ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದವರು ನಿರ್ಮಿಸಲು ಉದ್ದೇಶಿಸಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡುತ್ತೇನೆ.
ಕನ್ನಡಪ್ರಭ ವಾರ್ತೆ ಕೊಟ್ಟೂರು
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದವರು ನಿರ್ಮಿಸಲು ಉದ್ದೇಶಿಸಿರುವ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಹಾಗೂ ಪಂಚಮಸಾಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರು ಮಾಡುವುದಾಗಿ ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ಪಟ್ಟಣದ ಶ್ರೀ ಮರುಳಸಿದ್ದೇಶ್ವರ ಸಭಾಂಗಣದಲ್ಲಿ ತಾಲೂಕು ಪಂಚಮಸಾಲಿ ಸಂಘಟನೆ ಆಯೋಜಿಸಿದ್ದ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಂಚಮಸಾಲಿ ಸಮುದಾಯ ಎಂದಿಗೂ ನನ್ನೊಟ್ಟಿಗೆ ಇದೆ. ಈ ಹಿನ್ನೆಲೆ ಸಮುದಾಯವನ್ನು ನಿರ್ಲಕ್ಷಿಸುವ ಮಾತೇ ಇಲ್ಲ. ತಾಲೂಕು ಪಂಚಸಾಲಿ ಸಂಘಟನೆಯವರು ಪಟ್ಟಣದ ಪ್ರಮುಖ ವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸರುವ ಕಿತ್ತೂರು ರಾಣಿ ಚೆನ್ನಮ್ಮರ ಪ್ರತಿಮೆಗೆ ಶೀಘ್ರ ಅನುದಾನ ನೀಡುತ್ತೇನೆ. ಅದರಂತೆ ಪಂಚಮಸಾಲಿ ಸಮುದಾಯ ಭವನಕ್ಕೆ ನಿವೇಶನ ಲಭ್ಯವಾದ ಕೂಡಲೇ ನಿರ್ಮಾಣಕ್ಕೆ ಅಂದಾಜು ವೆಚ್ಚದಂತೆ ಅನುದಾನ ನೀಡುತ್ತೇನೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಓದಿನಲ್ಲಿ ಸದಾ ನಿರತರಾಗಬೇಕೆ ಹೊರತು ಮೊಬೈಲ್ ಗೀಳಿಗಿ ಬೀಳಬಾರದು ಎಂದರು.
ಜಿಪಂ ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ ಮಾತನಾಡಿ, ಪಂಚಮಸಾಲಿ ಸಮುದಾಯ ಇತರೆ ಎಲ್ಲ ಸಮುದಾಯದೊಂದಿಗೆ ಸಹೋದರತ್ವ ಭಾವನೆ ಹೊಂದಿದೆ. ಇವರ ಹಕ್ಕೋತ್ತಾಯವಾಗಿರುವ ಚೆನ್ನಮ್ಮ ಪ್ರತಿಮೆ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಐಎಎಸ್ ಪರೀಕ್ಷೆಯಲ್ಲಿ 41ನೇ ರ್ಯಾಂಕ್ ಪಡೆದಿರುವ ಸಮಾಜದ ಡಾ. ಬಿ.ಜಿ.ಸಚನ್ ಮಾತನಾಡಿ, ಸತತ ಪರಿಶ್ರಮದಿಂದ ಎಲ್ಲವನ್ನೂ ಸಾಧಿಸಬಹುದು. ನಿರಂತರ ಅಭ್ಯಾಸ, ದೈವ ಭಕ್ತಿ ಗುರಿ ತಲುಪಿಸಲು ಸುಲಭವಾಗುತ್ತದೆ ಎಂದು ತಮ್ಮ ಯಶಸ್ಸಿನ ಕುರಿತು ವಿವರಿಸಿದರು.
ಪಂಚಮಸಾಲಿ ಸಂಘಟನೆ ರಾಜ್ಯಾಧ್ಯಕ್ಷ ಎಂ.ಸೋಮನಗೌಡ ಪಾಟೀಲ್, ಅಧ್ಯಕ್ಷತೆ ವಹಿಸಿದ್ದ ಚಾಪಿ ಚಂದ್ರಪ್ಪ ಮಾತನಾಡಿದರು.
ವೇದಿಕೆಯಲ್ಲಿ ಸಮುದಾಯದ ತಾಲೂಕು ಕಾರ್ಯದರ್ಶಿ ಎಚ್.ಅಶೋಕ, ಮುಖಂಡರಾದ ಪ್ರಕಾಶ ಪಾಟೀಲ್, ಕಿಚಡಿ ಕೊಟ್ರೇಶ್, ಪಂಪಾಪತಿ ಬಸಾಪುರ, ಕೆ.ವಿವೇಕಾನಂದ, ಗಾಯತ್ರಿ ಅಶೋಕ, ಪ್ರೇಮಕ್ಕ, ಡಿ.ಉಮಾದೇವಿ, ಅಜ್ಜನಗೌಡ, ಸಿ.ಕೊಟ್ರೇಶಪ್ಪ, ಈಶ್ವರಪ್ಪ ತುರಕಾಣಿ, ಡಿಎಸ್ಎಸ್ ಮುಖಂಡ ಬದ್ದಿಮರಿಸ್ವಾಮಿ ಇತರರಿದ್ದರು. ಕೆ.ವೀರಭದ್ರಪ್ಪ, ಶಿವಕುಮಾರ್ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.