ಎಸ್ಎಸ್ಎಲ್ಸಿ ಇಂಗ್ಲಿಷ್ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೀದರ್ ಜಿಲ್ಲೆಯ ಔರಾದ್ ಎಕಲಾರ ಪ್ರೌಢಶಾಲೆಯ 3 ಮಕ್ಕಳಿಗೆ ಹೈದ್ರಾಬಾದ್ದಿಂದ ತಿರುಪತಿಗೆ ವಿಮಾನ ಮೂಲಕ ಕರೆದೊಯ್ಯಲಾಗುತ್ತಿದೆ.
ಔರಾದ್ (ಬೀದರ್) : ಎಸ್ಎಸ್ಎಲ್ಸಿ ಇಂಗ್ಲಿಷ್ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬೀದರ್ ಜಿಲ್ಲೆಯ ಔರಾದ್ ಎಕಲಾರ ಪ್ರೌಢಶಾಲೆಯ 3 ಮಕ್ಕಳಿಗೆ ಹೈದ್ರಾಬಾದ್ದಿಂದ ತಿರುಪತಿಗೆ ವಿಮಾನ ಮೂಲಕ ಕರೆದೊಯ್ಯಲಾಗುತ್ತಿದೆ.
ಇಂಗ್ಲಿಷ್ ವಿಷಯದಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಮೂವರು ಮಕ್ಕಳು
2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯ ಇಂಗ್ಲಿಷ್ ವಿಷಯದಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಮೂವರು ಮಕ್ಕಳು ಮೇ 31ರಂದು ಹೈದ್ರಾಬಾದ್ನಿಂದ ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ. ಸ್ಥಳೀಯ ಶಿಕ್ಷಣ ಪ್ರೇಮಿ ಹಾಗೂ ಶಿಕ್ಷಕ ಸತೀಶ ಮಜಗೆ, ಮಕ್ಕಳಲ್ಲಿ ಓದಿನ ಕುರಿತು ಆಸಕ್ತಿ ಮೂಡಿಸುವ ಮತ್ತು ಸಾಧನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಹಿಂದೆಯೇ ಮಕ್ಕಳಿಗೆ ವಿಮಾನಯಾನ ಕುರಿತು ಮಾಹಿತಿ ನೀಡಿದ್ದರು.
ಪ್ರೌಢಶಾಲೆಯ ಫಲಿತಾಂಶ ಪ್ರಸ್ತುತ ಸಾಲಿನಲ್ಲಿ ಶೇ.97
ಪ್ರೌಢಶಾಲೆಯ ಫಲಿತಾಂಶ ಪ್ರಸ್ತುತ ಸಾಲಿನಲ್ಲಿ ಶೇ.97 ಬಂದಿದ್ದು, ಇಂಗ್ಲಿಷ್ ವಿಷಯವನ್ನು ಪರಿಗಣಿಸಿ ನೋಡಿದಾಗ ಮೂರು ಮಕ್ಕಳು ವಿಮಾನಯಾನ ಪ್ರಯಾಣಕ್ಕೆ ಅರ್ಹರಾಗಿದ್ದು, ಶಾಲಾ ವಿದ್ಯಾರ್ಥಿಗಳಾದ ಓಂಕಾರ ಕಲ್ಲಪ್ಪ ರಾಮಗೊಂಡ್ (ಶೇ.97), ಭಾಗ್ಯವಂತಿ ಅಶೋಕ ಬಿರಾದಾರ (ಶೇ.96) ಹಾಗೂ ಅಂಕಿತಾ ಸಿದ್ದಪ್ಪ ದೇಶಟ್ಟೆ (ಶೇ.96) ವಿಮಾನಯಾನದ ಅನುಭವ ಪಡೆಯಲು ಉತ್ಸುಕರಾಗಿದ್ದಾರೆ.
ಶಾಲೆಗೆ ವಿವಿಧ ಗ್ರಾಮಗಳಿಂದ ಮಕ್ಕಳು ಬರುತ್ತಾರೆ. ಅವರಲ್ಲಿ ಆರೋಗ್ಯಕರ ಸ್ಪರ್ಧೆ ಬೆಳೆಸುವ ಉದ್ದೇಶದಿಂದ ಹತ್ತನೇ ತರಗತಿಯಲ್ಲಿ ಓದುವ ಮಕ್ಕಳಿಗೆ ಈ ಷರತ್ತು ಇಡಲಾಗಿತ್ತು. ಅದರಂತೆ 3 ಮಕ್ಕಳು ಅರ್ಹರಾಗಿದ್ದು, ಪಾಲಕರ ಅನುಮತಿ ಪಡೆದು ನಾನು ಹಾಗೂ ಕೆಲ ಪೋಷಕರೊಂದಿಗೆ ಕರೆದೊಯ್ಯುತ್ತಿರುವೆ.
-ಸತೀಶ ಮಜಗೆ, ಶಿಕ್ಷಕ
