ವಿ.ಆರ್.ಡಿ.ಎಂ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆಯಲ್ಲಿ ಶಾಸಕಕನ್ನಡಪ್ರಭ ವಾರ್ತೆಹಳಿಯಾಳ
ಕಳೆದ ಇಪ್ಪತ್ತೆಂಟು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಮಾದರಿ ಕಾರ್ಯನಿರ್ವಹಿಸುತ್ತ ಬಂದಿರುವ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಮುಂದೇಯೂ ಸಮಾಜಮುಖಿಯಾಗಿ ಸೇವಾ ಕಾರ್ಯಗಳನ್ನು ಮುಂದುವರೆಸಲಿದೆ ಎಂದು ಟ್ರಸ್ಟ್ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ಭರವಸೆ ನೀಡಿದರು.ಬುಧವಾರ ಪಟ್ಟಣದ ಕೆನರಾಬ್ಯಾಂಕ್ ದೇಶಪಾಂಡೆ ಆರ್ ಸೆಟಿ ಸಭಾಂಗಣದಲ್ಲಿ ಆಯೋಜಿಸಿದ ವಿಆರ್ಡಿಎಂ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟ್ರಸ್ಟ್ ಮುಖ್ಯವಾಗಿ ಯುವಜನರನ್ನು ಹಾಗೂ ನಿರುದ್ಯೋಗಿ ಯುವಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಗೌರವದ ಬದುಕನ್ನು ಕಟ್ಟಿಕೊಡುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ವಿ.ಆರ್.ಡಿ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೇಶಪಾಂಡೆ ಕೆನರಾಬ್ಯಾಂಕ್ ಆರ್ ಸೆಟಿ ಸಂಸ್ಥೆಯಲ್ಲಿ ಈವರೆಗೆ 28ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಉಚಿತ ತರಬೇತಿ ಮತ್ತು ಸ್ವಾವಲಂಬಿ ಬದುಕಿಗಾಗಿ ಸಹಕಾರ ನೀಡಲಾಗಿದೆ ಎಂದರು.ಬೆಂಗಳೂರಿನ ಒಸಾಟ ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಧರ್ಮದರ್ಶಿ ವಾದಿರಾಜ್ ಭಟ್ ಮಾತನಾಡಿ, ದಾನಿಗಳ ನೆರವಿನ ಆಶ್ರಯದಲ್ಲಿ ಸ್ಥಾಪನೆಯಾಗಿರುವ ತಮ್ಮ ಒಸಾಟ ಸಂಸ್ಥೆಯು ರಾಜ್ಯದಲ್ಲಿ ಈಗಾಗಲೇ ಮೂಲಭೂತ ಸೌಲಭ್ಯಗಳುಳ್ಳ 86 ಶಾಲೆಗಳನ್ನು ಹಾಗೂ ದೇಶದ 10 ರಾಜ್ಯಗಳಲ್ಲಿ 150ಕ್ಕೂ ಹೆಚ್ಚು ಶಾಲೆಗಳನ್ನು ಪ್ರಾರಂಭಿಸಿ ಯಶಸ್ವಿಯಾಗಿ ಮಕ್ಕಳಿಗೆ ಘನತೆಯುಳ್ಳ ಹಾಗೂ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ನೀಡುತ್ತಿದೆ. ನಮ್ಮ ಸಂಸ್ಥೆಯು ಹಳಿಯಾಳ ತಾಲೂಕಿನಲ್ಲಿಯೂ ತನ್ನ ಸೇವಾ ವ್ಯಾಪ್ತಿ ವಿಸ್ತರಿಸಲು ಯೋಜಿಸಿದ್ದು, ಮುಂಬರುವ ದಿನಗಳಲ್ಲಿ ಹಳಿಯಾಳದಲ್ಲೂ ನಮ್ಮ ಶಾಲೆ ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಹಾಗೆಯೇ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿರಸಿಯ ಪೂರ್ಣಿಮಾ ಹೆಗಡೆ, ಸುಯೋಗಾಶ್ರಮವನ್ನು ಸ್ಥಾಪಿಸುವ ಮೂಲಕ ನಿರ್ಗತಿಕ, ಅನಾಥ ವಯೋವೃದ್ಧರಿಗೆ ಆಶ್ರಯಧಾತೆಯಾಗಿರುವ ಶಿರಸಿಯ ಲತಿಕಾ ಭಟ್, ಜಿಲ್ಲೆಯ ಉದ್ಯೋನ್ಮುಖ ಕ್ರೀಡಾಪಟು ದಾಂಡೇಲಿಯ ಸಾಯಿನಾಥ ಮಾನು ಧವನ, ಅಂತಾರಾಷ್ಟ್ರೀಯ ಕ್ರೀಡಾಪಟು ಜೋಯಿಡಾದ ದೀಕ್ಷಿತಾ ಆರ್. ಗೌಡ, ಜಪಾನಿನ ಸಕುರಾ ಸೈನ್ಸ್ ಟೆಕ್ನಾಲಜಿ ಕಾರ್ಯಕ್ರಮಕ್ಕೆ ಆಯ್ಕೆಯಾದ ಆಕಾಶ ಉದಯ ಹರಿಕಾಂತ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ ಧರ್ಮದರ್ಶಿ ರಾಧಾ ಆರ್. ದೇಶಪಾಂಡೆ, ಸದಸ್ಯ ಕಾರ್ಯದರ್ಶಿ ಶ್ಯಾಮ ಕಾಮತ್ ಇದ್ದರು.ಹಳಿಯಾಳ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ಉದ್ಯಮಿಗಳು, ಕಾಂಗ್ರೆಸ್ ಮುಖಂಡರು, ಸಂಘ-ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು ಇದ್ದರು. ಟ್ರಸ್ಟ್ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಸ್ವಾಗತಿಸಿದರು. ಶ್ರೀಧರ ಬುಳ್ಳಣ್ಣನವರ ಹಾಗೂ ನೆಲ್ಸಿ ಗೊನ್ಸಾಲ್ವಿಸ್ ಮತ್ತು ಬಸವರಾಜ್ ಎಚ್.ಎಂ. ಕಾರ್ಯಕ್ರಮ ನಿರ್ವಹಿಸಿದರು.