ಸಾಗರ: ಬೆಳೆಗಳ ಕಾಯಿಲೆಗೆ ಔಷಧಿ ಇಲ್ಲದಿರುವುದರಿಂದ ದೇಶಕ್ಕೆ ಲಕ್ಷಾಂತರ ಕೋಟಿ ರು. ನಷ್ಟು ನಷ್ಟವಾಗುತ್ತಿದೆ. ಯಾವ ದೇಶದಲ್ಲಿ ಬೆಳೆ ಆರೋಗ್ಯ ಮತ್ತು ಸಮೃದ್ಧಿ ಇರಲಿದೆಯೋ ಅಲ್ಲಿ ಸಹಜವಾಗಿ ಮನುಷ್ಯನ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗಾಗಿ ಆಹಾರ ಉತ್ಪನ್ನಗಳ ಆರೋಗ್ಯಕ್ಕೂ ಗಮನಹರಿಸಬೇಕು ಎಂದು ಭಾರತ ಸರಕಾರದ ಪ್ರಧಾನಮಂತ್ರಿ ವೈಜ್ಞಾನಿಕ ಸಲಹೆಗಾರ ಕಚೇರಿಯ ಡಾ.ಸಿಂಧೂರು ಗಣಪತಿ ಹೇಳಿದರು.
ದೇಶದಲ್ಲಿ ಈಗಾಗಲೇ ಜಾನುವಾರುಗಳ ಕಾಲುಬಾಯಿ ರೋಗಕ್ಕೆ ಉತ್ತಮ ಲಸಿಕೆ ಕಂಡು ಹಿಡಿಯಲಾಗಿದೆ. ಪ್ರಸ್ತುತ ಮಂಗನ ಕಾಯಿಲೆಗೆ ಲಸಿಕೆ ಕಂಡು ಹಿಡಿಯುವ ಕಾರ್ಯವು ಮುಕ್ತಾಯದ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಕ್ಷೇತ್ರ ಹೊರನಾಡು ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಷಿ, ಭಾರತದ ಆಹಾರ ಪದ್ಧತಿಯೇ ವಿಶೇಷವಾದದ್ದು. ಪ್ರತಿ ಮಾಸದಲ್ಲಿ ಯಾವ ರೀತಿಯ ಆಹಾರ ಬಳಸಬೇಕು ಎನ್ನುವುದನ್ನು ನಮ್ಮ ಆಹಾರ ವಿಜ್ಞಾನ ಮತ್ತು ಆಯುರ್ವೇದ ಹಾಗೂ ಶಾಸ್ತ್ರ ಹೇಳಿದೆ. ಆದರೆ ಇಂದು ನಮ್ಮ ನಾಲಿಗೆಯ ಚಪಲಕ್ಕೆ ಬಲಿಯಾಗಿ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕ ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಮಲೆನಾಡು ಅಭಿವೃದ್ದಿ ಪ್ರತಿಷ್ಠಾನದ ಗೌರವಾಧ್ಯಕ್ಷ ಹರನಾಥ್ರಾವ್, ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ವಿಷುಕುಮಾರ್, ತೋಟಗಾರಿಕೆಯ ಜಂಟಿ ನಿರ್ದೇಶಕ ಡಾ.ಸಂಜಯ್, ಹಿರಿಯ ವಿಜ್ಞಾನಿಗಳಾದ ಡಾ.ಸುನೀಲ್, ಸುಧಾರಾಣಿ, ಶಿವಪ್ರಕಾಶ್, ಭರತ್ ನಾಡಿಗ್, ಮಹಿಳಾ ಉದ್ಯಮಿ ಪ್ರತಿಭಾ, ತ್ರಯಂಬಕ ಇತರಿರಿದ್ದರು.