ಕನ್ನಡಪ್ರಭ ವಾರ್ತೆ ತಿಪಟೂರು
ಆರ್.ಸಿ.ಬಿ ವಿಜಯೋತ್ಸವ ಪೂರ್ವ ಸಿದ್ದತೆ ಇಲ್ಲದೆ 11 ಅಮಾಯಕರ ಸಾವಿಗೆ ಕಾರಣವಾದ ರಾಜ್ಯ ಸರ್ಕಾರದ ವಿರುದ್ದ ಭಾರತೀಯ ಜನತಾ ಪಕ್ಷ ತಾಲೂಕು ಘಟಕದ ವತಿಯಿಂದ ಸೋಮವಾರ ಸಿಂಗ್ರಿ ನಂಜಪ್ಪ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು ಮಾತನಾಡಿ ಹದಿನೆಂಟು ವರ್ಷಗಳ ನಂತರ ಆರ್ಸಿಬಿ ತಂಡ ಕಪ್ ಗೆದ್ದಿದ್ದು ಇದನ್ನು ಸಂಭ್ರಮಿಸುವ ಮೊದಲೇ ರಾಜ್ಯದಲ್ಲಿ ಸೂತಕದ ವಾತಾವರಣ ನಿರ್ಮಾಣವಾಯಿತು. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣವಾಗಿದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರದಿಂದ 11 ಅಮಾಯಕರು ಬಲಿಯಾದರು. ರಾಜ್ಯದ ಪೊಲೀಸ್ ಇಲಾಖೆಯ ಇದಕ್ಕೆ ನೇರ ಹೊಣೆಯಾಗಲಿದೆ. ಕಾಲ್ತುಳಿತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ, ಅವರ ನೋವು, ಕಣ್ಣೀರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಗೆ ತಟ್ಟದೆ ಬಿಡುವುದಿಲ್ಲ. ಸರಿಯಾಗಿ ಸೂಕ್ತ ಬಿಗಿಪೊಲೀಸ್ ಬಂದೋಬಸ್ತ್ ಮಾಡದೇ ಅಮಾಯಕರ ಜೀವವನ್ನು ಬಲಿತೆಗೆದುಕೊಂಡಿದ್ದು ನೋವಿನ ಸಂಗತಿ. ಕೂಡಲೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಅವರು, ಬಿಜೆಪಿ ಪಕ್ಷವು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಈ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಬಳ್ಳೆಕಟ್ಟೆ ಸುರೇಶ್, ನಗರಾಧ್ಯಕ್ಷ ಗುಲಾಬಿ ಸುರೇಶ್, ನಗರಸಭೆ ಸದಸ್ಯರಾದ ಸಂಧ್ಯಾಕಿರಣ್, ಜಯಲಕ್ಷ್ಮಿ, ಸಂಗಮೇಶ್, ಮಾಜಿ ಸದಸ್ಯ ತರಕಾರಿ ಗಂಗಾಧರ್, ಮುಖಂಡರಾದ ಕರಡಿ ದೇವರಾಜು, ಬಿಸಲೇಹಳ್ಳಿ ಜಗದೀಶ್, ಕೆಇಬಿ ಬಸವರಾಜು, ಹಳೇಪಾಳ್ಯ ಜಗದೀಶ್, ಸತೀಶ್, ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.