ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗೋರೂರು ಜಲಾಶಯದ ಹೇಮಾವತಿ ಎಡದಂಡೆ ನಾಲೆ ತಾಲೂಕಿನ ಮೂಲಕ ಹಾದು ಹೋಗುತ್ತದೆ. ಮುಖ್ಯ ನಾಲೆಗೆ ಸೇರಿದ 54ನೇ ವಿತರಣಾ ನಾಲೆ ತಾಲೂಕಿನ ಕುಂದೂರು ಬಳಿಯಿಂದ ಕೃಷ್ಣಾಪುರ ಮಾರ್ಗವಾಗಿ ಮುಂದೆ ಸಾಗಿ ರೈತರ ಸಾವಿರಾರು ಎಕರೆ ಜಮೀನಿಗೆ ನೀರುಣಿಸುತ್ತದೆ.
54ನೇ ವಿತರಣಾ ನಾಲಾ ವ್ಯಾಪ್ತಿಗೆ ಸೇರಿದ ಕೃಷ್ಣಾಪುರ ಮೈನರ್ ನಾಲೆಯ ಒಳಭಾಗದಲ್ಲಿ ಸೆಸ್ಕಾಂ ಇಂಜಿನಿಯರುಗಳು ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಮೂಲಕ ನಾಲೆಯ ನೀರು ಹರಿಯುವಿಕೆಗೆ ಅಡಚಣೆ ಮಾಡಿದ್ದಾರೆ.ಸೆಸ್ಕಾಂ ಎಂಜಿನಿಯರ್ಗಳ ಕಾರ್ಯವೈಖರಿ ಖಂಡಿಸಿರುವ ರೈತ ಮುಖಂಡ ಕೃಷ್ಣಾಪುರ ರಾಜಣ್ಣ, ತಕ್ಷಣವೇ ಕಾಲುವೆಯ ಒಳ ಭಾಗದಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.
ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳನ್ನು ಅಳಡಿಸಿದ ಸೆಸ್ಕಾಂ ಎಂಜಿನಿಯರುಗಳ ಮೇಲೆ ಕ್ರಮ ಜರುಗಿಸಬೇಕು. ತನ್ನ ವ್ಯಾಪ್ತಿಯ ನಾಲೆಯಲ್ಲಿ ಪೂರ್ವಾನುಮತಿಯಿಲ್ಲದೆ ವಿದ್ಯುತ್ ಕಂಬಗಳನ್ನು ಅಳವಡಿಸಿದವರ ವಿರುದ್ಧ ನೀರಾವರಿ ಇಲಾಖೆ ಪೊಲೀಸರಿಗೆ ದೂರು ನೀಡುವ ಮೂಲಕ ಬೇಜವಾಬ್ದಾರಿ ನೌಕರರ ವಿರುದ್ಧ ಕ್ರಮ ಜರುಗಿಸುವಂತೆ ರೈತ ಮುಖಂಡ ಕೃಷ್ಣಾಪುರ ರಾಜಣ್ಣ ಆಗ್ರಹಿಸಿದ್ದಾರೆ.