ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪಾಲಕರು ಶ್ರಮಿಸಲಿ: ಅಮರೇಶ

KannadaprabhaNewsNetwork | Published : Jun 19, 2025 11:49 PM

ಬಾಲಕರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ, ಮನೆ ಆರ್ಥಿಕ ಪರಿಸ್ಥಿತಿ ಸರಿದೂಗಿಸುವುದಕ್ಕಾಗಿ ಕೆಲಸಕ್ಕೆ ಕಳುಹಿಸುವುದು ಪಾಲಕರು ಮಾಡುತ್ತಿರುವ ದೊಡ್ಡ ಅಪರಾಧವಾಗಿದೆ.

ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ತಹಸೀಲ್ದಾರ್‌

ಕನ್ನಡಪ್ರಭ ವಾರ್ತೆ ಕೊಟ್ಟೂರು

ಬಾಲಕರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ, ಮನೆ ಆರ್ಥಿಕ ಪರಿಸ್ಥಿತಿ ಸರಿದೂಗಿಸುವುದಕ್ಕಾಗಿ ಕೆಲಸಕ್ಕೆ ಕಳುಹಿಸುವುದು ಪಾಲಕರು ಮಾಡುತ್ತಿರುವ ದೊಡ್ಡ ಅಪರಾಧವಾಗಿದೆ ಎಂದು ತಹಸೀಲ್ದಾರ್‌ ಜಿ.ಕೆ. ಅಮರೇಶ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಮಿಕ ಇಲಾಖೆ ಸೇರಿ ನಾನಾ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವಲ್ಲಿ ಪಾಲಕರದ್ದು ದೊಡ್ಡ ಪಾತ್ರವಿದೆ. ಬಾಲ್ಯಾವಸ್ಥೆ, ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ 1986ರ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಅಪರಾಧವಾಗುತ್ತದೆ. ಅಲ್ಲದೇ ಕೆಲಸಕ್ಕೆ ನಿಯೋಜಿಸಿಕೊಂಡ ಅಪರಾಧಕ್ಕೆ 2 ವರ್ಷಗಳ ವರೆಗೆ ಜೈಲು ಅಥವಾ ₹50 ಸಾವಿರ ವರೆಗೆ ದಂಡ ವಿಧಿಸಬಹುದಾಗಿದೆ. ಕೆಲಸಕ್ಕೆ ಸೇರಿಸುವ ಪಾಲಕರಿಗೂ ಶಿಕ್ಷೆ ವಿಧಿಸಲಾಗುವುದು ಎಂದರು.

ಇಂದಿನ ದಿನಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲ ಸೌಕರ್ಯಗಳೊಂದಿಗೆ ಉಚಿತವಾಗಿ ಸರ್ಕಾರ ಅವಕಾಶ ನೀಡಿದೆ. ಮಗುವನ್ನು ಶಿಕ್ಷಣದಿಂದ ವಂಚಿತರಾಗಿಸದೇ ಶಾಲೆಗೆ ಕಳುಹಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆ ಬಿಟ್ಟ ಮಕ್ಕಳನ್ನು ಪತ್ತೆ ಹಚ್ಚಿ ಮತ್ತೆ ಶಾಲೆಗೆ ಕಳುಹಿಸಬೇಕು. ದುಡಿಮೆಯಲ್ಲಿರುವ ಬಾಲ ಕಾರ್ಮಿಕರು ಕಂಡ ಬಂದಲ್ಲಿ ತಕ್ಷಣವೇ ಕೆಲಸ ಬಿಡಿಸಿ ಅಂತಹ ಮಕ್ಕಳನ್ನು ಶಾಲೆಗೆ ಕರೆತರಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆ ನಿರೀಕ್ಷಕ ಶಿವಶಂಕರ ಬಿ. ತಳವಾರ ಮಾತನಾಡಿ, ಅನೇಕರು ದುಡಿಯದೇ ಕುಡಿತಕ್ಕೊಳಗಾಗಿ ಸಾಲ ತೀರಿಸಲು ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿರುವುದು ಹೆಚ್ಚಾಗಿದೆ. ಇಂತಹ ಮಕ್ಕಳನ್ನು ರಕ್ಷಿಸುವುದು ಇಲಾಖೆ ಮಾತ್ರವಲ್ಲದೇ ಎಲ್ಲರ ಕರ್ತವ್ಯವೂ ಆಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾಗ್ರತರಾಗಬೇಕು. ಬಾಲಕರನ್ನು ಕೆಲಸಕ್ಕೆ ಕಳುಹಿಸದಂತೆ ಎಚ್ಚರ ವಹಿಸಬೇಕು ಎಂದರು.

ಕಾರ್ಮಿಕ ಇಲಾಖೆಯ ಪಿ.ಎಂ. ಈಶ್ವರಯ್ಯ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿಯಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳು, ಅಪರಾಧಗಳಿಗೆ ಆಗುವ ಶಿಕ್ಷೆ ಕುರಿತು ಮಾತನಾಡಿದರು. ಯುನಿಕ್ ಚಾರಿಟಬಲ್ ಟ್ರಸ್ಟ್‌ನ ರಾಘವೇಂದ್ರ ಭಂಡಾರಿ, ಎಸ್‌ಡಿಎಂಸಿ ಅಧ್ಯಕ್ಷ ಕೆ. ಹರೀಶ ಮಾತನಾಡಿದರು. ಉಪ ಪ್ರಾಚಾರ್ಯ ವಿಠ್ಠಲ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ನರೇಗಾ ಎಡಿ ಎಚ್. ವಿಜಯಕುಮಾರ, ಶಿಕ್ಷಣ ಇಲಾಖೆ ಇಸಿಒ ನಿಂಗಪ್ಪ, ಪಪಂ ನಿರೀಕ್ಷಕ ಅಗಡಿ ಮಂಜುನಾಥ ಇದ್ದರು. ಸಿಆರ್‌ಪಿ ಅಣಜಿ ಸಿದ್ದಲಿಂಗಪ್ಪ, ಕಂದಾಯ ಇಲಾಖೆಯ ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿದರು.

ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಎಲ್ಲರಿಗೂ ತಹಸೀಲ್ದಾರ್‌ ಪ್ರಮಾಣವಚನ ಬೋಧಿಸಿದರು.