ಕನ್ನಡಪ್ರಭ ವಾರ್ತೆ ಉಡುಪಿ ಕಾರ್ಕಳದ ಉಮಿಕಲ್ ಎಂಬಲ್ಲಿ ನಿರ್ಮಿಸಲಾಗಿರುವ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರದಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್ ಕೂಡ ಶಾಮೀಲಾಗಿದೆ. ವಿಷ್ಣುವಿನ ಆರನೇ ಅವತಾರ ಪರಶುರಾಮ ದೇವರಿಗೆ ಇಲ್ಲಿ ಅವಮಾನ ಆಗಿದ್ದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡುತ್ತೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಈ ಕೋಟ್ಯಾಂತರ ರು.ಗಳ ಅವ್ಯವಹಾರದ ಬಗ್ಗೆ ತನಿಖೆ ಮಾಡದೆ, ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದೆ ಎಂದವರು ಆರೋಪಿಸಿದರು. ಹಿಂದಿನ ಸರ್ಕಾರ ಚುನಾವಣೆ ಉದ್ದೇಶದಿಂದ, ಒಂದು ವರ್ಷ ತಗಲುವ ಪರಶುರಾಮನ 33 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಕೇವಲ 41 ದಿನದೊಳಗೆ ತರಾತುರಿಯಲ್ಲಿ ರಚಿಸಿ ಉದ್ಘಾಟಿಸಿತ್ತು. ಅಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಸ್ಥಳೀಯಾಡಳಿತದ ಅನುಮತಿ ಕೂಡ ಇಲ್ಲ, ಆದರೆ ಅಲ್ಲಿ ಕಾನೂನುಬಾಹಿರವಾಗಿ ಕಟ್ಟಡ, ಹೊಟೇಲ್ ನಿರ್ಮಿಸಲಾಗಿದೆ. ಈಗ ಅಂದು ಸಿಎಂ ಉದ್ಘಾಟಿಸಿದ ಪರಶುರಾಮನ ಮೂರ್ತಿಯನ್ನು ಇಂದಿನ ಸರ್ಕಾರ ರಾತ್ರೋರಾತ್ರಿ ಕತ್ತರಿಸಿ ತೆಗೆದಿದೆ ಎಂದವರು ಆರೋಪಿಸಿದರು.