- ಪ್ರಧಾನಿ ಕಚೇರಿಗೆ ಮುತ್ತಿಗೆ ಯತ್ನ, ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ ಪ್ರಕರಣ । ಸಂಸದ ಭವನಕ್ಕೆ ದಾಳಿಗೆ ಖಂಡನೆಕನ್ನಡಪ್ರಭ ವಾರ್ತೆ, ಬೀದರ್‌

ಪಿಎಂ ಮೋದಿ ನಿವಾಸಕ್ಕೆ ಮುತ್ತಿಗೆ ಯತ್ನ ಹಾಗೂ ಬಿಜೆಪಿ ಶಾಸಕರ ಮೇಲೆ ಮೊಟ್ಟೆ ಎಸೆತ ಪ್ರಕರಣದಂಥ ಕಾಂಗ್ರೆಸ್‌ ನಡೆ ಖಂಡಿಸಿ ಶುಕ್ರವಾರ ಬೀದರ್‌ನಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಗಣೇಶ ಮೈದಾನದಿಂದ ತಹಸೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯು ಪಕ್ಷದ ಜಿಲ್ಲಾ ಘಟಕದ ನೇತೃತ್ವದಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಸಲ್ಲಿಸಿ, ದೇಶ ವಿರೋಧಿ ಶಕ್ತಿಗಳಿಂದ ಸಂಸದ ಭವನಕ್ಕೆ ದಾಳಿಯನ್ನು ಖಂಡಿಸುತ್ತೇವೆ. ಕಾಂಗ್ರೆಸ್ಸಿನ ಪುಡಿ ರೌಡಿಗಳು ಮೊಟ್ಟೆ ಮತ್ತು ರಾಡ್‌ಗಳಿಂದ ಹಲ್ಲೆ ಮಾಡಿದ್ದು ಅತ್ಯಂತ ಖಂಡನಾರ್ಹ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೂರಾರು ಪ್ರಶ್ನೆ ಪತ್ರಿಕೆಗಳ ಸೋರಿಕೆಯಾಗಿದ್ದವು, ಅಷ್ಟೆ ಅಲ್ಲ ಕರ್ನಾಟಕದಲ್ಲಿಯೇ ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 11 ಜನ ಪ್ರೇಕ್ಷಕರ ಸಾವಿಗೆ ಸರ್ಕಾರವೇ ನೇರವಾಗಿ ಕಾರಣವಾದಾಗ ಯಾವುದೇ ಸಚಿವರ ರಾಜೀನಾಮೆಯನ್ನು ಪಡೆಯದ ರಾಹುಲ್‌ ಗಾಂಧಿ ಅವರು ದೇಶ ವಿರೋಧಿ ದುಷ್ಟಶಕ್ತಿಗಳಿಂದ ಪ್ರೇರಣೆ ಪಡೆದು ಪ್ರಧಾನಿ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ್ದು ಖಂಡನೀಯ ಎಂದು ಜರಿದಿದ್ದಾರೆ.


ರಾಹುಲ್‌ ಗಾಂಧಿ ಅವರ ಅರಾಜಕೆ ಹಾಗೂ ಸಂಘರ್ಷದ ರಾಜಕೀಯವನ್ನು ಎಂದಿಗೂ ಬಿಜೆಪಿ ಸಹಿಸೋಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಅದರ ದುರುಪಯೋಗ ಪಡೆದುಕೊಂಡು ನಮ್ಮ ಶಾಸಕರ ಮೇಲೆ ಹಲ್ಲೆ ಮಾಡಿದ ರೌಡಿಗಳ ವಿರುದ್ದ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಆದೇಶಿಸಬೇಕೆಂದು ಮನವಿಯಲ್ಲಿ ರಾಜ್ಯಪಾಲರನ್ನು ಕೋರಿದ್ದಾರೆ.

ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ಪರ ಘೋಷಣೆಗಳು ಕೂಗಿದ್ದು ಅತ್ಯಂತ ಬೇಸರದ ಸಂಗತಿ. ದೇಶವಿರೋಧಿ ಶಕ್ತಿಗಳ ಕುಮ್ಮಕ್ಕಿನಿಂದಲೇ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡರು,

ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ, ಗೂಂಡಾ ಸಂಸ್ಕೃತಿ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಅರಾಜಕ ರಾಜಕಾರಣಕ್ಕೆ ಕಾಂಗ್ರೆಸ್‌ ಉತ್ತೇಜನ ನೀಡುತ್ತಿದೆ. ಅದನ್ನು ದೇಶಧ ಜನತೆ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂಗ್ರೆಸ್‌ ತನ್ನ ಇಂಥ ಕೆಟ್ಟಚಾಳಿಯನ್ನು ಬದಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು

ಕೇಂದ್ರ ಸರ್ಕಾರದ ಪರ ಹಾಗೂ ಕಾಂಗ್ರೆಸ್‌ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಶಾಸಕ ಡಾ.ಶೈಲೆಂದ್ರ ಬೆಲ್ದಾಳೆ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ರಾಜಶೇಖರ ನಾಗಮೂರ್ತಿ, ಈಶ್ವರಸಿಂಗ್‌ ಠಾಕೂರ, ಶಶಿ ಹೊಸಳ್ಳಿ, ಗುರುನಾಥ ಜ್ಯಾಂತಿಕರ್‌, ಬಸವರಾ ಆರ್ಯ, ಉಪೇಂದ್ರ ದೇಶಪಾಂಡೆ, ಶಿವರಾಜ ಗಂದಗೆ, ಸುಭಾಷ ಮಡಿವಾಳ, ವಿಜಯಕುಮಾರ ಪಾಟೀಲ್‌ ಗಾದಗಿ, ಬಸವರಾಜ ಪವಾರ್‌, ಗುರುನಾಥ ರಾಜಗೀರಾ, ಅಶೋಕ ಹೊಕ್ರಾಣೆ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

--

ಚಿತ್ರ 24ಬಿಡಿಆರ್61

ಬೀದರಿನಲ್ಲಿ ಕಾಂಗ್ರೆಸ್ ಪಕ್ಷದ ನಡೆ ಖಂಡಿಸಿ ಶುಕ್ರವಾರ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.