ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಯಾಂತ್ರೀಕೃತ ಬೇಸಾಯಕ್ಕೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಭತ್ತ ಬೆಳೆಯುವ ಕಾಯಕಕ್ಕೆ ಶ್ರಮ ಅಗತ್ಯವಾಗಿದ್ದು, ಕೇವಲ ಕಾಟಾಚಾರಕ್ಕಾಗಿ ಮತ್ತು ಪ್ರಚಾರಕ್ಕಾಗಿ ಹಡೀಲುಗದ್ದೆ ಬೇಸಾಯ ಎಂದು ಬಿಂಬಿಸುವ ಕೆಲಸವಾಗಬಾರದು. ಇದರಿಂದ ಇನ್ನೊಂದಷ್ಟು ಮಂದಿ ಭತ್ತದ ಬೇಸಾಯದತ್ತ ದೃಷ್ಟಿ ಹರಿಸುವಂತೆ ಪ್ರೇರಣೆಯಾಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸೋಮವಾರ ಯಾಂತ್ರೀಕೃತ ಬೇಸಾಯಕ್ಕೆ ಚಾಲನೆ ನೀಡಿ ಮಾತನಾಡಿದರು.ಭತ್ತದ ಕೃಷಿಯನ್ನು ಆರಂಭ ಮಾಡುವುದು ಮುಖ್ಯವಲ್ಲ. ಅತ್ಯಂತ ಶ್ರದ್ಧೆಯಿಂದ ಅದನ್ನು ನೋಡಿಕೊಳ್ಳುವುದು, ಭತ್ತದಿಂದ ಅಕ್ಕಿ ತಯಾರಿಸುವ ತನಕ ಅದರ ಹಿಂದೆ ಶ್ರಮ ಪಡುವುದು ಅತೀ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಭಕ್ತರು, ಪುತ್ತೂರು ದೇವಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆಯನ್ನು ಜೋಡಿಸಿಕೊಂಡು ಭತ್ತ ಬೇಸಾಯ ನಡೆಸಲು ಚಿಂತನೆ ಮಾಡಲಾಗಿದೆ. ಇಲ್ಲಿ ಬೆಳೆಯುವ ಪೈರು ಹಾಗೂ ಭತ್ತದ ತೆನೆಗಳು ಜನತೆಯನ್ನು ಆಕರ್ಷಿಸುವ ರೀತಿಯಲ್ಲಿ ಬೆಳೆಯುವಂತೆ ಮಾಡುವ ಕೆಲಸ ನಡೆಯಬೇಕು ಎಂದು ಹೇಳಿದರು.ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಪ್ರಾರ್ಥಿಸಿದರು. ಶಾಸಕ ಅಶೋಕ್ ರೈ ತೆಂಗಿನ ಕಾಯಿ ಒಡೆದು ಬಳಿಕ ಟ್ರ್ಯಾಕ್ಟರ್ ಮೂಲಕ ಉಳುಮೆ ನಡೆಸಿ ಉಳುಮೆಗೆ ಚಾಲನೆ ನೀಡಿದರು.ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವನಾಥ ರೈ ಮೇಗಿನಗುತ್ತು, ದೇವಳದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಬನ್ನೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ. ಜಗನ್ನಿವಾಸ ರಾವ್, ಸುದೇಶ್ ಕುಮಾರ್ ಚಿಕ್ಕಪುತ್ತೂರು, ದಿನೇಶ್ ಕುಲಾಲ್ ಪಿ ವಿ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಉದ್ಯಮಿ ವಿನಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ. ಯೋಜನಾಧಿಕಾರಿ ಶಶಿಧರ್, ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ಯೋಜನಾಧಿಕಾರಿಗಳಾದ ಮೋಹನ್ ಮತ್ತು ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.