ಹಾನಗಲ್ಲ: ಶೈಕ್ಷಣಿಕ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಗ್ರಾಮೀಣ ಮಕ್ಕಳ ಪಾಲಕರು ಕಾಳಜಿವಹಿಸಿದಲ್ಲಿ ಮಾತ್ರ ಇಂದಿನ ಸ್ಪರ್ಧಾತ್ಮಕ ಜಗದಲ್ಲಿ ನಮ್ಮ ಯಶಸ್ಸು ತಲುಪಲು ಸಾಧ್ಯ ಎಂದು ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ತಿಳಿಸಿದರು.ಶುಕ್ರವಾರ ಹಾನಗಲ್ಲಿನಲ್ಲಿ ಬೆಂಗಳೂರಿನ ಡ್ರೀಮ್ ಸ್ಕೂಲ್ ಫೌಂಡೇಶನ್, ಹಾನಗಲ್ಲಿನ ಹುಮ್ಯಾನಿಟಿ ಫೌಂಡೇಶನ್ನ ಪರಿವರ್ತನಾ ಕಲಿಕಾ ಕೇಂದ್ರ ಸಂಯುಕ್ತವಾಗಿ ಆಯೋಜಿಸಿದ ಗ್ರಾಮೀಣ ಪ್ರತಿಭಾವಂತ ಮಕ್ಕಳು ಹಾಗೂ ಪಾಲಕರು ಪೋಷಕರಿಗಾಗಿ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಕಲುಷಿತ ಸಾಮಾಜಿಕ ವ್ಯವಸ್ಥೆಯನ್ನು ದೂರುವ ಬದಲು ನಾವು ಒಳ್ಳೆಯವರಾಗಿರುವ ಕಡೆ ಚಿಂತನೆ ಬೇಕಾಗಿದೆ. ಬೇರೆಯವರ ಕಡೆ ಬೆರಳು ತೋರಿಸುವ ಮೊದಲು ನನ್ನ ಜವಾಬ್ದಾರಿ ನಡೆ ನುಡಿಗಳನ್ನು ತಿದ್ದಿಕೊಳ್ಳಬೇಕಾಗಿದೆ. ತಂತ್ರಜ್ಞಾನದ ಸದುಪಯೋಗಕ್ಕೆ ಆದ್ಯತೆ ಬೇಕೆ ಹೊರತು, ಅದನ್ನು ದೂರುವುದು ಮಾತ್ರವಲ್ಲ. ಈ ಮಕ್ಕಳಿಗೆ ಪದವಿ ಶಿಕ್ಷಣದವರೆಗೂ ಶೈಕ್ಷಣಿಕ ಸೌಲಭ್ಯ ನೀಡುವ ಮಹತ್ವಾಕಾಂಕ್ಷಿ ಯೋಜನೆ ಎಂಬುದನ್ನು ಪಾಲಕರು ಅರಿತು ಮಕ್ಕಳಿಗಾಗಿ ಇದರ ಸದುಪಯೋಗಕ್ಕೆ ಮುಂದಾಗಬೇಕು ಎಂದರು.ಬೆಂಗಳೂರಿನ ಡ್ರೀಮ್ಸ್ಕೂಲ್ ಫೌಂಡೇಶನ್ನ ಕಾರ್ಯಕ್ರಮ ನಿರ್ವಾಹಕ ಬಿ.ಆರ್. ರವೀಂದ್ರ ಮಾತನಾಡಿ, ಮಕ್ಕಳ ಮನಸ್ಸನ್ನು ಅರಿತು ಪಾಲಕರು ತಮ್ಮ ಮಕ್ಕಳ ಭವಿಷ್ಯದ ಜೀವನಕ್ಕೆ ತರಬೇತಿ ನೀಡಬೇಕು. ಇದು ತಂತ್ರಜ್ಞಾನದ ಯುಗ. ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ನಾವಿದ್ದೇವೆ. ಪ್ರತಿ ಕ್ಷಣಗಳನ್ನು ನಮ್ಮ ಜ್ಞಾನಭಿವೃದ್ಧಿಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಡ್ರೀಮ್ ಸ್ಕೂಲ್ ಫೌಂಡೇಶನ್ನ ಸಂಪರ್ಕಾಧಿಕಾರಿ ಸುಭಾ ದಯಾನಂದ, ಕಾರ್ಯಕ್ರಮಾಧಿಕಾರಿ ಮಂಗಳಾ ಮಠದ, ಲಿಖಿತಾ ವೇದಿಕೆಯಲ್ಲಿದ್ದರು.