಗೋಪಾಲ್, ಸ್ನೇಹಕೂಟದ ಕೋಶಾಧಿಕಾರಿ ವಿಜಯಲಕ್ಷ್ಮೀ ಭಟ್, ಗೆಳೆಯರ ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಪಂಚವರ್ಣದ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಪೂರ್ವಾಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.ಮಹಿಳಾ ಮಂಡಲ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಯುವಕ ಮಂಡಲದ ಸದಸ್ಯ ಮಹೇಶ್ ಬೆಳಗಾವಿ ವಂದಿಸಿದರು. ಕಾರ್ಯಕ್ರಮವನ್ನು ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.