ಕೊಪ್ಪಳ: ಬಹುಮುಖ ವ್ಯಕ್ತಿತ್ವದ ಡಾ. ಬಸವರಾಜ ದಿಂಡೂರು ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದವರನ್ನು ಒಗ್ಗೂಡಿಸಿದರು. ಪಂಚಮಸಾಲಿ ಸಮಾಜ ಸಂಘಟಿಸಿದ ಹಿರಿಮೆ ಅವರದಾಗಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದಿಗೂ ಸಹ ಅವರು ಹಸನ್ಮುಖಿಯಾಗಿಯೇ ಇದ್ದಾರೆ.ಆತಸಾಕ್ಷಿಯಾಗಿದ್ದಾಗ ಮಾತ್ರ ಅದು ಸಾಧ್ಯವಾಗುತ್ತದೆ. ತಾವು ಉದ್ಯಮಿಯಾಗಿ ಬೆಳೆಯುವುದರ ಜತೆಗೆ ಇತರರನ್ನು ಬೆಳೆಸಿದರು. ಅಷ್ಟೇ ಅಲ್ಲ,ವಿಶೇಷವಾಗಿ ಪಂಚಮಸಾಲಿ ಸಮಾಜವನ್ನು ಕಟ್ಟಿ ಬೆಳೆಸಿದ ಹಿರಿಮೆ ಅವರಿಗಿದೆ ಎಂದರು.
ಅವರು ಎಂದೂ ಇನ್ಮೊಬ್ಬರನ್ನು ಮೆಚ್ಚಿಸಲು ಮಾತನಾಡಿದ್ದನ್ನು ನಾನು ನೋಡಿಲ್ಲ. ಇಳಿವಯಸ್ಸಿನಲ್ಲಿಯೂ ಸಮಾಜದ ಸಂಘಟನೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವ ದಿಂಡೂರು ಅವರ ಸಾಧನೆ ಅನನ್ಯ ಎಂದರು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಗವಿಮಠದ ಶ್ರೀಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆರ್ಶಿವಚನ ನೀಡಿ, ಪ್ರತಿಯೊಬ್ಬರ ಬದುಕಿನಲ್ಲಿಯೂ ಹುಟ್ಟು ಸಾವು ಇದ್ದೇ ಇರುತ್ತದೆ. ಯಾರು ಸಹ ನಾವು ಇಲ್ಲಿಯೇ ಹುಟ್ಟಬೇಕು ಎಂದು ಕೇಳಿಕೊಂಡು ಬಂದಿರುವುದಿಲ್ಲ. ಹುಟ್ಟು ಮತ್ತು ಸಾವನ್ನು ಯಾರು ಸಹ ತಡೆಯಲು ಸಾಧ್ಯವಿಲ್ಲ. ಆದರೆ, ಇದ್ದಾಗ ನಮ್ಮ ಜೀವನ ನಾವು ರೂಪಿಸಿಕೊಳ್ಳಬೇಕು. ಜೀವನೋತ್ಸಾಹಿಯಾಗಿ ಕಾರ್ಯ ನಿರ್ವಹಿಸಬೇಕು. ಉತ್ಸಾಹ ಕಳೆದುಕೊಳ್ಳದೆ, ನಾಡಿಗಾಗಿ, ಸಮಾಜಕ್ಕಾಗಿ ದುಡಿಯುತ್ತಿರಬೇಕು. ಅಂದಾಗಲೇ ಅದು ಅರ್ಥಪೂರ್ಣ ಜೀವನ ಆಗಲು ಸಾಧ್ಯ ಎಂದರು.
ಜಗದ್ಗುರು ಶ್ರೀ ಫಕೀರೇಶ್ವರ ಸಂಸ್ಥಾನ ಮಠದ ಶಿರಹಟ್ಟಿ ಉತ್ತರಾಧಿಕಾರಿ ಶ್ರೀಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ ದಿಂಡೂರ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಮಾಜಕ್ಕಾಗಿ ಇಷ್ಟೊಂದು ದುಡಿದ ವ್ಯಕ್ತಿಯನ್ನು ನಾನು ಮತ್ತೊಬ್ಬರನ್ನು ಕಾಣಲು ಸಾಧ್ಯವಿಲ್ಲ ಎಂದರು.
ದಿಂಡೂರು ಅವರಂತ ಸಮಾಜಮುಖಿ ಗುಣವುಳ್ಳ ವ್ಯಕ್ತಿಗಳು ಇಂದಿನ ದಿನಮಾನಗಳಲ್ಲಿ ಸಿಗುವುದು ಕಡಿಮೆ. ಹಾಗಾಗಿ ಬದುಕಿನ ನನ್ನ ಅರ್ಧ ಆಯಸ್ಸನ್ನು ದೇವರು ದಿಂಡೂರು ಅವರಿಗೆ ಕೊಡಲಿ ಎಂದು ಬೇಡಿಕೊಳ್ಳುವೆ ಎಂದರು.ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀವಚನಾನಂದ ಮಹಾಸ್ವಾಮಿ ಮಾತನಾಡಿ, ದಿಂಡೂರು ಕಳೆಯುವ ಪ್ರತಿಕ್ಷಣ ಕೂಡ ಸಮಾಜದ ಏಳ್ಗೆ ಕುರಿತು ಚಿಂತಿಸುತ್ತಾರೆ. ಪಂಚಮಸಾಲಿ ರಾಜ್ಯಾಧ್ಯಕ್ಷರಾಗಿದ್ದ ಅವರು ಆ ಸ್ಥಾನಕ್ಕೆ ನ್ಯಾಯ ಒದಗಿಸಿ ಸಮಾಜದ ಸಂಘಟನೆಗೆ ಹೊಸ ದಿಕ್ಸೂಚಿಯಾದರು.
ಪಂಚಮಸಾಲಿ ಸಮಾಜದ ನಿಜವಾದ ಶಕ್ತಿ ಇರುವುದು ಕೊಪ್ಪಳ ಜಿಲ್ಲೆಯಲ್ಲಿ ಹೀಗಾಗಿ ದಿಂಡೂರು ಅವರಿಗೆ ಗೌರವ ಪೂರ್ವಕವಾಗಿ ಇಲ್ಲಿ ಕಾರ್ಯಕ್ರಮ ಮಾಡಲಾಗಿದೆ.ಪಂಚಮಸಾಲಿ ಘಟಕದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಸಂಸದರಾದ ಸಂಗಣ್ಣ ಕರಡಿ, ಶಿವರಾಮೇಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಕ್ಯಾವಟರ್, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸ್ಗೂರು, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ. ಸೋಮಶೇಖರ, ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಕಳಕನಗೌಡ ಪಾಟೀಲ್, ಮಂಜುಳಾ ಕರಡಿ, ರಾಜಶೇಖರ ಮುಲಾಲಿ, ಬಸವರಾಜ ಸಂಕನಗೌಡರ, ರಾಜೇಶ ಯಾವಗಲ್ ಸೇರಿದಂತೆ ಇತರರು ಇದ್ದರು.