ಪಾವಗಡ: 5 ಅಶ್ವಮೇಧ ಕ್ಲಾಸಿಕ್‌ ಬಸ್‌ಗಳಿಗೆ ಶಾಸಕ ಚಾಲನೆ

KannadaprabhaNewsNetwork | Published : Feb 25, 2024 1:46 AM

ಸಾರಾಂಶ

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಐದು ನೂತನ ಅಶ್ವಮೇಧ ಕ್ಲಾಸಿಕ್‌ ಬಸ್‌ ಹಾಗೂ ಗ್ರಾಮೀಣ ಗಡಿ ಭಾಗಕ್ಕೆ ಎರಡು ಕೆಎಸ್‌ಆರ್‌ಟಿಸಿ ಬಸ್‌ ಸೇರಿ ಒಟ್ಟು ಏಳು ಸರ್ಕಾರಿ ಬಸ್‌ ಸಂಚಾರಕ್ಕೆ ಶನಿವಾರ ಶಾಸಕ ಎಚ್.ವಿ. ವೆಂಕಟೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಪ್ರಯಾಣಿಕರಿಗೆ ಅನುಕೂಲವಾಗುವಂತೆ ಐದು ನೂತನ ಅಶ್ವಮೇಧ ಕ್ಲಾಸಿಕ್‌ ಬಸ್‌ ಹಾಗೂ ಗ್ರಾಮೀಣ ಗಡಿ ಭಾಗಕ್ಕೆ ಎರಡು ಕೆಎಸ್‌ಆರ್‌ಟಿಸಿ ಬಸ್‌ ಸೇರಿ ಒಟ್ಟು ಏಳು ಸರ್ಕಾರಿ ಬಸ್‌ ಸಂಚಾರಕ್ಕೆ ಶನಿವಾರ ಶಾಸಕ ಎಚ್.ವಿ. ವೆಂಕಟೇಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ರಾಜ್ಯ ಸರ್ಕಾರದ ಅಶ್ವಾಷನೆಯಂತೆ, ಕೆಎಸ್‌ಆರ್‌ಟಿಸಿ ಸಾರಿಗೆ ನಿಗಮದ ವತಿಯಿಂದ ಪಾವಗಡ ಘಟಕಕ್ಕೆ ಐದು ಅಶ್ವಮೇಧ ಸರ್ಕಾರಿ ಬಸ್ ನೀಡಲಾಗಿದೆ. ಬೆಳಿಗ್ಗೆ, ಸಂಜೆ ಹೀಗೆ ವೇಳಾಪಟ್ಟಿ ಅನ್ವಯ, ಪಾವಗಡ-ಬೆಂಗಳೂರು ಹಾಗೂ ಪಾವಗಡ-ಧರ್ಮಸ್ಥಳ ಮತ್ತು ಪಾವಗಡ-ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸಲು ಸಜ್ಜಾಗಿವೆ.

ಈ ಸಂದರ್ಭದಲ್ಲಿ ಖಾಸಗಿ ಬಸ್ ನಿಲ್ದಾಣದಿಂದ ಶ್ರೀ ಶನೇಶ್ವರಸ್ವಾಮಿ ವೃತ್ತದವರೆವಿಗೆ ಮತ್ತು ಅಲ್ಲಂದ ಮತ್ತೆ ಬಸ್‌ ನಿಲ್ದಾಣಕ್ಕೆ ಶಾಸಕ ವೆಂಕಟೇಶ್ ತಾವೇ ಸ್ವತಃ ಬಸ್ ಚಾಲನೆ ಮಾಡಿ ನೂತನ ಬಸ್‌ನ ಕಂಡಿಷನ್‌ ಬಗ್ಗೆ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಜನ ಸಾಮಾನ್ಯರ ಬೇಡಿಕೆ ಪರಿಗಣಿಸಿ ಸಚಿವ ಹಾಗೂ ಸರ್ಕಾರದ ಗಮನ ಸೆಳೆದ ಮೇರೆಗೆ 10 ಬಸ್‌ಗಳ ಪೈಕಿ 7 ಕೆಎಸ್‌ಆರ್‌ಟಿಸಿ ನೂತನ ಬಸ್‌ ತಾಲೂಕಿಗೆ ಕಲ್ಪಿಸಿದ್ದಾರೆ. ಈ ಪೈಕಿ 5 ಸರ್ಕಾರಿ ಅಶ್ವಮೇಧ ಬಸ್‌ ಪಾವಗಡ ವಿವಿಧೆಡೆಗೆ ಸಂಚರಿಸಲಿವೆ. ಮೈಸೂರು, ಆಂಧ್ರದ ಆನಂತಪುರ ಹಾಗೂ ಮಂತ್ರಾಲಯ ಮಾರ್ಗದ ಬಸ್‌ ಸೌಲಭ್ಯಕ್ಕೆ ಸರ್ಕಾರದ ಗಮನ ಸೆಳೆದಿದ್ದೇನೆ. ಅಗತ್ಯತೆ ಪರಿಗಣಿಸಿ ಇನ್ನೂ ಹೆಚ್ಚಿನ ಬಸ್‌ ನಿಯೋಜನೆಗೆ ಸಚಿವರಾದ ರಾಮಲಿಂಗರೆಡ್ಡಿ ಹಾಗೂ ವಾಸು ಅವರಲ್ಲಿ ಮನವಿ ಮಾಡಲಾಗುವುದಾಗಿ ಹೇಳಿದರು.

ಗ್ರಾಮೀಣ ಭಾಗಗಳಿಗೆ ಸರ್ಕಾರಿ ಬಸ್ ಸೌಲಭ್ಯಕ್ಕೆ ಕ್ರಮವಹಿಸಿದ್ದು, ಈಗಾಗಲೇ ನಿಡಗಲ್‌ ಹೋಬಳಿ ಗಡಿ ಮತ್ತು ಇತರೆ ಹಳ್ಳಿಗಳಿಗೆ ಸರ್ಕಾರಿ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಸರ್ಕಾರಿ ಬಸ್‌ ನಿಲ್ದಾಣದ ಕೊರತೆಯಿಂದ ಸದ್ಯ ಪುರಸಭೆ ವ್ಯಾಪ್ತಿಗೆ ಒಳಪಟ್ಟ ಖಾಸಗಿ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಇದೇ ಫೆ 29ರಂದು ಪುರಸಭೆ ಸದಸ್ಯರ ಸಭೆ ಏರ್ಪಾಡಿಸಿದ್ದು, ಸಭೆಯಲ್ಲಿ ಚರ್ಚಿಸಿ ಸದಸ್ಯರ ಸಹಕಾರದ ಮೇರೆಗೆ ಶೀಘ್ರ ಪಟ್ಟಣದ ಹಳೇ ಸಂತೆ ಮೈದಾನದ ಸ್ಥಳದಲ್ಲಿ ಸರ್ಕಾರಿ ಬಸ್‌ ನಿಲ್ದಾಣಕ್ಕೆ ಅಗತ್ಯ ಕ್ರಮವಹಿಸುವುದಾಗಿ ಹೇಳಿದರು.

ಕೆಎಸ್‌ಆರ್‌ಟಿಸಿ ಜಿಲ್ಲಾ ಘಟಕದ ಡಿಸಿ ಮಾತನಾಡಿ, ಕೆಎಸ್‌ಆರ್‌ಟಿಸಿ ಪ್ರತ್ಯೇಕ ನಿಲ್ದಾಣಕ್ಕೆ ಕ್ರಮವಹಿಸಿದ್ದು, ಮೂರು ಎಕರೆ ಜಾಗ ಕಲ್ಪಿಸಿದರೆ ಸರ್ಕಾರದ ನಿಯಮನುಸಾರ ಶೀಘ್ರ ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಸರ್ಕಾರದ ಗಮನ ಸಳೆಯುವುದಾಗಿ ಹೇಳಿದರು.

ಇದೇ ವೇಳೆ ಆನೇಕ ಮಂದಿ ಇಲ್ಲಿನ ಸರ್ಕಾರಿ ಬಸ್‌ಗಳ ಕೊರತೆ ಮತ್ತು ನಿರ್ವಹಣೆ ಕುರಿತು ಘಟಕದ ಡಿಸಿಯ ಗಮನ ತಂದರು. ಈ ವೇಳೆ ತಾ,ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್ ಬಾಬು, ಪುರಸಭೆ ಸದಸ್ಯರಾದ ಪಿ.ಎಚ್‌. ರಾಜೇಶ್‌, ತೆಂಗಿನಕಾಯಿ ರವಿ, ಮುಖಂಡರಾದ ಎ. ಶಂಕರರೆಡ್ಡಿ, ವೆಂಕಟಮ್ಮನಹಳ್ಳಿಯ ಬತ್ತಿನೇನಿ ನಾಗೇಂದ್ರರಾವ್‌, ಪುರಸಭೆ ಸದಸ್ಯ ಮಹಮ್ಮದ್‌ ಇಮ್ರಾನ್‌, ಜಿಲ್ಲಾ ಘಟಕದ ಷಾಬಾಬು ಹಾಗೂ ಇಲ್ಲಿನ ಸಾರಿಗೆ ಘಟಕದ ವ್ಯವಸ್ಥಾಪಕ ಹನುಮಂತರಾಯಪ್ಪ ಇತರೆ ಆನೇಕ ಮಂದಿ ಉಪಸ್ಥಿತರಿದ್ದರು.

Share this article