-ಪ್ರಾಧ್ಯಾಪಕ ಡಾ.ಬಿ.ವಿ. ಮಂಜುನಾಥ ಅಭಿಪ್ರಾಯ । ಅನುಭಾವ ಶ್ರಾವಣ ಶರಣ ಚಿಂತನ ಮಾಲಿಕೆ ಕಾರ್ಯಕ್ರಮ
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಉಳಿವಿಗಾಗಿ ಭಾಲ್ಕಿಯ ಲಿಂಗೈಕ್ಯ ಡಾ. ಚೆನ್ನಬಸವ ಪಟ್ಟದೇವರು ನಡೆಸಿದ ಹೋರಾಟ ಸ್ಮ್ರರಣೀಯವೆಂದು ಪ್ರಾಧ್ಯಾಪಕ ಡಾ.ಬಿ.ವಿ. ಮಂಜುನಾಥ ಅಭಿಪ್ರಾಯಪಟ್ಟರು.
ಬಸವಕೇಂದ್ರ ಮುರುಘಾಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಲಾದ ಚಿಂತನಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರುಅಂದಿನ ಹೈದರಾಬಾದಿನ ನಿಜಾಮನ ಆಳ್ವಿಕೆಯಲ್ಲಿ ಆ ಭಾಗದಲ್ಲಿ ಕನ್ನಡ ಕಲಿಸುವುದೇ ಅಪರಾಧವಾಗಿತ್ತು.ಶಾಲೆಯ ಹೊರಗೆ ಉರ್ದು ನಾಮಫಲಕ ಅಳವಡಿಸಿ, ಒಳಗೆ ಕನ್ನಡವನ್ನು ಕಲಿಸುವ ಮೂಲಕ ಕನ್ನಡದ ಬಗೆಗಿನ ಅವರಲ್ಲಿದ್ದ ಅಭಿಮಾನದ ಜ್ಯೋತಿಯನ್ನು ಬೆಳಗಿಸಿದರು. ಹೀಗಾಗಿ ಅವರು ಕನ್ನಡದ ಪಟ್ಟದೇವರು ಎಂದೇ ಖ್ಯಾತರಾದರು. ಕನ್ನಡ ಭಾಷೆಯ ಮೇಲಿನ ಅವರ ಪ್ರೀತಿ ಕೇವಲ ಅಭಿಮಾನವಾಗಿರದೆ, ಕನ್ನಡಿಗರ ಅಸ್ಮಿತೆಯ ಹೋರಾಟವಾಗಿತ್ತು ಎಂದರು.
ಪಟ್ಟದೇವರ ಬಸವತತ್ವದ ಆಚರಣೆಯೂ ಅನುಕರಣೀಯವಾಗಿತ್ತು. ಹಿಂದಿನ ತೆಲಂಗಾಣ ರಾಜ್ಯದ ನಾರಾಯಣಖೇಡ ತಾಲೂಕಿನ ನಾಗೂರು ಗ್ರಾಮದ ಹನುಮಾನ್ ದೇವಾಲಯದಲ್ಲಿ ನಡೆದ ಶಿವಾನುಭವ ಗೋಷ್ಠಿಯ ಸಂದರ್ಭದಲ್ಲಿ ಎಲ್ಲರೂ ಪ್ರಸಾದ ಸ್ವೀಕರಿಸಿದರೂ, ದಲಿತರು ಮಾತ್ರ ಮುಂದೆ ಬರಲು ಹಿಂದೇಟು ಹಾಕಿದರು. ಆಗ ಪಟ್ಟದೇವರು, ನೀವು ಬಂದು ಪ್ರಸಾದ ಸ್ವೀಕರಿಸದೆ ಹೋದರೆ ನಾನು ಇಲ್ಲಿಂದ ಕದಲುವುದಿಲ್ಲ ಎಂದು ದೃಢವಾಗಿ ನಿಂತರು. ಕೊನೆಗೆ ದಲಿತರೆಲ್ಲರೂ ಬಂದು ದೇವಾಲಯದ ಜಗಲಿ ಕಟ್ಟೆಯ ಮೇಲೆ ಕುಳಿತಿದ್ದ ಪೂಜ್ಯರಿಂದ ಪ್ರಸಾದ ಸ್ವೀಕರಿಸಿದರು. ಇದರಿಂದ ಕೆಲ ಮೇಲ್ವರ್ಗದವರು ಅಸಮಾಧಾನಗೊಂಡಾಗ, ಪಟ್ಟದೇವರು ಅಣ್ಣನವರ ಇವನಾರವ, ಇವನಾರವ ಎಂಬ ವಚನದ ಆಶಯವನ್ನು ತಿಳಿಸಿ, ಬಸವತತ್ವದ ನಿಜವಾದ ಅರ್ಥವನ್ನು ಮನವರಿಕೆ ಮಾಡಿಕೊಟ್ಟರು. ಅಷ್ಟೇ ಅಲ್ಲದೆ, ಪೂಜಾ ಕೊಠಡಿಯ ಸೇವಾ ಕಾರ್ಯಗಳಲ್ಲಿಯೂ ದಲಿತರನ್ನು ಒಳಗೊಳ್ಳುವ ಮೂಲಕ ಸಮಾನತೆ, ಸಹೋದರತ್ವ ಮತ್ತು ಕಾಯಕದ ಬಸವತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರು.
ಮುರುಘಾಮಠದ ಖಾಸಾಮಠವಾದ ಗುರುಮಠಕಲ್ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳವರು, ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಜಗದ್ಗುರು ಮುರುಘರಾಜೇಂದ್ರ ಗುರುಕುಲದ ಸಾಧಕರಾದ ಗಂಗಾಧರ ದೇವರು ಮಾತನಾಡಿದರು.
--------------
ಬಸವಕೇಂದ್ರ ಮುರುಘಾಮಠದಲ್ಲಿ ನಡೆದ ಅನುಭಾವ ಶ್ರಾವಣ ಶರಣ ಚಿಂತನ ಮಾಲಿಕೆ ಕಾರ್ಯಕ್ರಮಲ್ಲಿ ಪ್ರಾಧ್ಯಾಪಕ ಡಾ.ಬಿ.ವಿ.ಮಂಜುನಾಥ ಮಾತನಾಡಿದರು.