ಶೇ.10ರಷ್ಟು ಮಜೂರಿ ಹೆಚ್ಚಳಕ್ಕೆ ಮಾಲೀಕರ ಅಸ್ತು

KannadaprabhaNewsNetwork |  
Published : Jul 20, 2026, 01:45 AM IST
ಸಂಧಾನ ಯಶಸ್ವಿ, ಬನಹಟ್ಟಿ ನಗರದಲ್ಲಿ ಮತ್ತೆ ಶುರುವಾದ ಮಗ್ಗಗಳ ಸದ್ದು! | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಮಜೂರಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಬುಧವಾರದಿಂದ ಪವರ್ಲೂಮ್ ಮಗ್ಗಗಳ ಕೆಲಸವನ್ನು ಬಹಿಷ್ಕರಿಸಿದ್ದ ಬನಹಟ್ಟಿ ನಗರದ ನೇಕಾರರು ಹಾಗೂ ಮಗ್ಗ ಮಾಲೀಕರ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ನಗರದಾದ್ಯಂತ ಸ್ಥಗಿತಗೊಂಡಿದ್ದ ಮಗ್ಗಗಳು ಮತ್ತೆ ಭಾನುವಾರದಿಂದ ಸದ್ದು ಶುರು ಮಾಡಿವೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಜೂರಿ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ ಬುಧವಾರದಿಂದ ಪವರ್ಲೂಮ್ ಮಗ್ಗಗಳ ಕೆಲಸವನ್ನು ಬಹಿಷ್ಕರಿಸಿದ್ದ ಬನಹಟ್ಟಿ ನಗರದ ನೇಕಾರರು ಹಾಗೂ ಮಗ್ಗ ಮಾಲೀಕರ ನಡುವೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ನಗರದಾದ್ಯಂತ ಸ್ಥಗಿತಗೊಂಡಿದ್ದ ಮಗ್ಗಗಳು ಮತ್ತೆ ಭಾನುವಾರದಿಂದ ಸದ್ದು ಶುರು ಮಾಡಿವೆ.

ರಬಕವಿ-ಬನಹಟ್ಟಿ ಅವಳಿ ನಗರಗಳು ರಾಜ್ಯದಲ್ಲಿಯೇ ಪ್ರಮುಖ ಜವಳಿ ಕೇಂದ್ರವಾಗಿ ಹೆಸರಾಗಿದ್ದು, ಸಾವಿರಾರು ಕುಟುಂಬಗಳು ಪವರ್ಲೂಮ್ ಉದ್ಯಮವನ್ನು ಅವಲಂಬಿಸಿವೆ. ಕಳೆದ ಕೆಲವು ದಿನಗಳಿಂದ ಮಜೂರಿ ಹೆಚ್ಚಳದ ಬೇಡಿಕೆ ಮುಂದಿಟ್ಟುಕೊಂಡು ಬನಹಟ್ಟಿಯ ನೇಕಾರರು ಮಗ್ಗಗಳ ನೇಯ್ಗೆ ಕಾರ್ಯ ಸ್ಥಗಿತಗೊಳಿಸಿದ್ದರಿಂದ ನಗರದಲ್ಲಿನ ಜವಳಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು. ಇದರಿಂದ ನೇಕಾರರು, ಮಾಲೀಕರು ಹಾಗೂ ಉದ್ಯಮಕ್ಕೆ ಸಂಬಂಧಿಸಿದ ವಿವಿಧ ವರ್ಗಗಳ ಮೇಲೆ ಪರಿಣಾಮ ಉಂಟಾಗಿತ್ತು.

ನೇಕಾರರ ಸಂಘವು ಪ್ರತಿ 2 ವರ್ಷಗಳಿಗೊಮ್ಮೆ ಮಜೂರಿ ಪರಿಷ್ಕರಣೆ ಮಾಡುವಂತೆ ಒತ್ತಾಯಿಸುತ್ತಿದ್ದು, ಸಾಮಾನ್ಯವಾಗಿ ಶೇ.10 ರಿಂದ 20ರಷ್ಟು ವೇತನ ಹೆಚ್ಚಳದ ಬೇಡಿಕೆ ಮುಂದೆವರಿಸುತ್ತದೆ. ಈ ಬಾರಿಯೂ ನೇಕಾರರ ಸಂಘದ ಮುಖಂಡರು ಶೇ.20ರಷ್ಟು ಮಜೂರಿ ಹೆಚ್ಚಳಕ್ಕೆ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಭಾನುವಾರ ಬನಹಟ್ಟಿ ಪವರ್ಲೂಮ್ ಮಾಲೀಕರ ಸಂಘ ಹಾಗೂ ನೇಕಾರರ ಸಂಘದ ಪ್ರಮುಖರ ನಡುವೆ ನಡೆದ ಮಾತುಕತೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಎರಡೂ ಪಕ್ಷಗಳು ಪರಸ್ಪರ ಸಹಕಾರ ಮತ್ತು ಉದ್ಯಮದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಂಧಾನಕ್ಕೆ ಮುಂದಾದ ಪರಿಣಾಮ, ಈಗಿರುವ ಮಜೂರಿಯ ಮೇಲೆ ಶೇ.10ರಷ್ಟು ಹೆಚ್ಚಳ ಮಾಡುವ ನಿರ್ಧಾರಕ್ಕೆ ನೇಕಾರ ಧುರೀಣರಾದ ಎನ್.ಎಸ್.ದೇವರವರ, ರವೀಂದ್ರ ಹಳಿಂಗಳಿ ಹಾಗೂ ಮಾಲೀಕರ ಸಂಘದ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತೆಂದು ಅಸೋಶಿಯೇಶನ್ ಅಧ್ಯಕ್ಷ ಶಂಕರ ಜಾಲಿಗಿಡದ ತಿಳಿಸಿದರು.

ಮಾತುಕತೆ ಯಶಸ್ವಿಯಾಗಿ ಅಂತ್ಯಗೊಂಡ ತಕ್ಷಣವೇ ನೇಕಾರರು ಕೆಲಸಕ್ಕೆ ಮರಳಿದ್ದು, ನಗರದ ವಿವಿಧ ಭಾಗಗಳಲ್ಲಿನ ಪವರ್‌ಲೂಮ್ ಮಗ್ಗಗಳು ಪುನಃ ಕಾರ್ಯಾರಂಭಿಸಿವೆ. ಹಲವು ದಿನಗಳಿಂದ ನಿಶ್ಶಬ್ದವಾಗಿದ್ದ ಮಗ್ಗಗಳ ಸದ್ದು ಮತ್ತೆ ಮೊಳಗಿದ ಹಿನ್ನೆಲೆಯಲ್ಲಿ ನೇಕಾರರು ಹಾಗೂ ಉದ್ಯಮ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.

ನೇಕಾರರು ಮಾಲೀಕರೊಂದಿಗೆ ಸ್ಪಂದನೆ ನಿರಂತರವಾಗಿದೆ. ಅದರಂತೆ ಮುಂದಿನ 2 ವರ್ಷಕ್ಕೆ ಶೇ.10ರಷ್ಟು ಮಜೂರಿ ಹೆಚ್ಚಳದೊಂದಿಗೆ ಸಹಮತ ಸೂಚಿಸಿರುವುದಕ್ಕೆ ಸಂತಸವಾಗಿದೆ.

-ಕಾರ್ಯದರ್ಶಿ ಪ್ರಭು ಕರಲಟ್ಟಿ, ಪವರ್‌ಲೂಮ್ ಮಾಲೀಕರ ಸಂಘ, ಬನಹಟ್ಟಿ.

ನೇಕಾರರ ಸ್ಥಿತಿ ದಯನೀಯವಾಗಿದೆ. ಮಾಲೀಕರ ಕಷ್ಟವೂ ಅರ್ಥವಾಗುವುದು. ಆದರೂ ನಮ್ಮ ಬೇಡಿಕೆಗೆ ಸ್ಪಂದಿಸಿ ಮಜೂರಿ ಹೆಚ್ಚಳಗೊಳಿಸಿರುವುದಕ್ಕೆ ಧನ್ಯವಾದ.

-ಎನ್.ಎಸ್.ದೇವರವರ, ಉಪಾಧ್ಯಕ್ಷ, ಕಾರ್ಮಿಕ ಸಂಘಟನೆ, ಬನಹಟ್ಟಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿಗೆ ಮಠಮಾನ್ಯಗಳ ಕೊಡುಗೆ ಅಪಾರ
ಪತ್ರಕರ್ತರಲ್ಲಿ ಅಧ್ಯಯನಶೀಲತೆ, ವೈವಿಧ್ಯತೆ ಕೊರತೆ