ಹಾವೇರಿ: ಬಿಜೆಪಿಯವರಿಗೆ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಗಳು, ಗ್ಯಾರಂಟಿ ಯೋಜನೆಗಳು ಕಾಣಿಸುತ್ತಿಲ್ಲ. ಅವರಿಗೆ ಜಗತ್ತೆಲ್ಲಾ ಹಳದಿಯಾಗಿ ಕಾಣಿಸುತ್ತಿದೆ. ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಾಮಾಲೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಕಿಡಿಕಾರಿದರು.

ನಗರದ ಹೊರವಲಯದಲ್ಲಿ ಸರ್ಕಾರದ ಸಮಾವೇಶ ನಡೆಯುವ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣಗಳ ಸರಮಾಲೆ ಹೊತ್ತ ಕಾಂಗ್ರೆಸ್ ಸರ್ಕಾರದಿಂದ ಶೂನ್ಯ ಸಮಾವೇಶ ಎಂಬ ಬಿಜೆಪಿ ಜಿಲ್ಲಾಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದರು.ಕಾಂಗ್ರೆಸ್ ಸರ್ಕಾರ 2023ರಲ್ಲಿ ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರಂಟಿ ಯೋಜನೆಗಳ ಜತೆಗೆ ಆರನೇ ಗ್ಯಾರಂಟಿಯಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಎರಡನೇ ಬಾರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡುತ್ತಿದ್ದೇವೆ. ಅನೇಕ ವರ್ಷಗಳಿಂದ ಭೂ ರಹಿತರಾಗಿದ್ದ ಬಡ ಜನರಿಗೆ ಹಕ್ಕು ಪತ್ರ ಕೊಡುವುದರ ಜತೆಗೆ ಆ ಜಾಗೆಯನ್ನು ಖರೀದಿ ಮಾಡಿಸಿ ಈ ಸ್ವತ್ತು ಮಾಡಿಸಿಕೊಡುವ ಮಹತ್ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಇಂದು ಮಾಡುತ್ತಿದೆ ಎಂದರು.ಹಾಡಿ, ಹಟ್ಟಿ, ಮಜಿರೆ, ದೊಡ್ಡಿ, ಪಾಳ್ಯ ಮೊದಲಾಗಿ ದಾಖಲೆರಹಿತ ಗ್ರಾಮಗಳಿಗೆ ದಾಖಲೆ ಕೊಡಬೇಕು ಎಂಬುದು ನಮ್ಮ ಸರ್ಕಾರದ ಸಂಕಲ್ಪ. ಈ ಮೊದಲು ಸಿದ್ದರಾಮಯ್ಯ ಅವರ ಅವಧಿಯಲ್ಲಿಯೂ ಹಕ್ಕುಪತ್ರ ನೀಡುವ ಕೆಲಸ ಆಗಿತ್ತು. ಪ್ರಸ್ತುತ ಕೃಷ್ಣ ಬೈರೇಗೌಡರು ಕಂದಾಯ ಸಚಿವರಾಗಿರುವ ಇ ಸ್ವತ್ತು ಮಾಡಿ ಹಕ್ಕುಪತ್ರ ನೀಡುತ್ತಿರುವುದು ಸಂತಸದ ವಿಷಯ ಎಂದರು.ಜಿಲ್ಲೆಯ ಒಟ್ಟು 50 ಸಾವಿರ ಫಲಾನುಭವಿಗಳ ಪೈಕಿ 20 ಸಾವಿರಕ್ಕೂ ಹೆಚ್ಚು ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆ, 7825 ಇ ಪೌತಿ, 525 ಸರ್ಕಾರದ ಮಂಜೂರಾದ ಜಮೀನಿಗೆ ದರಕಾಸ್ತ್ ಪೋಡಿ ಮುಕ್ತ, 1675 ಪ್ರತ್ಯೇಕ ಪಹಣಿ, ಬಗರ್‌ಹುಕುಂ, 16 ಬಗರ್ ಹುಕುಂ ಪ್ರಕರಣ ಸೇರಿವೆ ಎಂದರು.ಹಾವೇರಿ ಜಿಲ್ಲೆಯಲ್ಲಿ ಎರಡೂವರೆ ವರ್ಷಗಳಲ್ಲಿ 4 ಸಾವಿರ ಕೋಟಿ ರು.ಗಿಂತಲೂ ಹೆಚ್ಚು ಅನುದಾನ ತಂದು, ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್, ಹಿರೇಕೆರೂರ-ರಟ್ಟೀಹಳ್ಳಿ, ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ಅನೇಕ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. ಇಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗಲೇ ಬಿಜೆಪಿ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಬಗ್ಗೆ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.