ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹೊರಗುತ್ತಿಗೆ ಬೋಧಕೇತರ ಸಿಬ್ಬಂದಿಗೆ ಕಳೆದ ೯ ತಿಂಗಳಿನಿಂದ ವೇತನ ಬಾಕಿ ಉಳಿದಿರುವುದನ್ನು ವಿರೋಧಿಸಿ ನೌಕರರು ಬುಧವಾರ ಆಡಳಿತ ಭವನಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬಳಿಕ ನೌಕರರ ನಿಯೋಗವು ಕುಲಪತಿಯನ್ನು ಭೇಟಿ ಮಾಡಿ ೯ ತಿಂಗಳ ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿತು. ಈ ವೇಳೆ ಮಧ್ಯ ಪ್ರವೇಶಿಸಿದ ಕುಲಪತಿ, ತಕ್ಷಣ ೨ ತಿಂಗಳ ವೇತನವನ್ನು ಎರಡು ದಿನಗಳೊಳಗೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಉಳಿದ ಬಾಕಿ ವೇತನವನ್ನು ಶೀಘ್ರದಲ್ಲೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕುಲಪತಿ ಭರವಸೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದ ನೌಕರರು, ನೀಡಿದ ಭರವಸೆಯಂತೆ ಬೇಡಿಕೆ ಈಡೇರದಿದ್ದರೆ ಮುಂದಿನ ಸೋಮವಾರದಿಂದ ಮತ್ತೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ವೇತನ ವಿಳಂಬದಿಂದ ಸಂಕಷ್ಟ ಅನುಭವಿಸುತ್ತಿರುವ ಹೊರಗುತ್ತಿಗೆ ಸಿಬ್ಬಂದಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಬಸವರಾಜ ಬಳಿಗಾರ, ಮಹೇಶ ಎಮೋಜಿ, ರತ್ನವ್ವ ಓಲೇಕಾರ, ಮಂಜುಳಾ ತಳವಾರ, ಫಕ್ಕೀರವ್ವ ಮುಗದೂರ, ಮಂಜುಳಾ ಇಂಗಳಗಿ, ಸುರೇಶ ಬಂಡಿವಡ್ಡರ, ಸುರೇಶ ಲಮಾಣಿ, ಉಮೇಶ ಸುರಗೋಂಡ, ಸುರೇಶ ಬಿಂದಲಗಿ, ರಾಜಶ್ರೀ ಸಿಂದೆ, ನಿಂಗವ್ವ ಹರಿಜನ, ಅವಿನಾಶ ಇಂಗಳಗಿ ಇದ್ದರು.