ಗದಗ: ವೀರೇಶ್ವರ ಪುಣ್ಯಾಶ್ರಮದಿಂದಾಗಿ ಗದುಗಿನ ಈ ಭೂಮಿ ಪುಣ್ಯಭೂಮಿಯಾಗಿದೆ. ಒಂದು ಸಂಗೀತ ವಿಶ್ವ ವಿದ್ಯಾಲಯ ಮಾಡುವ ಕೆಲಸವನ್ನು ವೀರೇಶ್ವರ ಪುಣ್ಯಾಶ್ರಮ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಜ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ವ್ಯಕ್ತಿಯು ಪರಿಪೂರ್ಣವಾಗಿ ಬೆಳೆಯಲು ಗುರು ಬೇಕು. ಅದರಂತೆ ತ್ರಿಕಾಲ ಜ್ಞಾನಿ ಶ್ರೀಗುರು ಹಾನಗಲ್ ಕುಮಾರೇಶ್ವರರು ಬಾಲಕನಾಗಿದ್ದ ಪಂ. ಪಂಚಾಕ್ಷರಿ ಗವಾಯಿಗಳವರನ್ನು ಕಂಡಾಗ ಈ ಮಗು ಮುಂದೆ ಸಾಧನೆ ಮಾಡುತ್ತದೆ ಎಂದು ಗುರುತಿಸಿ, ವಿದ್ಯೆ ನೀಡಿದರಲ್ಲದೆ, ವಿದ್ಯೆ ವೈಯಕ್ತಿಕವಾಗಬಾರದು, ಅದು ಪರಿಪೂರ್ಣವಾಗಬೇಕಾದರೆ ಅಂಧರಿಗೆ, ಅನಾಥರಿಗೆ, ದೀನರಿಗೆ ವಿದ್ಯೆ ಕಲಿಸಬೇಕು ಎಂದು ಆಶೀರ್ವದಿಸಿದರು. ಅದರಂತೆ ಇಂದು ದೇಶ-ವಿದೇಶಗಳಲ್ಲಿ ಪುಣ್ಯಾಶ್ರಮದ ಭಕ್ತರು ಸಂಗೀತ ಸಾಧನೆ ಮಾಡಿದ್ದಾರೆ ಎಂದರೆ ಅದು ಪಂ. ಪಂಚಾಕ್ಷರಿ ಗವಾಯಿಗಳವರ ಕೊಡುಗೆಯಾಗಿದೆ. ಪಂ. ಪಂಚಾಕ್ಷರಿ ಗವಾಯಿಗಳವರು ಆಚಾರ, ನಿಷ್ಠೆ ಶಿವಪೂಜೆಗೆ ವಿಶೇಷ ಒತ್ತು ನೀಡುತ್ತಿದ್ದರು. ಅವರ ಆರೋಗ್ಯ ಕ್ಷೀಣಿಸಿದಾಗ ಆಚಾರಕ್ಕೆ ಧಕ್ಕೆ ಬರುತ್ತದೆ ಎಂದು ಆಂಗ್ಲ ಔಷಧಗಳನ್ನು ತಿರಸ್ಕರಿಸಿ, ದೇಹ ತ್ಯಾಗ ಮಾಡಿ, ಮೌಲ್ಯಯುತವಾದ ಬದುಕನ್ನು ಬದುಕಿದರು. ಅಂತಹ ಮಹಾನುಭಾವರು ಪುಣ್ಯಾಶ್ರಮ ಕಟ್ಟಿ ಸಾಕಷ್ಟು ಜನರಿಗೆ ಆಶ್ರಯ ನೀಡಿದ್ದಾರೆ ಎಂದು ಹೇಳಿದರು.
ಗಂಗಾವತಿ ಕಲ್ಮಠದ ಕೊಟ್ಟೂರೇಶ್ವರ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶರಣರು, ಮುದ್ದೇಬಿಹಾಳದ ಡಾ. ಲಾಲಲಿಂಗೇಶ್ವರ ಶರಣರು, ಹಿರೇಗುಳವಾಳದ ಹನುಮಂತಪ್ಪ ಯಾಳವಾರ ಸಮ್ಮುಖ ವಹಿಸಿದ್ದರು. ನಂದೀಕೇಶ್ವರದ ಮುಚಖಂಡಯ್ಯನವರು, ಡಾ. ಜೆ.ಎಂ. ಚೆಂದುನವರ, ಬಳ್ಳಾರಿಯ ಪುರುಷೋತ್ತಮಗೌಡ್ರ, ಪಂಚಾಕ್ಷರಯ್ಯ ಹಿಡ್ಕಿಮಠ, ಕಲ್ಲೂರಿನ ಕಳಕಪ್ಪಗೌಡ್ರ ಜಮ್ಮಾಪುರ, ಜೇವರ್ಗಿಯ ನಾಡಗೌಡ್ರ ಅಪ್ಪಸಾಬಗೌಡ್ರ, ಬದಾಮಿಯ ನಾಗರಾಜ ಕಾಚಟ್ಟಿ, ಎಸ್.ಬಿ. ಅವರಾದಿ, ರಾಚಣ್ಣ ಪಟ್ಟಣದ ಉಪಸ್ಥಿತರಿದ್ದರು.ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಲ್ಲಯ್ಯಜ್ಜನವರು ಅಭಾರ ಮನ್ನಿಸಿದರು. ಅಡ್ನೂರಿನ ಕಲ್ಲಿನಾಥ ಶಾಸ್ತ್ರಿಗಳು ಕಾರ್ಯಕ್ರಮ ನಿರೂಪಿಸಿದರು. ಶಿವಲಿಂಗಯ್ಯಶಾಸ್ತ್ರಿಗಳು ಹಿರೇಮಠ ಸಿದ್ದಾಪುರ ಸ್ವಾಗತಿಸಿದರು.
ಆನಂತರ ಪದ್ಮಭೂಷಣ ಡಾ. ಪುಟ್ಟರಾಜ ಕವಿಗವಾಯಿಗಳವರ ಅಷ್ಟೋತ್ತರ ಶತನಾಮಾವಳಿ ಅಷ್ಟಾವರಣ ಕಥಾ ಕೀರ್ತನ ಮಾಲಿಕೆ ಹಾಗೂ ಶ್ರೀಗುರು ಪುಟ್ಟರಾಜ ಚರಿತಂ (ಪುರಾಣ) ಲೋಕಾರ್ಪಣೆಗೊಂಡವು. ಅಹೋರಾತ್ರಿ ಸ್ವರಸಮಾರಾಧನೆ ನಡೆಯಿತು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ತಮ್ಮ ಸಂಗೀತ ಸೇವೆಯನ್ನು ಅರ್ಪಣೆ ಮಾಡಿದರು.