ಆಧಾರವಿಲ್ಲದೇ ವಕ್ಫ್‌ ಬೋರ್ಡ್‌ ನಮೂದಿಸಿದ್ದಕ್ಕೆ ಆಕ್ರೋಶ

KannadaprabhaNewsNetwork | Updated : Nov 05 2024, 01:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ರೈತರ ಅಭಿಪ್ರಾಯ ಹಾಗೂ ಮೂಲಾಧಾರವಿಲ್ಲದೇ ರೈತರ ಜಮೀನುಗಳ ಮೇಲೆ ವಕ್ಫ್ ಬೋರ್ಡ್‌ ಎಂದು ನಮೂದಿಸಿದ್ದನ್ನು ಖಂಡಿಸಿ ತಾಲೂಕಿನ ಕುಂಟೋಜಿ, ಬಿದರಕುಂದಿ ಗ್ರಾಮದ ರೈತರು ಸೇರಿ ತಾಲೂಕಿನ ರೈತರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಬಲರಾಮ್‌ ಕಟ್ಟಿಮನಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರೈತರ ಅಭಿಪ್ರಾಯ ಹಾಗೂ ಮೂಲಾಧಾರವಿಲ್ಲದೇ ರೈತರ ಜಮೀನುಗಳ ಮೇಲೆ ವಕ್ಫ್ ಬೋರ್ಡ್‌ ಎಂದು ನಮೂದಿಸಿದ್ದನ್ನು ಖಂಡಿಸಿ ತಾಲೂಕಿನ ಕುಂಟೋಜಿ, ಬಿದರಕುಂದಿ ಗ್ರಾಮದ ರೈತರು ಸೇರಿ ತಾಲೂಕಿನ ರೈತರ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಬಲರಾಮ್‌ ಕಟ್ಟಿಮನಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ತಹಸೀಲ್ದಾರ್‌ ಕಚೇರಿಗೆ ತೆರಳಿ ಕಚೇರಿ ಮುಂದೆ ಸರ್ಕಾರದ ಆದೇಶದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 1973ರ ಗೆಜೆಟ್‌ನಲ್ಲಿ ವಕ್ಫ್‌ ಆಸ್ತಿ ಹಾಗೂ ಪಹಣಿಗಳಲ್ಲಿನ ವಕ್ಫ್‌ ಹೆಸರು ತೆಗೆದು ಹಾಕುವಂತೆ ಒತ್ತಾಯಿಸಿದರು.

ಈ ವೇಳೆ ಮುಖಂಡ ಸಿದ್ದು ಹೆಬ್ಬಾಳ ಮಾತನಾಡಿ, ತಾಲೂಕಿನ ಕುಂಟೋಜಿ ಹಾಗೂ ಬಿದರಕುಂದಿ ಗ್ರಾಮಗಳ ಬಹುತೇಕ ರೈತರ ಜಮೀನುಗಳು ಇನಾಮ್‌ ಜಮೀನುಗಳಾಗಿವೆ. ಆದರೇ 1961ರಲ್ಲೇ ಇವುಗಳ ಉತಾರೆಯಲ್ಲಿದ್ದ ಸರ್ಕಾರ ಎಂದು ನಮೂದಿಸಿದ್ದನ್ನು ತೆಗೆದು ಹಾಕಿ ಸಂಪೂರ್ಣ ರೈತರೇ ಮಾಲಿಕರು ಎಂಬುದನ್ನು ಖಚಿತ ಪಡಿಸಲಾಗಿತ್ತು. ಆದರೆ, ವಕ್ಫ್ ಬೋರ್ಡ್‌ ಏಕಾಏಕಿ ಕೆಲ ಸರ್ವೇ ನಂಬರ್‌ಗಳ ಉತಾರದಲ್ಲಿ ವಕ್ಫ್ ಎಂದು ನಮೂದಿಸಿದೆ. ಇಂತಹ ಅನೇಕ ಪ್ರಕರಣಗಳನ್ನು ಗಮನಿಸಿದ್ದರೂ ಯಾರೂ ಕೂಡ ರೈತರ ಪರವಾಗಿ ವಕ್ಫ್ ಮಂಡಳಿಯ ವಿರುದ್ಧ ಧ್ವನಿ ಎತ್ತಿರಲಿಲ್ಲ. ಆದರೆ,ವಿಜಯಪುರ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರು ರೈತರ ಪರವಾಗಿ ವಕ್ಫ್‌ ವಿರುದ್ಧ ಧ್ವನಿ ಎತ್ತುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ರೈತರ ಪರವಾಗಿ ನಿಂತಿರುವ ಏಕೈಕ ನಾಯಕರಾಗಿದ್ದಾರೆ. ಸಧ್ಯ ಉತಾರದಲ್ಲಿ ನಮೂದಿಸಿದ ತಕ್ಷಣ ರೈತರ ಜಮೀನುಗಳ ಮೇಲೆ ಇರುವ ವಕ್ಫ್‌ ಬೋರ್ಡ್ ಪದವನ್ನು ತೆಗೆದು ಹಾಕಿ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೇ ಇದೇ ನ.6ರಿಂದ ಪಟ್ಟಣದ ತಹಸೀಲ್ದಾರ್‌ ಕಚೇರಿ ಮುಂದೆ ಆಮರಣ ಉಪವಾಸ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ಕುಂಟೋಜಿ ಗ್ರಾಮದ ಸ. ನಂ. 277, 278, 279, 289, 290, 291, 300, 301, 303, 304, 305, 311, 312, 313, 466/2ರಲ್ಲಿ ಅಂದಾಜು 380 ಜಮೀನುಗಳನ್ನು ಕೆಲವರು ಖರೀದಿ ಮಾಡಿದ್ದಾರೆ. ಇನ್ನು, ಕೆಲವರ ಆಸ್ತಿಗಳು ಪಿತ್ರಾರ್ಜಿತರ ಹೆಸರಿನಲ್ಲಿಯೇ ಇವೆ. ಈ ರೀತಿಯ ಜಮೀನುಗಳಲ್ಲಿ 2019 ಜನವೇರಿಯಲ್ಲಿ ವಕ್ಫ್‌ ಆಸ್ತಿ ಎಂದು 11ನೇ ಕಾಲಂನಲ್ಲಿ ನಮೂದಿಸಲಾಗಿದೆ. ಇದರಿಂದ ರೈತರು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ಈ ರೈತರಿಗೆ ಕೂಡಲೇ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಗುರುಲಿಂಗಪ್ಪ ಸುಲ್ಲಳ್ಳಿ, ಸಂತೋಷಗೌಡ ಬಿರಾದಾರ, ಗುರುಪಾದ ಹೆಬ್ಬಾಳ, ಅಬ್ಬಿಹಾಳಮಠ, ಮಲ್ಲಿಕಾರ್ಜುನ ನಾಟಿಕಾರ, ಸಚಿನ ಚಿನ್ನಾಪೂರ, ಈರಣ್ಣ ಹೂಗಾರ, ಸಂಗಣ್ಣ, ದುರ್ಗಪ್ಪ ಕವಡಿಮಟ್ಟಿ ಸೇರಿ ಕುಂಟೋಜಿ ಹಾಗೂ ಬಿದರಕುಂದಿ ಗ್ರಾಮದ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ಇದ್ದರು.-------

ಕೋಟ್‌

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಓಡಾಡಿ ಓಟ ಹಾಕಿಸಿದ್ದೇವೆ. ಆದರೆ, ಇಂದು ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ರೈತರ ಪರವಾಗಿ ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಶಾಸಕ ಸಿ.ಎಸ್.ನಾಡಗೌಡ ಅವರು ರೈತರ ಧ್ವನಿಯಾಗಿ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ರೈತರ ಪರವಾಗಿ ನಿಲ್ಲಬೇಕು.

ಭೀಮಶಿ ಹೂಗಾರ, ಪ್ರಗತಿಪರ ರೈತ

Share this article