ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ
ಕನ್ನಡಪ್ರಭ ವಾರ್ತೆ ಚಾಮರಾಜನಗರಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹದೊಂದಿಗೆ ನಗರದಲ್ಲಿ ಸೋಮವಾರ ಜಿಲ್ಲಾಡಳಿತ ಭವನದಿಂದ ಚಾಮರಾಜೇಶ್ವರ ದೇವಾಲಯದವರೆಗೆ ಆಯೋಜಿಸಲಾಗಿದ್ದ ದಸರಾ ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಹಾಗೂ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು (ಟ್ಯಾಬ್ಲೋ) ಜನರ ಮನ ಸೂರೆಗೊಂಡವು. ಅಲ್ಲದೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಜನರ ಕಣ್ಮನ ಸೆಳೆಯಿತು.ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದಲ್ಲಿಂದು ಆಯೋಜಿಸಲಾಗಿದ್ದ ದಸರಾ ಮೆರವಣಿಗೆಯಲ್ಲಿ ವಿವಿಧ ಕಲಾ ಪ್ರಕಾರಗಳಾದ ಡೊಳ್ಳುಕುಣಿತ, ಗೊರವರ ಕುಣಿತ, ವೀರಗಾಸೆ, ಕಂಸಾಳೆ ನೃತ್ಯ, ನಾದಸ್ವರ, ನಂದಿಕಂಬ, ಬ್ಯಾಂಡೆಸೆಟ್ ವಾದನ, ಕೀಲು ಕುದುರೆ, ಗಾರುಡಿಗ ಗೊಂಬೆ, ಮಾರಮ್ಮನ ಕುಣಿತ, ಸುಗ್ಗಿ ಕುಣಿತ, ತಮಟೆ ವಾದನ ದೊಣ್ಣೆ ವರಸೆ, ಹುಲಿ ವೇಷಧಾರಿಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ದಸರಾ ಮರೆವಣಿಗೆಗೆ ವಿಶೇಷ ಮೆರುಗನ್ನು ತಂದವು.ವಿವಿಧ ಇಲಾಖೆಗಳ ಆಕರ್ಷಕ ಸ್ತಬ್ಧಚಿತ್ರ (ಟ್ಯಾಬ್ಲೋ)ಗಳು ಪಾಲ್ಗೊಂಡು ದಸರಾ ಮಹೋತ್ಸವದ ಮೆರವಣಿಗೆ ಕಳೆಯನ್ನು ಇಮ್ಮಡಿಗೊಳಿಸಿದ್ದು ವಿಶೇಷವಾಗಿತ್ತು. ದಸರಾ ಮೆರವಣಿಗೆಯ ಕೇಂದ್ರ ಬಿಂದುವಾಗಿದ್ದ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ವಿಗ್ರಹ ಹಾಗೂ ನಂದಿಧ್ವಜ ಕಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಇತರೆ ಗಣ್ಯರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ನೆರವೇರಿಸಿದರು.ಇದೇ ವೇಳೆ ಸಚಿವರು ಶಾಸಕರು, ಗಣ್ಯರು ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೇರಿದಂತೆ ಇತರೆ ಗಣ್ಯರು ಚಾಲನೆ ನೀಡಿ, ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಕಲಾಲಕೃತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ದಸರಾ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಸ್ವತಃ ಉಸ್ತುವಾರಿ ಸಚಿವರು ಕ್ರಿಕೆಟ್ ಆಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಹೂವಲ್ಲಿ ಮೂಡಿಬಂತು ಗೋಪಾಲಸ್ವಾಮಿ ಬೆಟ್ಟಜಿಲ್ಲಾ ದಸರಾ ಸೋಮವಾರದಿಂದ ಆರಂಭಗೊಂಡಿದ್ದು ಗಡಿಜಿಲ್ಲೆ ಸಂಭ್ರಮ-ಸಡಗರದಲ್ಲಿ ಕಳೆಗಟ್ಟಿದೆ. ಚಾಮರಾಜನಗರ ಜಿಲ್ಲಾಡಳಿತ ಆವರಣದಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು ವಿವಿಧ ಹೂಗಳಿಂದ ಪ್ರಸಿದ್ಧ ಯಾತ್ರಸ್ಥಳವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಮೂಡಿ ಬಂದಿದೆ.ಹಿಮವದ್ ಗೋಪಾಲನ ಸನ್ನಿಧಿಯೇ ಚಾಮರಾಜನಗರದಲ್ಲಿ ಸ್ಥಾಪಿತವಾದಂತೆ ಹೂಗಳಿಂದ ಬೆಟ್ಟದ ಪ್ರತಿಕೃತಿ ಕಂಗೊಳಿಸುತ್ತಿದ್ದು ಜನರ ಮನಸೋತರು.ಕಲ್ಲಂಗಡಿಯಲ್ಲಿ ರಾಜಕಾರಣಿಗಳು:ಕಲ್ಲಂಗಡಿಯಲ್ಲಿ ರಾಜಕಾರಣಿಗಳ ಮುಖವನ್ನು ಚಿತ್ರಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲ್ಲಂಗಡಿಯಲ್ಲಿ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸಂಸದ ಸುನಿಲ್ ಬೋಸ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಡಾ.ಬಿ.ಆರ್.ಅಂಬೇಡ್ಕರ್ ಮೂಡಿದ್ದಾರೆ. ಇನ್ನು, ಕುಂಬಳಕಾಯಿ ಹಾಗೂ ವಿವಿಧ ತರಕಾರಿ ಬಳಸಿಕೊಂಡು ಗಣಪತಿ, ವಿವಿಧ ಆಕೃತಿಗಳಿದ್ದು ಹೂಗಳಲ್ಲಿ ವೀಣೆ, ತಬಲ, ನವಿಲಿನ ಆಕೃತಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.