ಕನ್ನಡಪ್ರಭ ವಾರ್ತೆ ವಿಜಯಪುರ
ಕಾರ್ಯಕ್ರಮ ಉದ್ಘಾಟಿಸಿ ಡಿ.ವೈ.ಎಸ್.ಪಿ ಡಾ.ಬಸವರಾಜ ಯಲಿಗಾರ ಮಾತನಾಡಿ, ಈ ಪ್ರತಿಭಾವಂತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ತಂದೆ-ತಾಯಿಗೆ, ಶಾಲೆಗೆ ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಕೀರ್ತಿ ತಂದಿದ್ದಾರೆ. ಇಂತಹವರಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡುವುದರಿಂದ ಇವರಿಗೆ ಹೆಚ್ಚಿನ ಸಾಧನೆಗೈಯಲು ಪ್ರೋತ್ಸಾಹಿಸಿದಂತಾಗುತ್ತದೆ. ಇಂದಿನ ವ್ಯವಸ್ಥೆಯಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡಿಸುವಲ್ಲಿ ನಾವೆಲ್ಲರೂ ಎಡವುತ್ತಿದ್ದೇವೆ. ಮೌಲ್ಯಾಧಾರಿತ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಗಮನ ಹರಿಸಬೇಕು. ವಿದ್ಯಾರ್ಥಿಗಳು ಸರ್ಕಾರಿ ನೌಕರಿಯ ಆಸೆ ಇಟ್ಟುಕೊಳ್ಳದೆ ಏನಾದರೂ ಸಾಧಿಸಬೇಕು ಎಂದು ಶ್ರಮಿಸಿದರೆ ದೇವರು ನಮಗೆ ಸಾವಿರ ದಾರಿಗಳನ್ನು ಕೊಡುತ್ತಾನೆ ಎಂದರು.ಸಾನ್ನಿಧ್ಯ ವಹಿಸಿದ್ದ ಬುರಣಾಪುರ ಸಿದ್ಧಾರೂಢ ಆಶ್ರಮದ ಮಾತೋಶ್ರೀ ಯೊಗೇಶ್ವರಿ ಮಾತಾಜಿ ಮಾತನಾಡಿ, ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದ್ದು ಸಂತಸದ ವಿಚಾರ. ಪಂಚಮಸಾಲಿಗರು ಕಟ್ಟಿದ ಈ ಸಂಘಟನೆಯನ್ನು ಒಡೆಯುವ ಕೆಲಸ ಆಗಬಾರದು, ಈ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು, ಪ್ರೋತ್ಸಾಹಿಸಬೇಕು. ಜೀವನದಲ್ಲಿ ಯಾವಾಗಲೂ ಒಳಿತನ್ನೇ ಮಾಡಬೇಕು, ಯಾರಿಗೂ ಕೇಡು ಬಯಸಬಾರದು. ಎಲ್ಲ ಲಿಂಗಾಯತರು ಒಂದಾಗಬೇಕು, ಎಲ್ಲರೂ ಒಂದಾಗುವ ವರೆಗೂ ಶಾಂತಿ, ಸಮಾಧಾನ, ಅಧಿಕಾರವೂ ಸಿಗುವುದಿಲ್ಲ. ವಿದ್ಯಾರ್ಥಿಗಳು ಚೆನ್ನಾಗಿ ಓದಿ, ಇನ್ನೂ ಉತ್ತಮ ಸಾಧನೆ ಮಾಡಬೇಕು. ವಿದ್ಯೆಯು ಯಾರೂ ಕಸಿದುಕೊಳ್ಳಲಾಗದ ಸಂಪತ್ತು, ಹಾಗಾಗಿ ಎಲ್ಲರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಸನಾತನ ಹಿಂದೂ ಧರ್ಮದ ಬಗ್ಗೆ ಎಲ್ಲರೂ ಕಾಳಜಿ ವಹಿಸಿದರೆ ಮಾತ್ರ ಹಿಂದೂ ಧರ್ಮ ಉಳಿಯಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ಡಾ.ಸುರೇಶ ಬಿರಾದಾರ ಮಾತನಾಡಿ, ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಪಂಚಮಸಾಲಿ ಸಮಾಜದ 400 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗಿದೆ. ವಿದ್ಯಾರ್ಥಿಗಳ ಹಾಗೂ ಪಾಲಕರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಜಿಲ್ಲೆಯಿಂದಲೇ ಪಂಚಮಸಾಲಿ ಸಂಘಟನೆ ಆರಂಭವಾಗಿದೆ. ಹೆಚ್ಚಾಗಿ ಕೃಷಿಯನ್ನೇ ನಂಬಿರುವ ಪಂಚಮಸಾಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುರುತಿಸಿ, ಸನ್ಮಾನಿಸಿ ಗೌರವಿಸುವ ಕೆಲಸ ಮಾಡಿದ್ದೇವೆ. ವಿದ್ಯಾರ್ಥಿಗಳು ಮುಖ್ಯವಾಗಿ ಸಮಯ ಪಾಲನೆ, ಶಿಸ್ತು, ಕೌಶಲ್ಯಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗಬಹುದು. ಬ್ರಿಟಿಷರೊಂದಿಗೆ ಕೆಚ್ಚೆದೆಯಿಂದ ಹೋರಾಡಿದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರನ್ನು ನಾವು ಸ್ಫೂರ್ತಿಯಾಗಿಸಿಕೊಂಡು, ಸಮಾಜಮುಖಿಯಾಗಿ ಬದುಕಬೇಕು. ಮುಂದಿನ ದಿನಗಳಲ್ಲಿ ನಮ್ಮ ಸಂಘವು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದರು.ಸಮಾಜದ ಹಿರಿಯರಾದ ವಿ.ಎನ್.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಾಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಜಶೇಖರ ಡಂಬಳ, ತಹಶೀಲ್ದಾರ ಪ್ರಶಾಂತ ಚನಗೊಂಡ, ಜಿಪಂ ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಸಾಹಿತಿ ಅಶೋಕ ಹಂಚಲಿ, ಬಿ.ಎಸ್.ಬಿರಾದಾರ, ಶರಣು ಆಲೂರ, ವೀರಭದ್ರಪ್ಪ ಹಲಕವಟಗಿ, ಹೊನಮಲ್ಲ ಸಾರವಾಡ, ಸುರೇಶ ಶೇಡಶ್ಯಾಳ, ಉಮೇಶ ಕೋಳಕೂರ, ಭೀಮಾಶಂಕರ ಹದನೂರ, ಶೀಲಾ ಬಿರಾದಾರ, ಗೀತಾ ಅಂಗಡಿ, ರಾಜುಗೌಡ ಕಳಸಗೊಂಡ ಸೇರಿದಂತೆ ಸಮಾಜದ ಅನೇಕ ಗಣ್ಯರಿದ್ದರು.ಪಂಚಮಸಾಲಿ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು ಸಂತಸದ ವಿಷಯ. ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್, ಹಾಗಾಗಿ ಈ ವಿದ್ಯಾರ್ಥಿ ಸಮಯವನ್ನು ಎಲ್ಲರೂ ಸದುಪಯೋಗ ಪಡೆಸಿಕೊಳ್ಳಬೇಕು. ಪಂಚಮಸಾಲಿ ಸಮಾಜದಲ್ಲಿ ಶೇ.95ರಷ್ಟು ಅಂಕ ಪಡೆದರೂ ನೌಕರಿ ಸಿಗುವುದು ಕಷ್ಟವಾಗಿದೆ. ಹಾಗಾಗಿ ಎಲ್ಲರೂ ಸರ್ಕಾರಿ ಹುದ್ದೆಗಳ ಮೇಲೆ ಅವಲಂಬಿತರಾಗದೆ ಸಮಾಜಮುಖಿಯಾಗಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಉತ್ತಮ ಸಾಧಕರಾಗಬೇಕು. ವಿದ್ಯಾರ್ಥಿಯ ಜೀವನ ರೂಪಿಸುವ ಶಿಕ್ಷಕರು ತಮ್ಮ ಮಕ್ಕಳಿಗಿಂತಲೂ ಹೆಚ್ಚು ತಮ್ಮ ಶಾಲೆಯ ಮಕ್ಕಳನ್ನು ಪ್ರೀತಿಸುತ್ತಾರೆ. ಅಂತಹ ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ ಪಡೆದು ಎಲ್ಲರೂ ಪ್ರತಿಭಾವಂತರಾಗಬೇಕು. ಇಂದು ನೀವು ಸ್ವೀಕರಿಸಿದ ಪ್ರತಿಭಾ ಪುರಸ್ಕಾರವನ್ನು ನೋಡುವ ನಿಮ್ಮ ತಮ್ಮ, ತಂಗಿಯರು ಸಹ ಹೆಚ್ಚಿನ ಅಂಕ ಪಡೆದು ನಾನೂ ಪ್ರತಿಭಾ ಪುರಸ್ಕಾರ ಪಡೆಯಬೇಕು ಎನ್ನುವ ಹಂಬಲ ಹುಟ್ಟುವಂತೆ ಮಾಡಬೇಕು. ಪಂಚಮಸಾಲಿ ಸಮಾಜ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸಮಾಜವಾಗಿದ್ದು, ಸಮಾಜದಿಂದ ಇಂದು ಮಾಡಿದ ಈ ಅತ್ಯುತ್ತಮ ಕೆಲಸ ಶ್ಲಾಘನಿಯ.-ಅಭಿನವ ಸಂಗನಬಸವ ಮಹಾಸ್ವಾಮೀಜಿ, ಮನಗೂಳಿ ಹಿರೇಮಠ