ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ಅಂಜುಮನ್ ತಾಂತ್ರಿಕ ಕಾಲೇಜಿನಲ್ಲಿ 43ನೇ ಪದವಿ ಪ್ರದಾನ ಸಮಾರಂಭ ಹಾಗೂ 46ನೇ ವಾರ್ಷಿಕೋತ್ಸವ ನಡೆಯಿತು.

ಮುಖ್ಯ ಅತಿಥಿಗಳಾಗಿದ್ದ ಚಿನಾರ್ ಕ್ವಾಂಟಮ್ ಎಐ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಾಹಿದ್ ಅಬ್ಬಾಸ್ ಮಿರ್ ಮಾತನಾಡಿ, ನವೋದ್ಯಮ, ತಂತ್ರಜ್ಞಾನ ಹಾಗೂ ಉದ್ಯಮ ಸನ್ನದ್ಧತೆಯ ಮಹತ್ವ ವಿವರಿಸಿದರು.

ಗೌರವ ಅತಿಥಿಯಾದ ಚಿನಾರ್ ಕ್ವಾಂಟಮ್ ಎಐ ಸಂಸ್ಥೆಯ ಮುಖ್ಯ ನವೋದ್ಯಮ ಅಧಿಕಾರಿ ಗೋಕುಲ್ ಬಿ. ಅಲೆಕ್ಸ್ ನಿರಂತರ ಕಲಿಕೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಸಂದರ್ಭ ಎಐಟಿಎಂ ಹಾಗೂ ಚಿನಾರ್ ಕ್ವಾಂಟಮ್ ಎಐ ಸಂಸ್ಥೆಗಳ ನಡುವೆ ಪರಸ್ಪರ ಸಹಕಾರದ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ವಿದ್ಯಾರ್ಥಿಗಳಿಗೆ ತರಬೇತಿ, ಇಂಟರ್ನ್‌ಶಿಪ್, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳನ್ನು ಮತ್ತಷ್ಟು ವಿಸ್ತರಿಸುವಲ್ಲಿ ನೆರವಾಗಲಿದೆ ಎಂದು ಮನವರಿಕೆ ಮಾಡಲಾಯಿತು. ಶೈಕ್ಷಣಿಕ ಸಾಧನೆ, ನವೋದ್ಯಮ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಹಾಕ್ ಶಾಬಂದ್ರಿ ಹಾಗೂ ಎಐಟಿಎಂ ಕಾಲೇಜು ಆಡಳಿತ ಮಂಡಳಿಯ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರ್ ದಮ್ದಾ ಅಬು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಕಾಲೇಜಿನ ಅಭಿವೃದ್ಧಿಗೆ ಶ್ರಮಿಸಿದ ಪ್ರಾಂಶುಪಾಲರು, ಬೋಧಕ ಹಾಗೂ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಹಾಮಿ-ಎ-ಮುಸ್ಲಿಮೀನ್‌ನ ಉಪಾಧ್ಯಕ್ಷ ಜನಾಬ್ ಮೊಹಮ್ಮದ್ ಸಾದಿಕ್ ಪಿಲ್ಲೂರ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಥೆಯ ಬದ್ಧತೆ ಬಗ್ಗೆ ತಿಳಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಡಾ. ಜುಬೈರ್ ಕೋಲಾ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್ ಜುಕಾಕು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಫಜ್ಲುರ್ ರಹಮಾನ್ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಅತಿಥಿಗಳ ಪರಿಚಯವನ್ನು ಕಾಲೇಜಿನ ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ನೆರವೇರಿಸಿದರು. ಉಪನ್ಯಾಸ ಡಾ. ಕಿರಣ ಶಾನಭಾಗ ವಂದಿಸಿದರು. ಪ್ರೊ. ಶ್ರೀಶೈಲ ಭಟ್, ಮೊಹಮ್ಮದ್ ಇಯಾದ್ ಹಾಗೂ ಮೊಹಮ್ಮದ್ ಜೈದ್ ನಿರೂಪಿಸಿದರು.